ADVERTISEMENT

ದೇವನಹಳ್ಳಿ: ಆಲೂಗಡ್ಡೆ ಬೆಳೆ: ತರಲಿದೆಯೇ ಲಾಭದ ಸೆಲೆ?

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2011, 19:30 IST
Last Updated 10 ಸೆಪ್ಟೆಂಬರ್ 2011, 19:30 IST
ದೇವನಹಳ್ಳಿ: ಆಲೂಗಡ್ಡೆ ಬೆಳೆ: ತರಲಿದೆಯೇ ಲಾಭದ ಸೆಲೆ?
ದೇವನಹಳ್ಳಿ: ಆಲೂಗಡ್ಡೆ ಬೆಳೆ: ತರಲಿದೆಯೇ ಲಾಭದ ಸೆಲೆ?   

ದೇವನಹಳ್ಳಿ: ಹೊಸ ಪ್ರಯೋಗಕ್ಕೆ ನಾಂದಿ ಹಾಡಿ ಕೈ ಸುಟ್ಟುಕೊಂಡಿದ್ದ ಇಲ್ಲಿನ ರೈತರೀಗ ಲಾಭದ ಕನಸು ಕಾಣುತ್ತಿದ್ದಾರೆ. ಅವಧಿಗೂ ಮುನ್ನವೇ ತಾಲ್ಲೂಕಿನಾದ್ಯಂತ ಆಲೂಗಡ್ಡೆ ಬೆಳೆಯಲು ನಿಶ್ಚಯಿಸಿರುವ ರೈತರು ಆರ್ಥಿಕ ಚೈತನ್ಯ ಕಾಣುವ ನಿರೀಕ್ಷೆಯಲ್ಲಿದ್ದಾರೆ.

ತಾಲ್ಲೂಕಿನಾದ್ಯಂತ 500ಹೆಕ್ಟೇರ್ ಪ್ರದೇಶದಲ್ಲಿ ಆಲೂಗಡ್ಡೆ ಬಿತ್ತನೆ ಮಾಡಲು ರೈತರು ನಿರ್ಧರಿಸಿದ್ದಾರೆ. ಹವಾಮಾನ ವೈಪರೀತ್ಯ ಎದುರಾಗದೇ ಇದ್ದರೆ ರೈತರು ಲಾಭ ಪಡೆಯುವುದರಲ್ಲಿ ಸಂದೇಹವೇ ಇಲ್ಲ ಎಂಬುದು ತೋಟಗಾರಿಕೆ ಇಲಾಖೆ ಅಭಿಪ್ರಾಯ.

ಬಿತ್ತನೆ ಸೂಕ್ತ ಕಾಲ: `ಅಕ್ಟೋಬರ್, ನವೆಂಬರ್ ಮತ್ತು ಡಿಸೆಂಬರ್ ಕೊನೆಯ ವಾರದವೆಗೂ ಆಲೂಗಡ್ಡೆ ಬಿತ್ತನೆಗೆ ಸೂಕ್ತಕಾಲವಾಗಿದೆ. ಆದರೆ ರೈತರು ಅನೇಕ ಕಡೆಗಳಲ್ಲಿ ಈಗಾಗಲೇ ಬಿತ್ತನೆಗೆ ಮುಂದಾಗಿದ್ದಾರೆ.

ರೈತರು ಕತ್ತರಿಸಿದ ಬೀಜಗಳನ್ನು ಬಿತ್ತನೆ ಮಾಡದೆ  ಅಗತ್ಯಪ್ರಮಾಣದ ಸಣ್ಣ ಗಾತ್ರದ ಬೀಜ ಬಿತ್ತನೆ ಮಾಡುತ್ತಿದ್ದಾರೆ, ಇದು ಸೂಕ್ತವೆ ಆದರೂ ಚಿಕ್ಕಬಳ್ಳಾಪುರ, ಎ.ಪಿ.ಎಂ.ಸಿ ಮಾರುಕಟ್ಟೆ ಹಾಗೂ ಕೋಲಾರದಲ್ಲಿ ಬಿತ್ತನೆ ಬೀಜಗಳು ಲಭ್ಯವಿದೆ. ರೈತರು ಸಮೀಪದ ಬೀಜೋತ್ಪನ್ನ ಮಾರುಕಟ್ಟೆಯಲ್ಲಿ ಪಡೆಯಬಹುದು.

ಕಳೆದ ಸಾಲಿನಲ್ಲಿ 450ಹೆಕ್ಟೇರ್ ಪ್ರದೇಶದಲ್ಲಿ ಆಲೂಗಡ್ಡೆ ಬೆಳೆ ಬೆಳೆಯಲಾಗಿತ್ತು. ಅಕಾಲಿಕವಾಗಿ ಮಳೆ ಬರದ ಕಾರಣ ರೈತರು ಲಾಭ ಪಡೆದರು. ಹಾಗಾಗಿ ಈ ಸಲ 50ಹೆಕ್ಟೇರ್ ಪ್ರದೇಶದಲ್ಲಿ ಕೃಷಿಕರು ಆಲೂಗಡ್ಡೆ ಬೆಳೆಯಲು ಚಿಂತಿಸುತ್ತಿದ್ದಾರೆ.

ಬಿತ್ತನೆ ಬಗ್ಗೆ ಈಗಾಗಲೇ ರೈತರಿಗೆ ತಿಳುವಳಿಕೆ ನೀಡಲಾಗಿದೆ. ಆದರೂ ಇಳುವರಿಯಲ್ಲಿ ಪ್ರಮುಖ ಪಾತ್ರವಾಗಿರುವ ಬೀಜಗಳ ಬಗ್ಗೆ ಎಚ್ಚರವಚಹಿಸುದು ಸೂಕ್ತ~ ಎನ್ನುತ್ತಾರೆ ತೋಟಗಾರಿಕಾ ಅಧಿಕಾರಿ ಗೋಪಾಲಯ್ಯ ಹಾಗೂ ಉಮಾಪತಿ.

ತಳಿಗಳು: ಕುಫ್ರಿ ಚಂದ್ರಮುಖಿ, ಕುಫ್ರಿ ಸಿಂಧೂರಿ, ಕುಫ್ರಿ ಪುಕರಾಜ್, ಕುಫ್ರಿ ಜವಾಹರ್, ಕುಫ್ರಿ ಲವಕರ್ ತಳಿಯ ಆಲೂಗಡ್ಡೆಗಳ ಬೆಲೆ ಲಾಭದಾಯಕವಾಗಿದೆ.

ತಾಲ್ಲೂಕಿನ ಹವಾಮಾನ ಹಾಗೂ ಮಣ್ಣಿನ ಫಲವತ್ತತೆಯ ಗುಣಮಟ್ಟಕ್ಕನುಗುಣವಾಗಿ ಕುಫ್ರಿ ಜ್ಯೋತಿ ಅತ್ಯುತ್ತಮ ತಳಿಯಾಗಿದೆ. ಇಳುವರಿ ಗರಿಷ್ಠ ಪ್ರಮಾಣದಲ್ಲಿರುತ್ತದೆ. ಕುಫ್ರಿಜ್ಯೋತಿ ತಳಿ ಲಕ್ಷಣ: ಭಿತ್ತನೆ ಮಾಡಿದ ನಂತರ 95 ರಿಂದ 100 ದಿನಗಳಲ್ಲಿ ಕೊಯ್ಲಿಗೆ ಬರುವ ತಳಿ ಇದಾಗಿದೆ. ಗಡ್ಡೆ ಗಾತ್ರ ದೊಡ್ಡದಾಗಿರುತ್ತದೆ. ಅಂಡಾಕಾರ ಹೊಂದಿ ಚಪ್ಪಟೆಯಾಗಿರುತ್ತದೆ. ಕೊನೆಗೆ ಅಂಗಮಾರಿ ರೋಗವನ್ನು ತಡೆದುಕೊಳ್ಳುವ ಶಕ್ತಿಯನ್ನು ಈ ತಳಿಯ ಆಲೂಗಡ್ಡೆ ಹೊಂದಿದೆ.

ಬಿತ್ತನೆ ಹಾಗೂ ಗೊಬ್ಬರ ನೀಡುವ ವಿಧಾನ : ಸಾಲಿನಿಂದ ಸಾಲಿಗೆ ಒಂದೂವರೆ ಅಡಿ ಸ್ಥಳ ಬಿಟ್ಟು ಒಂದು ಅಡಿ ಅಂತರದಲ್ಲಿ ಬೀಜ ಬಿತ್ತನೆ ಮಾಡಬೇಕು. ಇಲಾಖೆ ಶಿಫಾರಸ್ಸಿನಂತೆ ಗೊಬ್ಬರ ಮತ್ತು ನೀರು ನೀಡಬೇಕು.

ಕೀಟ ಮತ್ತು ರೋಗದ ಬಗ್ಗೆ ಈಗಾಗಲೇ ತಿಳಿಸಿರುವಂತೆ ಕ್ರಮ ಕೈಗೊಳ್ಳಬೇಕು. ಆದರೆ ಗಡ್ಡೆ ಪ್ರಮಾಣ ಗಾತ್ರ ಹೆಚ್ಚಿಸಲು ಹಾಗೂ ಹಸಿರು ಬಣ್ಣ ತಡೆಗಟ್ಟಲು 30 ರಿಂದ35 ದಿನದಲ್ಲಿ ಮಣ್ಣು ಸಾಲುಗಳಿಗೆ ಏರಿಸುವುದು ಮರೆಯಬಾರದು.

ಎರಡು ಎಕರೆ ಕುಫ್ರಿ ಜ್ಯೋತಿ ಆಲೂಗಡ್ಡೆ ಬಿತ್ತನೆ ಮಾಡಲಾಗುತ್ತಿದೆ. ಬೀಜ, ಗೊಬ್ಬರ, ಕೂಲಿ ಸೇರಿ 40-50 ಸಾವಿರ ರೂ ಖರ್ಚಾಗಿದೆ. ಸತತ ಐದು ವರ್ಷದಿಂದ ಬೆಳೆಯುತ್ತಿದ್ದೆನೆ. ಮಾರುಕಟ್ಟೆ ಬೆಲೆ ಕೆಲವೊಮ್ಮೆ ಏರುಪೇರಾಗಿರುತ್ತದೆ. ತೊಂದರೆ ಇಲ್ಲ.

 ಕೆ.ಜಿ.ಗೆ 4 ರಿಂದ 5ರೂಪಾಯಿ ಲಾಭ ಸಿಕ್ಕರೆ ಸಾಕು ಎನ್ನುತ್ತಾರೆ ಮೂಡಿಗಾನಹಳ್ಳಿ ರೈತ ರಾಮಾಂಜನಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.