ADVERTISEMENT

’ಯೋಗ ದಿನ ಹಬ್ಬದಂತೆ ಆಚರಣೆ‘

21ರಂದು ಏಕಕಾಲಕ್ಕೆ 5 ಸಾವಿರ ಜನಕ್ಕೆ ಯೋಗ ಮಾಡಲು ವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 17 ಜೂನ್ 2019, 13:24 IST
Last Updated 17 ಜೂನ್ 2019, 13:24 IST

ಹೊಸಪೇಟೆ: ’ಐದನೇ ಅಂತರರಾಷ್ಟ್ರೀಯ ಯೋಗ ದಿನವನ್ನು ರಾಷ್ಟ್ರೀಯ ಹಬ್ಬದ ರೀತಿಯಲ್ಲಿ ಆಚರಿಸಲಾಗುವುದು. ಇದೇ 21ರಂದು ನಗರದ ಮುನ್ಸಿಪಲ್‌ ಮೈದಾನದಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಏಕಕಾಲಕ್ಕೆ ಐದು ಸಾವಿರ ಜನ ಯೋಗ ಮಾಡಲು ವ್ಯವಸ್ಥೆ ಮಾಡಲಾಗಿದೆ‘ ಎಂದು ಪತಂಜಲಿ ಯೋಗ ಸಮಿತಿ ರಾಜ್ಯ ಪ್ರಭಾರಿ ಭವರಲಾಲ್‌ ಆರ್ಯ ತಿಳಿಸಿದರು.

ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ’ಕೊಟ್ಟೂರು ಸಂಸ್ಥಾನ ಮಠದ ಸಂಗನಬಸವ ಸ್ವಾಮೀಜಿ, ಸಂಸದ ವೈ. ದೇವೇಂದ್ರಪ್ಪ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಅಂದು ಬೆಳಿಗ್ಗೆ 5.30ರಿಂದ 7.30ರ ವರೆಗೆ ಕಾರ್ಯಕ್ರಮ ಜರುಗಲಿದೆ. ಜನರ ಅನುಕೂಲಕ್ಕಾಗಿ ಸಾರಿಗೆ ವ್ಯವಸ್ಥೆ ಸಹ ಮಾಡಲಾಗಿದೆ‘ ಎಂದು ಮಾಹಿತಿ ನೀಡಿದರು.

’19ರಂದು ಸಂಜೆ 5.30ಕ್ಕೆ ನಗರದ ವಡಕರಾಯ ದೇವಸ್ಥಾನದಿಂದ ಮುನ್ಸಿಪಲ್‌ ಮೈದಾನದ ವರೆಗೆ ಪಥ ಸಂಚಲನ ಹಮ್ಮಿಕೊಂಡಿದ್ದು, ಯೋಗ ದಿನಾಚರಣೆ ಕುರಿತು ಅರಿವು ಮೂಡಿಸಲಾಗುವುದು. ಇಂದು ಪ್ರತಿಯೊಬ್ಬರೂ ಯೋಗ ಮಾಡುತ್ತಿದ್ದಾರೆ. ಜಾತಿ, ಮತ, ಪಂಥ ಎಂಬ ಭೇದವಿಲ್ಲದೆ ಎಲ್ಲರೂ ಯೋಗ್ಯಾಭ್ಯಾಸ ಮಾಡುತ್ತಿದ್ದಾರೆ. ಯೋಗ ಇಡೀ ವಿಶ್ವದ ಜನರನ್ನು ಬೆಸೆದಿದೆ‘ ಎಂದರು.

ADVERTISEMENT

’ನೂರಾರು ವರ್ಷಗಳ ಹಿಂದಿನಿಂದಲೂ ಯೋಗ ಇದೆ. ಅದನ್ನು ಆಂದೋಲನದ ರೂಪದಲ್ಲಿ ಮನೆ ಮನೆಗೆ ತಲುಪಿಸಿದವರು ಬಾಬಾ ರಾಮದೇವ. ಅದಕ್ಕೆ ಜಾಗತಿಕ ಮನ್ನಣೆ ಕೊಡಿಸಲು ಪ್ರಯತ್ನಿಸಿದವರು ಪ್ರಧಾನಿ ನರೇಂದ್ರ ಮೋದಿಯವರು. ಇಂದು ಜಗತ್ತಿನ 120 ರಾಷ್ಟ್ರಗಳ ಜನ ಯೋಗ್ಯಾಭ್ಯಾಸ ಮಾಡುತ್ತಾರೆ‘ ಎಂದು ಹೇಳಿದರು.

ಮುಖಂಡರಾದ ಅಶೋಕ್‌ ಜೀರೆ, ಭೂಪಾಳ್‌ ರಾಘವೇಂದ್ರ ಶೆಟ್ಟಿ, ಎಚ್‌. ಶ್ರೀನಿವಾಸರಾವ್‌, ಸಾಲಿ ಸಿದ್ದಯ್ಯ ಸ್ವಾಮಿ, ಅನಂತ ಪದ್ಮನಾಭ, ದಾಕ್ಷಾಯಿಣಿ, ಬಸವರಾಜ ನಾಲತ್ವಾಡ, ಎಸ್‌.ಎಂ. ಶಶಿಧರ್‌, ಬಾಲಚಂದ್ರ ಶರ್ಮಾ, ಕೃಷ್ಣ ನಾಯ್ಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.