ADVERTISEMENT

‘ಆಧಾರ್’ ತಿದ್ದುಪಡಿಗೆ ಬ್ಯಾಂಕ್ ಮುಂದೆ ಕ್ಯೂ

ವಿಜಯಪುರದ ಜನತೆಗೆ ಸಾಕಷ್ಟು ತೊಂದರೆ, ಕ್ರಮ ಕೈಗೊಳ್ಳಲು ಜಿಲ್ಲಾಡಳಿತಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2018, 13:18 IST
Last Updated 3 ಡಿಸೆಂಬರ್ 2018, 13:18 IST
ವಿಜಯ ಬ್ಯಾಂಕಿನ ಶಾಖೆ ಮುಂದೆ ಆಧಾರ್ ಕಾರ್ಡ್ ಗಳ ತಿದ್ದುಪಡಿಗಾಗಿ ಸಾಲುಗಟ್ಟಿ ನಿಂತಿರುವ ಜನರು
ವಿಜಯ ಬ್ಯಾಂಕಿನ ಶಾಖೆ ಮುಂದೆ ಆಧಾರ್ ಕಾರ್ಡ್ ಗಳ ತಿದ್ದುಪಡಿಗಾಗಿ ಸಾಲುಗಟ್ಟಿ ನಿಂತಿರುವ ಜನರು   

ವಿಜಯಪುರ: ಆಧಾರ್‌ ಕಾರ್ಡ್‌ಗಳಲ್ಲಿ ಮುದ್ರಣ ದೋಷದಿಂದ ಉಂಟಾಗಿರುವ ಹೆಸರಿನಲ್ಲಿ ಲೋಪದೋಷಗಳು, ಮಕ್ಕಳ ಹೆಸರು ತಿದ್ದುಪಡಿಗಾಗಿ ಈಗ ಪೋಷಕರು ಬೆಳಿಗ್ಗೆ ಕೆಲಸ ಕಾರ್ಯ ಬಿಟ್ಟು ಬ್ಯಾಂಕ್‌ಗಳ ಮುಂದೆ ಕ್ಯೂ ನಿಲ್ಲುವಂತಾಗಿದೆ ಎಂದು ಚಿಕ್ಕನಹಳ್ಳಿ ಪಿಳ್ಳಪ್ಪ ಆರೋಪಿಸಿದ್ದಾರೆ.

‘ವಿಜಯ ಬ್ಯಾಂಕ್, ಕೊಟಕ್ ಮಹಿಂದ್ರಾ ಬ್ಯಾಂಕಿನ ಮುಂದೆ ಜನರು ಪ್ರತಿನಿತ್ಯ ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಇದು ಕೆಲವು ತಿಂಗಳುಗಳಿಂದ ನಡೆಯುತ್ತಿರುವ ಪ್ರಕ್ರಿಯೆ. ಸಂಬಂಧಪಟ್ಟವರು ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ದಿನಬೆಳಗಾದರೆ ಕೊರೆಯುವ ಚಳಿಯಲ್ಲಿ ಸಣ್ಣ ಮಕ್ಕಳನ್ನು ಎತ್ತಿಕೊಂಡು ಬಂದು ಮಹಿಳೆಯರು ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ನೂರಾರು ಮಂದಿ ಬಂದು ಬ್ಯಾಂಕ್‌ಗಳ ಮುಂದೆ ಸಾಲುಗಟ್ಟಿ ನಿಲ್ಲುತ್ತಿದ್ದಾರೆ’ ಎಂದರು.

‘ದಿನಕ್ಕೆ 20 ಟೋಕನ್ ಕೊಡ್ತಾರೆ. ಬೆಳಿಗ್ಗೆ ಯಾರು ಬೇಗ ಬಂದು ಸಾಲಿನಲ್ಲಿ ನಿಲ್ಲುತ್ತಾರೋ ಅವರಿಗೆ ಮಾತ್ರವೇ ಟೋಕನ್ ಸಿಗುತ್ತದೆ. ಉಳಿದವರು ಸಿಗುವವರೆಗೂ ಸುತ್ತಾಡುತ್ತಲೇ ಇರಬೇಕು. ಯೂನಿಕ್‌ ಐಡೆಂಟಿಫಿಕೇಷನ್‌ ಅಥಾರಿಟಿ ಆಫ್‌ ಇಂಡಿಯ (ಯುಐಡಿಎಐ) ಈ ವ್ಯವಸ್ಥೆಯನ್ನು ತಪ್ಪಿಸಬೇಕು ಎಂದು ಅನೇಕ ಸಾರಿ ಒತ್ತಾಯ ಮಾಡಿದ್ದರೂ ಗಮನ ಹರಿಸಿಲ್ಲ’ ಎಂದರು.

ADVERTISEMENT

2018-19 ನೇ ಸಾಲಿನಲ್ಲಿ ಎಲ್‌ಕೆಜಿ ಯಿಂದ ಉಚಿತ ಕಡ್ಡಾಯ ಶಿಕ್ಷಣ ಕಾಯ್ದೆಯಡಿ ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲಿ ಶೇ 25 ಬಡ ಮಕ್ಕಳ ಪ್ರವೇಶಕ್ಕೆ ಆದೇಶ ನೀಡಿದೆ. ಪೋಷಕರು ಆರ್‌ಟಿಇ ನಡಿ ಅರ್ಜಿ ಸಲ್ಲಿಸುವ ವೇಳೆ ಆಧಾರ್‌ ಕಾರ್ಡ್‌ ಸಲ್ಲಿಕೆ ಕಡ್ಡಾಯವಾಗಿತ್ತು. ಅವರು ಸಲ್ಲಿಸಿರುವ ಆಧಾರ್ ಕಾರ್ಡ್‌ಗಳಲ್ಲಿ ಮಕ್ಕಳ ಹೆಸರು ಮುದ್ರಣ ದೋಷದಿಂದ ತಪ್ಪಾಗಿ ಮುದ್ರಣಗೊಂಡಿದೆ. ಅದರ ತಿದ್ದುಪಡಿಗಾಗಿ ಪೋಷಕರು ಇನ್ನಿಲ್ಲದ ರೀತಿಯಲ್ಲಿ ಪ್ರಯಾಸ ಪಡುತ್ತಿದ್ದಾರೆ ಎಂದು ಸ್ಥಳೀಯರಾದ ಮಂಜುನಾಥ್ ಹೇಳಿದದರು.

ಹೆಚ್ಚುವರಿ ಕೇಂದ್ರ ತೆರೆಯಿರಿ: ಮುದ್ರಣ ದೋಷದಿಂದ ಕಾರ್ಡ್‌ಗಳಲ್ಲಿ ಸಾಕಷ್ಟು ಮಕ್ಕಳ ಹೆಸರು ವ್ಯತ್ಯಾಸಗೊಂಡಿದ್ದು ತಿದ್ದುಪಡಿಗಾಗಿ ನೂರಾರು ಸಂಖ್ಯೆಯಲ್ಲಿ ಜನರು ಬ್ಯಾಂಕ್‌ಗಳಿಗೆ ಲಗ್ಗೆ ಇಟ್ಟರೂ ಇದು ಮುಗಿಯುತ್ತಿಲ್ಲ. ಾದ್ದರಿಂದ ಹೆಚ್ಚುವರಿ ಕೇಂದ್ರ ತೆರೆದು ಸಮಸ್ಯೆ ಬಗೆಹರಿಸಬೇಕು ಎಂದು ರಮೇಶ್ ಮನವಿ ಮಾಡುದರು.

ಜನರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದರೂ ಜಿಲ್ಲಾಡಳಿತ ಮಾತ್ರ ಯಾವುದೇ ಕ್ರಮಕ್ಕೆ ಮುಂದಾಗದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ತಿದ್ದುಪಡಿಗೆ ಕೇವಲ ಎರಡು ಬ್ಯಾಂಕ್‌ಗೆ ಮಾತ್ರ ಅವಕಾಶ ನೀಡುವ ಬದಲು ಅಯಾ ಗ್ರಾಮ ಪಂಚಾಯಿತಿ, ಪುರಸಭಾ ಕೇಂದ್ರಗಳಲ್ಲಿ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಿದರೆ ಅನುಕೂಲವಾಗುತ್ತದೆ ಎಂದು ಜನರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.