
ಆನೇಕಲ್: ತಾಲ್ಲೂಕಿನ ಹೆಬ್ಬಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯ ಕಾಚನಾಯಕನಹಳ್ಳಿಯಲ್ಲಿ ಮಂಗಳವಾರ ಹಗಲಿನಲ್ಲಿಯೇ ಕಿರಾಣಿ ಅಂಗಡಿ ಮಾಲೀಕನನ್ನು ಕತ್ತು ಕೊಯ್ದು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಮಾದೇಶ್ ಪ್ರಾವಿಜನ್ ಸ್ಟೋರ್ ಮಾಲೀಕ ಮಾದೇಶ್ (40) ಮನೆಗೆ ಏಕಾಏಕಿ ಏರ್ಗನ್, ಚಾಕು ಹಾಗೂ ಮಾರಕಾಸ್ತ್ರಗಳೊಂದಿಗೆ ನುಗ್ಗಿದ ದುಷ್ಕರ್ಮಿಗಳು ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ದುಷ್ಕರ್ಮಿಗಳು ಹೆಲ್ಮೆಟ್ ಧರಿಸಿದ್ದರು. ಈ ಸಂದರ್ಭದಲ್ಲಿ ಮನೆಯಲ್ಲಿ ಯಾರು ಇರಲಿಲ್ಲ ಎಂದು ಗೊತ್ತಾಗಿದೆ.
ತಮಿಳುನಾಡಿನ ಡೆಂಕಣಿಕೋಟೆ ಸಮೀಪದ ಬಾರಂದೂರು ನಿವಾಸಿಯಾಗಿದ್ದ ಮಾದೇಶ ಪತ್ನಿ, ಮಗ ಮತ್ತು ಭಾಮೈದನೊಂದಿಗೆ ಕಾಚನಾಯಕನಹಳ್ಳಿಯಲ್ಲಿ ವಾಸವಾಗಿದ್ದರು. ಕಾಲಿಗೆ ಗಾಯವಾದ ಕಾರಣ ಮನೆಯಲ್ಲಿದ್ದರು. ಮನೆಯಲ್ಲಿ ₹2 ಲಕ್ಷ ನಗದು ಇತ್ತು ಎಂದು ತಿಳಿದು ಬಂದಿದೆ.
ಕೊಲೆಗಾರರನ್ನು ತಡೆಯಲು ಸ್ಥಳೀಯರು ಮುಂದಾದಾಗ ಅವರ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಘಟನಾ ಸ್ಥಳದಲ್ಲಿ ಬ್ಯಾಗ್, ಹೆಲ್ಮೆಟ್ ಸಿಕ್ಕಿದ್ದು ಏರ್ ಪಿಸ್ತೂಲ್, ಮೆಟಲ್ ಡಿಟೆಕ್ಟರ್, ಟಾರ್ಚ್ ಪತ್ತೆಯಾಗಿವೆ.
ಸ್ಥಳಕ್ಕೆ ಎಲೆಕ್ಟ್ರಾನಿಕ್ಸಿಟಿ ಡಿಸಿಪಿ ನಾರಾಯಣ್, ಎಸಿಪಿ ಸತೀಶ್ ಮತ್ತು ಹೆಬ್ಬಗೋಡಿ ಪೊಲೀಸ್ ಇನ್ಸ್ಪೆಕ್ಟರ್ ಸೋಮಶೇಖರ್ ಭೇಟಿ ನೀಡಿದ್ದರು. ಆರೋಪಿಗಳ ಪತ್ತೆಗೆ ಮೂರು ತಂಡ ರಚಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.