
ಆನೇಕಲ್: ಜಿಗಣಿ ಕೈಗಾರಿಕಾ ಪ್ರದೇಶ ವ್ಯಾಪ್ತಿಯ ಜೂಪಿಟರ್ ಟೆಕ್ನಾಲಜಿಸ್ ಕಾರ್ಖಾನೆ ಗುರುವಾರ ಹೊತ್ತಿ ಉರಿದಿದೆ.
ಬೆಳಗಿನ ಜಾವ ನಾಲ್ಕು ಗಂಟೆ ಸುಮಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಮೂರು ಅಂತಸ್ತಿನ ಕಟ್ಟಡ ನೋಡುತ್ತಿದ್ದಂತೆ ಬೆಂಕಿಗಾವುತಿಯಾಗಿದೆ. ಕೋಟ್ಯಂತರ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿದೆ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಕಾರ್ಖಾನೆಯಲ್ಲಿದ್ದ ಕೆಲಸ ಸಿಬ್ಬಂದಿ ಹೊರಗೆ ಬಂದಿದ್ದರಿಂದ ಪ್ರಾಣಪಾಯದಿಂದ ಪಾರಾಗಿದ್ದಾರೆ.
ಅಗ್ನಿ ಅಕಸ್ಮಿಕವಾದ ಬಗ್ಗೆ ಮಾಹಿತಿ ದೊರೆಯುತ್ತಿದ್ದಂತೆ ಆನೇಕಲ್, ಜಯನಗರ, ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ಎಂಟು ಅಗ್ನಿಶಾಮಕ ಠಾಣೆಗಳ ಸಿಬ್ಬಂದಿ 5 ಗಂಟೆಗಳಿಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು. ಅವಘಡಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಅಗ್ನಿ ಅಕಸ್ಮಿಕದಿಂದಾಗಿ ಜಿಗಣಿಯ ಕಾರ್ಖಾನೆಯಲ್ಲಿ ಹೊಗೆಯು ಮುಗಿಲು ಮುಟ್ಟಿತ್ತು. ನೋಡ ನೋಡುತ್ತಿದ್ದಂತೆ ಬೆಂಕಿಯ ಕೆನ್ನಾಲಿಗೆ ಚಾಚಿತ್ತು.
ಜಿಗಣಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಅಗ್ನಿ ಅವಘಡದ ಕಾರಣಗಳ ಬಗ್ಗೆ ತನಿಖೆ ನಡೆಸಿದ್ದಾರೆ.
ಜಿಗಣಿಯ ಜೂಪಿಟರ್ ಟೆಕ್ನಾಲಜೀಸ್ ಕಾರ್ಖಾನೆಯು ಮದ್ಯದ ಬಾಟಲಿನ ಸ್ಟಿಕ್ಕರ್ ಲೇಬಲ್ ಮತ್ತು ಹಾಲೋಗ್ರಾಮ್ ತಯಾರಿಸಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.