ದೊಡ್ಡಬಳ್ಳಾಪುರ: ಬಿಡಿ ತಂಬಾಕು ಪದಾರ್ಥಗಳ ಮಾರಾಟ ನಿಲ್ಲಿಸುವ ಕುರಿತು ಕಾಯ್ದೆ ಜಾರಿ ಮಾಡಲು ಹೊರಟಿರುವ ಸರ್ಕಾರದ ಕ್ರಮ ವಿರೋಧಿಸಿ ಹಾಗೂ ಸರ್ಕಾರಕ್ಕೆ ಕಾಯ್ದೆ ಜಾರಿ ಮಾಡದಂತೆ ಮನವರಿಕೆ ಮಾಡಿಕೊಡಬೇಕೆಂದು ಒತ್ತಾಯಿಸಿ ಬಿಡಿ ತಂಬಾಕು ಪದಾರ್ಥಗಳ ಮಾರಾಟಗಾರರು ಶಾಸಕ ಟಿ.ವೆಂಕಟರಮಣಯ್ಯ ಅವರಿಗೆ ಮನವಿ ಸಲ್ಲಿಸಿದರು.
ರವೀಂದ್ರ, ಆದಿಶಕ್ತಿ, ಮಹದೇವಯ್ಯ ಮಾತನಾಡಿ, ಇತ್ತೀಚೆಗೆ ಸರ್ಕಾರ ಸಣ್ಣ ಅಂಗಡಿಗಳಲ್ಲಿ ಸಿಗರೇಟ್, ಬೀಡಿ ಮೊದಲಾಗಿ ತಂಬಾಕು ಪದಾರ್ಥಗಳನ್ನು ಚಿಲ್ಲರೆಯಾಗಿ ಮಾರಾಟ ಮಾಡದಂತೆ ತಡೆಯುವ ಕಾಯ್ದೆಯನ್ನು ಜಾರಿಗೆ ತರುತ್ತಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಒಂದು ವೇಳೆ ಇದು ಜಾರಿಯಾದದ್ದೇ ಆದರೆ ತಂಬಾಕು ಮಾರಾಟ ಮಾಡಿ ಬದುಕುತ್ತಿರುವ ನೂರಾರು ಬಡ ಕುಟುಂಬಗಳು ಬೀದಿ ಪಾಲಾಗುತ್ತವೆ ಎಂದರು.
ಈಗಾಗಲೇ ತಂಬಾಕು ನಿಷೇಧ ಕಾಯ್ದೆಯಂತೆ 18 ವರ್ಷ ಒಳಗಿನವರಿಗೆ ಮಾರಾಟ ಮಾಡುವಂತಿಲ್ಲ. ತಂಬಾಕು ದುಷ್ಪರಿಣಾಮಗಳನ್ನು ತಂಬಾಕು ಉಪಯೋಗಿಸುವವರು ಅರಿತಿರುತ್ತಾರೆ. ಹೊಸ ಕಾನೂನುನ್ನು ತರುವ ಅಗತ್ಯವಿಲ್ಲ. ಆದರೆ ಕಾಯ್ದೆಗಳ ನೆಪ ಹೇಳಿಕೊಂಡು ಅಧಿಕಾರಿಗಳು ವ್ಯಾಪಾರಿಗಳಿಗೆ ಕಿರುಕುಳ ನೀಡುವ ಸನ್ನಿವೇಶ ಉದ್ಭವವಾಗುತ್ತಿದೆ ಎಂದು ದೂರಿದರು.
ಲಂಚ ನೀಡಿ ವ್ಯಾಪಾರ ಮಾಡುವಷ್ಟು ಸಣ್ಣ ವ್ಯಾಪಾರಿಗಳು ಹಣವಂತರಲ್ಲ. ಆದ್ದರಿಂದ ಸರ್ಕಾರ ಈ ಬಗ್ಗೆ ಗಂಬೀರವಾಗಿ ಆಲೋಚಿಸಿ ಬಿಡಿ ತಂಬಾಕು ಪದಾರ್ಥಗಳ ಮಾರಾಟಗಾರರ ಹಿತ ಕಾಪಾಡಬೇಕೆಂದು ಶಾಸಕರ ಮೂಲಕ ಮನವಿ ಮಾಡಲಾಗುತ್ತಿದೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.