ADVERTISEMENT

ಗಂಟಿಗಾನಹಳ್ಳಿ ವ್ಯವಸಾಯ ಸೇವಾ ಸಹಕಾರ ಸಂಘಕ್ಕೆ ₹ 8.70 ಲಕ್ಷ ಲಾಭ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2022, 4:41 IST
Last Updated 15 ಸೆಪ್ಟೆಂಬರ್ 2022, 4:41 IST
ದೊಡ್ಡಬಳ್ಳಾಪುರ ತಾಲ್ಲೂಕಿನ ಗಂಟಿಗಾನಹಳ್ಳಿ ವ್ಯವಸಾಯ ಸೇವಾ ಸಹಕಾರ ಸಂಘದ ಸರ್ವ ಸದಸ್ಯರ ಸಭೆಯನ್ನು ರಾಜ್ಯ ತೆಂಗಿನ ನಾರಿನ ಸಹಕಾರ ಮಹಾಮಂಡಳಿ ಅಧ್ಯಕ್ಷ ಎಸ್. ವೆಂಕಟೇಶ್‌ಬಾಬು ಉದ್ಘಾಟಿಸಿದರು
ದೊಡ್ಡಬಳ್ಳಾಪುರ ತಾಲ್ಲೂಕಿನ ಗಂಟಿಗಾನಹಳ್ಳಿ ವ್ಯವಸಾಯ ಸೇವಾ ಸಹಕಾರ ಸಂಘದ ಸರ್ವ ಸದಸ್ಯರ ಸಭೆಯನ್ನು ರಾಜ್ಯ ತೆಂಗಿನ ನಾರಿನ ಸಹಕಾರ ಮಹಾಮಂಡಳಿ ಅಧ್ಯಕ್ಷ ಎಸ್. ವೆಂಕಟೇಶ್‌ಬಾಬು ಉದ್ಘಾಟಿಸಿದರು   

ದೊಡ್ಡಬಳ್ಳಾಪುರ:ತಾಲ್ಲೂಕಿನ ಗಂಟಿಗಾನಹಳ್ಳಿಯ ವ್ಯವಸಾಯ ಸೇವಾ ಸಹಕಾರ ಸಂಘದ 2021-22ನೇ ಸಾಲಿನ ಸರ್ವ ಸದಸ್ಯರ ಸಭೆಯು ಸಂಘದ ಆವರಣದಲ್ಲಿ ನಡೆಯಿತು.

ಆಡಳಿತ ವರದಿ ಮಂಡಿಸಿದ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ.ಎ. ದೇವರಾಜ, ಸಂಘವು ₹ 8.70 ಲಕ್ಷ ಲಾಭಗಳಿಸಿದೆ. ಸಂಘದಲ್ಲಿ 2021-22ನೇ ಸಾಲಿನಲ್ಲಿ 743 ರೈತರಿಗೆ ₹ 3.40 ಕೋಟಿ ಅಲ್ಪಾವಧಿ ಬೆಳೆ ಸಾಲ ವಿತರಿಸಲಾಗಿದೆ ಎಂದು ತಿಳಿಸಿದರು.

18 ರೈತರಿಂದ ₹ 7.25 ಲಕ್ಷ ಸಾಲ ವಸೂಲಿಯಾಗಬೇಕಿದೆ. 2022-23ನೇ ಸಾಲಿಗೆ 130 ರೈತರ ₹ 110 ಲಕ್ಷ ಹೊಸ ಸಾಲಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. 2022-23ನೇ ಸಾಲಿನ ಆಗಸ್ಟ್ ಅಂತ್ಯದವರೆಗೆ 202 ಸದಸ್ಯರ ಕೆಸಿಸಿ ಸಾಲ ₹ 76 ಲಕ್ಷ ನವೀಕರಣಗೊಂಡಿದೆ. ಈ ಪೈಕಿ ಇಬ್ಬರು ಮೃತಪಟ್ಟ ರೈತರ ₹ 45 ಸಾವಿರ ಸಾಲ ಸುಸ್ತಿ ಬಾಕಿ ಇದೆ ಎಂದು ತಿಳಿಸಿದರು.

ADVERTISEMENT

ಸಂಘವು ಸ್ವಂತ ಬಂಡವಾಳದಲ್ಲಿ ನೇರ ಸಾಲ, ಸ್ತ್ರೀಶಕ್ತಿ ಸಾಲ, ಚಿನ್ನದ ಮೇಲೆ ಸಾಲ ನೀಡುತ್ತಿದೆ. ರಸಗೊಬ್ಬರ, ಪಡಿತರ ವಿತರಣೆಯ ಸೌಲಭ್ಯ ನೀಡಲಾಗುತ್ತಿದೆ ಎಂದರು.

ಕರ್ನಾಟಕ ರಾಜ್ಯ ತೆಂಗಿನ ನಾರಿನ ಸಹಕಾರ ಮಹಾಮಂಡಳಿ ಅಧ್ಯಕ್ಷ ಎಸ್. ವೆಂಕಟೇಶ್‌ಬಾಬು ಮಾತನಾಡಿ, ಸಂಘವು ಲಾಭದಾಯಕವಾಗಿ ನಡೆಯುತ್ತಿರುವುದು ಅಭಿನಂದನೀಯ. ಸಂಘದ ಏಳಿಗೆಗೆ ಸದಸ್ಯರ ಪಾತ್ರ ಮಹತ್ವದ್ದಾಗಿದೆ. ಸಕಾಲಕ್ಕೆ ಸಾಲ ಪಾವತಿಸುವುದು, ಸಂಘದ ಆಗುಹೋಗುಗಳ ಬಗ್ಗೆ ಕಾಳಜಿವಹಿಸುವುದು ಮುಖ್ಯ ಎಂದು ತಿಳಿಸಿದರು.

ಸಂಘದ ಅಧ್ಯಕ್ಷ ಕೆ.ಎನ್. ಹನುಮಂತರಾಜು ಅಧ್ಯಕ್ಷತೆವಹಿಸಿದ್ದರು. ಸಭೆಯಲ್ಲಿ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಜಿ. ಚುಂಚೇಗೌಡ, ಟಿಎಪಿಸಿಎಂಎಸ್ ನಿರ್ದೇಶಕ ಜಿ.ಎನ್. ರಂಗಪ್ಪ, ಮುಖಂಡರಾದ ಎಚ್. ಅಪ್ಪಯ್ಯ, ಸಿ.ಕೆ. ದೇವರಾಜು, ಚಿದಾನಂದ್, ಹನುಮಪ್ಪ, ಕೆಂಪೇಗೌಡ, ಮೋಕ್ಷರಾಮಯ್ಯ ಹಾಗೂ ಸಂಘದ ನಿರ್ದೇಶಕರು
ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.