ADVERTISEMENT

ವಿವೇಕಾನಂದ ಆದರ್ಶ ಅನುಕರಣೀಯ

​ಪ್ರಜಾವಾಣಿ ವಾರ್ತೆ
Published 12 ಜನವರಿ 2012, 19:30 IST
Last Updated 12 ಜನವರಿ 2012, 19:30 IST

ಆನೇಕಲ್: ಸ್ವಾಮಿ ವಿವೇಕಾನಂದರ ವಿಚಾರಧಾರೆ ಮತ್ತು ಆದರ್ಶಗಳು ಅನುಕರಣೀಯ ಎಂದು ಜಿಎಂಆರ್ ಎಲೈಟ್ ಅಕಾಡೆಮಿ ಸಂಸ್ಥಾಪಕ ಜಿ.ಮುನಿರಾಜು ನುಡಿದರು.

 ಪಟ್ಟಣದ ಎ.ಎಸ್.ಬಿ ಸ್ವರ್ಣ ಮಹೋತ್ಸವ ಭವನದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ 150ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ  ಮಾತನಾಡಿದರು.

ಭ್ರಷ್ಟಾಚಾರ, ದುರಾಡಳಿತ, ಜಾತೀಯತೆ, ಸ್ವಾರ್ಥ ಮತ್ತಿತರ ದುಷ್ಟಶಕ್ತಿಗಳು ಸಮಾಜವನ್ನು ವಿನಾಶದ ಅಂಚಿಗೆ ಕೊಂಡೊಯ್ಯುತ್ತಿವೆ ಹಾಗಾಗಿ ಇವುಗಂದ ಮುಕ್ತಿ ಪಡೆಯಲು ವಿವೇಕಾನಂದರ ಅಧ್ಯಾತ್ಮ ಚಿಂತನೆಗಳನ್ನು ಅಳವಡಿಸಿಕೊಳ್ಳುವ ಅವಶ್ಯಕತೆಯಿದೆ. ವಿದ್ಯಾರ್ಥಿಗಳು ವಿವೇಕಾನಂದರ ಸಿದ್ಧಾಂತ, ಆದರ್ಶಗಳನ್ನು ಅಧ್ಯಯನ ಮಾಡಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಚಂದಾಪುರದ ಶಾರದಾಶ್ರಮದ ಮಾತೇ ಯತೀಶ್ವರಿ ರಾಮಾಪ್ರಿಯಾಂಬ ಅವರು ಮಾತನಾಡಿ, ಸ್ವಾಮಿ ವಿವೇಕಾನಂದರ ಜೀವನದ ಪ್ರತಿಯೊಂದು ಹೆಜ್ಜೆಯೂ ಇಂದಿನ ವಿದ್ಯಾರ್ಥಿಗಳ ಯಶಸ್ಸಿಗೆ ಮಾರ್ಗ ಸೂಚಿಯಾಗಿದೆ. ಅವದ ಜೀವನವೇ ಒಂದು ಪಾಠವಾಗಿದೆ. ದೇಶ ಪ್ರೇಮ, ಧಾರ್ಮಿಕ ಚಿಂತನೆಗಳು ಹಾಗೂ ಚೈತನ್ಯ ಶಕ್ತಿ ಎಲ್ಲರಿಗೂ ಮಾದರಿಯಾಗಿದೆ ಎಂದರು.

ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಆರ್.ನಾಗಭೂಷಣ್, ವಿಶ್ವಚೇತನ ಕಾಲೇಜಿನ ಪ್ರಾಚಾರ್ಯ ಪ್ರಕಾಶ್ ರೆಡ್ಡಿ, ಉಪನ್ಯಾಸಕರಾದ ತಿಮ್ಮಾರೆಡ್ಡಿ, ಯತೀರಾಜ್, ಎಬಿವಿಪಿಯ ಭರತ್, ಮಲ್ಲಿಕಾರ್ಜುನ್ ಮತ್ತಿತರರು ಹಾಜರಿದ್ದರು.     

ಮರಸೂರು ಮಡಿವಾಳ : ತಾಲ್ಲೂಕಿನ ಮರಸೂರು ಮಡಿವಾಳ ಗ್ರಾಮದ ವಿನಾಯಕ ಗೆಳೆಯರ ಬಳಗದ ಕಾರ್ಯಕರ್ತರು ಗ್ರಾಮದಲ್ಲಿನ ವಿವೇಕಾನಂದರ ಪುತ್ಥಳಿಗೆ ಪೂಜೆ ಸಲ್ಲಿಸುವ ಮೂಲಕ ವಿವೇಕಾನಂದರ 150ನೇ ಜನ್ಮದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಿದರು.

ಗ್ರಾಮದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಸಮವಸ್ತ್ರ ಹಾಗೂ ವಿವೇಕಾನಂದರ ಜೀವನ ಚರಿತ್ರೆಯ ಕಿರುಪುಸ್ತಕಗಳು, ಲೇಖನ ಸಾಮಗ್ರಿ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ತಾಲ್ಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಕೇಶವ ಅವರು ಮಾತನಾಡಿ ಎಲ್ಲಾ ಗ್ರಾಮಗಳಲ್ಲಿ ವಿವೇಕಾನಂದರ ಜನ್ಮದಿನಾಚರಣೆ ಹಬ್ಬದ ರೀತಿಯಲ್ಲಿ ಆಚರಿಸುವಂತಾಗಬೇಕು. ವಿವೇಕಾನಂದರ ಸ್ಪೂರ್ತಿಯುತ ಚಿಂತನೆಗಳು ಎಲ್ಲರನ್ನು ಬಡಿದೆಬ್ಬಿಸುತ್ತವೆ.
ಯುವಕರು ರಚನಾತ್ಮಕ ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ದೇಶ ಕಟ್ಟುವ ಕಾರ್ಯದಲ್ಲಿ ಭಾಗಿಗಳಾಗಬೇಕು ಎಂದರು. ಭಗತ್ ಸಿಂಗ್ ಯುವ ಸೇನೆ ಅಧ್ಯಕ್ಷ ಬಳ್ಳೂರು ಬಾಬು, ಶಿಕ್ಷಕಿ ಮೋಹನ ಕುಮಾರಿ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.