ADVERTISEMENT

ಅಕ್ರಮ ಕಂಡರೆ ದೂರು ನೀಡಿ

ಪಾರದರ್ಶಕ ಚುನಾವಣೆಗೆ ಜನರ ಸಹಕಾರ ಅಗತ್ಯ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2024, 5:27 IST
Last Updated 21 ಮಾರ್ಚ್ 2024, 5:27 IST
ಆನೇಕಲ್ ತಾಲ್ಲೂಕು ಕಚೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಸಹಾಯಕ ಚುನಾವಣಾಧಿಕಾರಿ ಆರ್.ಜಿ.ಚಂದ್ರಶೇಖರ್ ಮತ್ತು ತಹಶೀಲ್ದಾರ್ ಶಶಿಧರ್ ಮಾಡ್ಯಾಳ್ ಮಾಹಿತಿ ನೀಡಿದರು
ಆನೇಕಲ್ ತಾಲ್ಲೂಕು ಕಚೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಸಹಾಯಕ ಚುನಾವಣಾಧಿಕಾರಿ ಆರ್.ಜಿ.ಚಂದ್ರಶೇಖರ್ ಮತ್ತು ತಹಶೀಲ್ದಾರ್ ಶಶಿಧರ್ ಮಾಡ್ಯಾಳ್ ಮಾಹಿತಿ ನೀಡಿದರು   

ಆನೇಕಲ್: ಪಾರದರ್ಶಕ ಮತ್ತು ಮುಕ್ತ ಚುನಾವಣೆ ನಡೆಸಲು ಪ್ರತಿಯೊಬ್ಬರ ಸಹಕಾರ ಅಗತ್ಯ. ಈ ನಿಟ್ಟಿನಲ್ಲಿ ಆನೇಕಲ್‌ ವಿಧಾನಸಭಾ ಕ್ಷೇತ್ರದಲ್ಲಿ ಲೋಕಸಭಾ ಚುನಾವಣೆಯನ್ನು ಸುಗಮವಾಗಿ ನಡೆಸಲು ಚುನಾವಣಾ ಆಯೋಗದ ನಿರ್ದೇಶನದಂತೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಸಹಾಯಕ ಚುನಾವಣಾಧಿಕಾರಿ ಆರ್‌.ಜಿ.ಚಂದ್ರಶೇಖರ್‌ ತಿಳಿಸಿದರು.

ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಆನೇಕಲ್‌ ವಿಧಾನಸಭಾ ಕ್ಷೇತ್ರದಲ್ಲಿ ಯಾವುದೇ ಚುನಾವಣಾ ಅಕ್ರಮ ನಡೆಯದಂತೆ ಬಿಗಿ ಕ್ರಮ ಕೈಗೊಳ್ಳಲಾಗಿದೆ. ಈ ಸಂಬಂಧ ಕಂಟ್ರೋಲ್‌ ರೂಂ ಸ್ಥಾಪನೆ ಮಾಡಲಾಗಿದೆ. ದೂರವಾಣಿ ಸಂಖ್ಯೆ 08027859234 ಸಂಖ್ಯೆಗೆ ಕರೆ ಮಾಡಬಹುದು ಎಂದು ಕೋರಿದರು.

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ, ಚುನಾವಣಾ ಅಕ್ರಮ ಕಂಡು ಬಂದಲ್ಲಿ ಮಾಹಿತಿ ನೀಡುವ ಮೂಲಕ ಪಾರದರ್ಶಕ ಚುನಾವಣೆ ನಡೆಸಲು ಸಾರ್ವಜನಿಕರು ಸಹಕಾರ ನೀಡಬೇಕು ಎಂದರು.

ADVERTISEMENT

ಆನೇಕಲ್‌ ತಾಲ್ಲೂಕು ರಾಜ್ಯದ ಗಡಿ ತಾಲ್ಲೂಕಾಗಿದೆ. ಹಾಗಾಗಿ ಗಡಿ ಭಾಗಗಳಲ್ಲಿ ಐದು ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಲಾಗಿದೆ. ಸೋಲೂರು, ಅತ್ತಿಬೆಲೆ, ಸರ್ಜಾಪುರ, ಸಮಂದೂರು, ಟಿ.ವಿ.ಎಸ್‌.ಕ್ರಾಸ್‌ ಬಳಿ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಲಾಗಿದೆ. 15 ತಂಡ ನಿಯೋಜನೆ ಮಾಡಲಾಗಿದ್ದು ಮೂರು ಪಾಳಿಗಳಲ್ಲಿ ಕೆಲಸ ಮಾಡಲಿದ್ದಾರೆ. 28 ಸೆಕ್ಟರ್‌ ಅಧಿಕಾರಿಗಳು 18 ಸಂಚಾರಿ ಸ್ಕ್ವಾಡ್‌ಗಳು, 15 ಎಸ್‌ಎಸ್‌ಡಿ ತಂಡ ಕೆಲಸ ನಿರ್ವಹಿಸಲಿದೆ ಎಂದರು.

ತಹಶೀಲ್ದಾರ್‌ ಶಶಿಧರ್ ಮಾಡ್ಯಾಳ್‌ ಮಾತನಾಡಿ, ಆನೇಕಲ್‌ ವಿಧಾನಸಭಾ ಕ್ಷೇತ್ರದಲ್ಲಿ 4,11,409 ಮತದಾರರು ಇದುವರೆಗೆ ನೊಂದಣಿಯಾಗಿದ್ದಾರೆ. 7,184 ಮತದಾರರು ಮೊದಲ ಬಾರಿಗೆ ಮತಚಲಾಯಿಸಲಿದ್ದಾರೆ. 381 ಮತಗಟ್ಟೆ ಸ್ಥಾಪಿಸಲಾಗಿದೆ. 1,524 ಮತಗಟ್ಟೆ ಅಧಿಕಾರಿಗಳನ್ನು ನೇಮಕ ಮಾಡಲಾಗುತ್ತಿದ್ದು, ಎರಡು ಹಂತಗಳಲ್ಲಿ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.