
ಆನೇಕಲ್: ತಾಲ್ಲೂಕಿನ ಮರಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮತ್ತು ಶಾಸಕ ಬಿ.ಶಿವಣ್ಣ ಸೋಮವಾರ ಉದ್ಘಾಟಿಸಿದರು.
ಉದ್ಘಾಟನೆಗೊಂಡ ಯೋಜನೆಗಳಲ್ಲಿ ಮರಸೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಿರ್ಮಿಸಲಾದ ಹೊಸ ಹೆರಿಗೆ ವಾರ್ಡ್ ಕಟ್ಟಡ, 4ನೇ ವಾರ್ಡ್ನಲ್ಲಿ ನಿರ್ಮಿಸಲಾದ ಅಂಗನವಾಡಿ ಮತ್ತು ವಿವಿಧೋದ್ದೇಶ ಕಟ್ಟಡ, ಲಸಿಕಾ ಕೇಂದ್ರ, ಹಾಲಿನ ಡೇರಿ ತಡೆಗೋಡೆ, ಸರ್ಕಾರಿ ಶಾಲೆಗಳ ವೇದಿಕೆಗಳ ಮೇಲ್ಛಾವಣಿ, ಕನ್ನಡ ಭವನದ ಎರಡನೇ ಮಹಡಿ ನವೀಕರಣ, ಹಳೆ ಊರು ಗ್ರಾಮದ ಸಮುದಾಯ ಭವನ ಮತ್ತು ಮಡಿವಾಳ ಗ್ರಾಮದ ಶಾಲಾ ಮತ್ತು ಅಂಗನವಾಡಿ ಕಾಂಪೌಂಡ್ ಸೇರಿದೆ.
ಶಾಸಕ ಬಿ.ಶಿವಣ್ಣ, ಗ್ರಾಮ ಪಂಚಾಯಿತಿಗಳು ಕ್ರಿಯಾಶೀಲವಾಗಿ ಕೆಲಸ ಮಾಡಿದರೆ ಉತ್ತಮ ಅಭಿವೃದ್ಧಿ ಸಾಧ್ಯ. ಅನುದಾನ ಸದ್ಬಳಕೆ ಮೂಲಕ ಗ್ರಾಮಗಳನ್ನು ಅಭಿವೃದ್ಧಿಪಡಿಸಬಹುದು ಎಂದು ಹೇಳಿದರು.
ಮರಸೂರು ಗ್ರಾಮ ಪಂಚಾಯಿತಿ ಈ ದೃಷ್ಟಿಯಿಂದ ಮಾದರಿಯಾಗಿದೆ. ಎರಡು ಬಾರಿ ಗಾಂಧಿ ಗ್ರಾಮ ಪುರಸ್ಕಾರ ಪಡೆದಿದೆ ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಂಡಾಪುರ ರಾಮಚಂದ್ರ, ಮರಸೂರು ಪಂಚಾಯಿತಿ ರಾಷ್ಟ್ರಮಟ್ಟದ ಮಾದರಿ. ಮಕ್ಕಳ ಮನೆ, ಪಂಚಾಯಿತಿ ಊಟದ ಮನೆ, ಅಂತ್ಯಕ್ರಿಯೆಗೆ ಸಹಾಯಧನ, ವಿದ್ಯಾರ್ಥಿ ವೇತನ ಮುಂತಾದ ಹಲವು ವಿನೂತನ ಯೋಜನೆಗಳನ್ನು ರೂಪಿಸಿದ ಹೆಗ್ಗಳಿಕೆ ಪಂಚಾಯಿತಿಗೆ ಸಲ್ಲುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಮರಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ ನಾರಾಯಣ ರೆಡ್ಡಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮುರಳಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೊಡ್ಡಹಾಗಡೆ ಹರೀಶ್ ಗೌಡ, ಉಪಾಧ್ಯಕ್ಷೆ ಚಂದ್ರಕಲಾ ಯಲ್ಲಪ್ಪ ಹಲವಾರು ಸದಸ್ಯರು ಮತ್ತು ಮುಖಂಡರು ಉಪಸ್ಥಿತರಿದ್ದರು.
ಮರಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುಳಾ ನಾರಾಯಣ ರೆಡ್ಡಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮುರಳಿ ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೊಡ್ಡಹಾಗಡೆ ಹರೀಶ್ ಗೌಡ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಚಂದ್ರಕಲಾ ಯಲ್ಲಪ್ಪ, ಸದಸ್ಯರಾದ ಪ್ರಭಾಕರರೆಡ್ಡಿ, ರಮೇಶ್ ರೆಡ್ಡಿ, ಮಂಜುನಾಥ ರೆಡ್ಡಿ, ಮಡಿವಾಳ ಮಣಿ, ಮಂಜುಳ ಸೋಮಶೇಖರ್, ರಶ್ಮಿ ಅನಿಲ್, ನಾಗರತ್ನ, ನಿರ್ಮಲ, ಸುಧಾ, ಕೃಷ್ಣಪ್ಪ ನಾಗಪ್ಪ, ಮುಖಂಡರಾದ ರಾಮಕೃಷ್ಣಾರೆಡ್ಡಿ, ಶ್ರೀನಿವಾಸರೆಡ್ಡಿ, ಬನಹಳ್ಳಿ ಅಭಿ, ಯಲ್ಲಪ್ಪ, ಅಮುನಿಯಮ್ಮ, ಮುನಿಯಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.