ದೇವನಹಳ್ಳಿ: ‘ಸತತ ಬರಗಾಲದಿಂದ ತತ್ತರಿಸಿರುವ ಬಯಲುಸೀಮೆಯ ತಾಲ್ಲೂಕಿನಲ್ಲಿ ಹಾಲು ಉತ್ಪಾದನೆಯೇ ರೈತರ ಜೀವನಕ್ಕೆ ಆಧಾರವಾಗಿದೆ’ ಎಂದು ಮುಖಂಡ ಬಿ.ಕೆ.ನಾರಾಯಣಸ್ವಾಮಿ ಹೇಳಿದರು.
ಬಚ್ಚಹಳ್ಳಿ ಗ್ರಾಮದಲ್ಲಿನ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಂಡ ಎನ್.ಕೃಷ್ಣಪ್ಪ ಅವರನ್ನು ಅಭಿನಂದಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಕುಡಿಯುವ ನೀರು ಸೇರಿದಂತೆ, ಜಾನುವಾರುಗಳ ಮೇವು, ನೀರಿಗಾಗಿ ಪರದಾಡಬೇಕಾದ ಪರಿಸ್ಥಿತಿ ಎದುರಾಗಿದೆ. ವಾಡಿಕೆ ಮಳೆ ಇಲ್ಲದೆ ಕೃಷಿ ನೆಲ ಬರಡಾಗಿದೆ. ಇದಕ್ಕೆ ಪರ್ಯಾಯ ವ್ಯವಸ್ಥೆ ಎಂದರೆ ಪಶುಪಾಲನೆ. ರೈತರು ಕೃಷಿ ಮತ್ತು ತೊಟಗಾರಿಕೆಯ ಜೊತೆಗೆ ಅರ್ಥಿಕ ಮೂಲ ವೃದ್ಧಿಸಿಕೊಳ್ಳಲು ಕುರಿ, ಕೋಳಿ, ಮೇಕೆ, ಮೊಲ, ಜೇನು ಸಾಕಾಣಿಕೆಯಂತಹ ಯೋಜನೆಗಳನ್ನು ರೂಪಿಸಿಕೊಳ್ಳಬೇಕು. ಆ ಮೂಲಕ ವಿವಿಧ ಆದಾಯದ ಮೂಲಗಳನ್ನು ಕಂಡುಕೊಳ್ಳಬೇಕು’ಎಂದು ಅವರು ಹೇಳಿದರು.
ನೂತನ ಅಧ್ಯಕ್ಷ ಎನ್.ಕೃಷ್ಣಪ್ಪ ಮತ್ತು ಉಪಾಧ್ಯಕ್ಷ ವಿ.ಮಾರೇಗೌಡ ಮಾತನಾಡಿ ‘ಹಾಲು ಉತ್ಪಾದಕರ ಸಹಕಾರ ಸಂಘ ಆರಂಭಗೊಂಡು 15 ವರ್ಷಗಳಾಗಿವೆ. ಸಂಘ ಏಳುಬೀಳಿನ ನಡುವೆ ಪ್ರಗತಿಯತ್ತ ಹಜ್ಜೆ ಇಡುತ್ತಿದೆ. ಹಾಲಿನ ಉತ್ಪಾದನೆ ಹೆಚ್ಚಿದೆ. ಜೀವನ ನಿರ್ವಹಣೆಗೆ ಹಾಲಿನ ಉತ್ಪಾದನೆ ಅಧಾರವಾಗಿದೆ. ಸಂಘದ ಪ್ರಗತಿಗೆ ಮತ್ತು ಉತ್ಪಾದಕರ ಹಿತದೃಷ್ಟಿಯಿಂದ ಕೆಲಸ ಮಾಡಲು ಎಲ್ಲ ನಿರ್ದೇಶಕರ ಮತ್ತು ಸದಸ್ಯರ ಸಹಕಾರ ಮುಖ್ಯ’ ಎಂದರು.
ಸಂಘದ ನಿರ್ದೇಶಕರಾದ ಎಂ.ನಾರಾಯಣಸ್ವಾಮಿ, ಚಿಕ್ಕನಂಜಪ್ಪ, ಅಶ್ವಥ ನಾರಾಯಣ, ಆಂಜಿನಪ್ಪ, ಮುನಿಯಪ್ಪ, ನಾರಾಯಣಪ್ಪ, ಪ್ರೇಮ, ಮುಖಂಡರಾದ ಚೆನ್ನಕೃಷ್ಣಪ್ಪ, ವಿ.ಮುನಿರಾಜು, ಲಕ್ಷಣ್, ಬಾಲಕೃಷ್ಣ, ಮುನಿ ಆಂಜಿನಪ್ಪ, ರಾಮಣ್ಣ, ದೊಡ್ಡೇಗೌಡ, ಆರುಣ್ ಕುಮಾರ್, ಆರ್.ಕೆ.ನಂಜೇಗೌಡ, ಸಿ.ಎ.ಆನಂದ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೌರಮ್ಮ, ಸಂಘದ ಕಾರ್ಯದರ್ಶಿ ಆನಂದ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.