
ಆನೇಕಲ್: ತಾಲ್ಲೂಕಿನ ಸರ್ಜಾಪುರ ಹೋಬಳಿಯಲ್ಲಿ ಕೆಐಎಡಿಬಿ ಭೂಸ್ವಾಧೀನ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಯು 150ನೇ ದಿನ ಪೂರೈಸಿದೆ. ಕೊರೆಯುವ ಚಳಿಗೂ ಕದಲದ ಪ್ರತಿಭಟನನಿರತರು ಧರಣಿ ನಡೆಸುತ್ತಿದ್ದಾರೆ.
ವಿವಿಧ ಗ್ರಾಮಗಳ ರೈತರು 150 ದಿನಗಳಿಂದ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದರು ಯಾರು ಸಹ ಸ್ಪಂದಿಸದಿರುವುದು ದುಃಖದ ಸಂಗತಿ. ರೈತರನ್ನು ಅಸಡ್ಡೆಯಿಂದ ನೋಡುತ್ತಿರುವುದು ಖಂಡನೀಯ. ಸರ್ಜಾಪುರ ಭಾಗದ ರೈತರ ಬೇಡಿಕೆ ಈಡೇರದಿದ್ದರೆ ಮುಂದಿನ ದಿನಗಳಲ್ಲಿ ಬೆಂಗಳೂರುವರೆಗೂ ಪಾದಯಾತ್ರೆ ನಡೆಸಲಾಗುವುದು ಮತ್ತು ಹೋರಾಟವನ್ನು ತೀವ್ರ ಗೊಳಿಸಲಾಗುವುದು ಎಂದು ರೈತ ಮುಖಂಡರಾದ ಸುಜಾತ ಎಚ್ಚರಿಕೆ ನೀಡಿದರು.
ರೈತ ಮುಖಂಡರಾದ ಕೇಶವ, ಪರಶುರಾಮ್, ಚಿನ್ನಪ್ಪ ಚಿಕ್ಕಹಾಗಡೆ, ಹರೀಶ್ ಅಣ್ಣಯ್ಯ ಮಂಜುಳಾ ಉಮಾ ರಾಜೇಶ್ ಸುನಿಲ್ ಶ್ರೀನಿವಾಸ್ ರೆಡ್ಡಿ ಪ್ರವೀಣ್ ವೆಂಕಟಸ್ವಾಮಿ ರೆಡ್ಡಿ ಬಸಣ್ಣ ಇದ್ದರು.
ಜಲ ಜಾಗೃತಿ ವಾಕಾಥಾನ್ : ತಾಲ್ಲೂಕಿನ ಕೆರೆಗಳು ಮತ್ತು ಜಲಮೂಲವನ್ನು ಉಳಿಸುವ ಸಲುವಾಗಿ ಹಾಗೂ ಕೈಗಾರಿಕೆಗಳ ತ್ಯಾಜ್ಯ ನೀರು ಕೆರೆಗಳಿಗೆ ಹರಿಯುತ್ತಿರುವುದನ್ನು ಖಂಡಿಸಿ ಭಾರತೀಯ ಕಿಸಾನ್ ಸಂಘ ಆನೇಕಲ್ ಘಟಕ ಮತ್ತು ಆನೇಕಲ್ ಭೂಸ್ವಾದಿನ ವಿರೋಧಿ ಹೋರಾಟ ಸಮಿತಿಯಿಂದ ತಾಲ್ಲೂಕಿನ ಚಂದಾಪುರದಲ್ಲಿ ‘ನೀರಿದ್ದರೆ ನಾಳೆ ನೀರಿಗಾಗಿ ನಡಿಗೆ’ಯನ್ನು ಶನಿವಾರ ಬೆಳಗ್ಗೆ 11ಕ್ಕೆ ಹಮ್ಮಿಕೊಳ್ಳಲಾಗಿದೆ.
ಚಂದಾಪುರ ಚೋಳರ ಕೆರೆಯಿಂದ ಬಿದರಗುಪ್ಪೆ ಕೆರೆವರೆಗೂ ಬೃಹತ್ ಜಾಥಾ ನಡೆಯಲಿದೆ. ಜಲಜಾಗೃತಿಯಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಭಾರತೀಯ ಕಿಸಾನ್ ಸಂಘ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.