ADVERTISEMENT

ಸೋಂಕು ತಡೆಗೆ ಸಹಕಾರ ಅಗತ್ಯ

ಕ್ರಿಮಿನಾಶಕ ಸಿಂಪಡಣೆ, ಮುಖ್ಯಾಧಿಕಾರಿ ಎ.ಎಚ್.ನಾಗರಾಜ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 7 ಜೂನ್ 2020, 10:00 IST
Last Updated 7 ಜೂನ್ 2020, 10:00 IST
ಕ್ರಿಮಿನಾಶಕ ಸಿಂಪಡಿಸುತ್ತಿರುವ ಅಗ್ನಿಶಾಮಕ ದಳದ ಸಿಬ್ಬಂದಿ
ಕ್ರಿಮಿನಾಶಕ ಸಿಂಪಡಿಸುತ್ತಿರುವ ಅಗ್ನಿಶಾಮಕ ದಳದ ಸಿಬ್ಬಂದಿ   

ದೇವನಹಳ್ಳಿ: ‘ನಗರದಲ್ಲಿ ಸೋಂಕು ತಡೆಗೆ ಕ್ರಿಮಿನಾಶಕ ಸಿಂಪಡಿಸಲಾಗುತ್ತಿದ್ದು ಸ್ಥಳೀಯರು ಸಹಕಾರ ನೀಡುವ ಅಗತ್ಯವಿದೆ’ ಎಂದು ಪುರಸಭೆ ಮುಖ್ಯಾಧಿಕಾರಿ ಎ.ಎಚ್.ನಾಗರಾಜ್ ಹೇಳಿದರು.

ಕ್ರಿಮಿನಾಶಕ ಸಿಂಪಡಣೆ ಕುರಿತು ಮಾಹಿತಿ ನೀಡಿದ ಅವರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುತ್ತಿರುವ ಅನಿವಾಸಿ ಭಾರತೀಯರು ಮತ್ತು ವಿವಿಧ ರಾಜ್ಯದವರನ್ನು ಬೆಂಗಳೂರು ನಗರ ಮತ್ತು ದೇವನಹಳ್ಳಿ ತಾಲ್ಲೂಕು ಕೇಂದ್ರದಲ್ಲಿರುವ ಬಾಲಕರ ವಿದ್ಯಾರ್ಥಿನಿಲಯದಲ್ಲಿ ಕ್ವಾರಂಟೈನ್‌ಗೆ ಒಳಪಡಿಸಲಾಗುತ್ತಿದೆ.

ಕ್ವಾರಂಟೈನ್‌ಗೆ ಒಳಪಟ್ಟವರಲ್ಲಿ ಈಗಾಗಲೇ ಒಟ್ಟು 15 ವ್ಯಕ್ತಿಗಳಿಗೆ ಸೋಂಕಿರುವುದು ದೃಢಪಟ್ಟಿದ್ದು ಸ್ಥಳೀಯರು ಆರೋಗ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಮೌಖಿಕವಾಗಿ ಒತ್ತಾಯಿಸುತ್ತಿದ್ದಾರೆ. ಹಿರಿಯ ಅಧಿಕಾರಿಗಳ ಆದೇಶದ ಮೇರೆಗೂ ಸೂಕ್ತಕ್ರಮ ಕೈಗೊಳ್ಳಲಾಗುತ್ತಿದೆ. ಇದು ನಮ್ಮ ಕರ್ತವ್ಯ ಎಂದರು.

ADVERTISEMENT

ಲಾಕ್‌ಡೌನ್‌ ಸಡಿಲಗೊಂಡಿರುವುದರಿಂದ ಯಥಾಸ್ಥಿತಿ ವಹಿವಾಟಿನಲ್ಲಿ ಸಾರ್ವಜನಿಕರು ತೊಡಗಿಸಿಕೊಂಡಿದ್ದಾರೆ. ಸೋಂಕಿನ ಬಗ್ಗೆ ಜಾಗೃತಿ ಮೂಡಿಸುತ್ತಿದ್ದರೂ ಕೆಲವರು ಅಂತರ ಕಾಯ್ದುಕೊಳ್ಳತ್ತಿಲ್ಲ. ಮಾಸ್ಕ್ ಬಗ್ಗೆಯೂ ನಿರ್ಲಕ್ಷ್ಯವೆಂದರೆ ಹೇಗೆ? ಆರೋಗ್ಯ ಸುರಕ್ಷತೆ ಪ್ರತಿಯೊಬ್ಬರ ಜವಾಬ್ದಾರಿ. ಸ್ಥಳೀಯವಾಗಿ ಯಾರಲ್ಲಿಯೂ ಸೋಂಕು ಕಂಡುಬಂದಿಲ್ಲ. ಇದೇ ರೀತಿ ಮುಂದುವರಿಯಬೇಕು ಎಂಬುದು ನಮ್ಮ ಅಭಿಪ್ರಾಯ. ದಿನನಿತ್ಯ ಮನೆ ಬಾಗಿಲಿಗೆ ಬರುವ ಪೌರ ಕಾರ್ಮಿಕರಿಗೆ ಸಕಾಲದಲ್ಲಿ ಕಸದ ತ್ಯಾಜ್ಯ ನೀಡಿ ಸ್ವಚ್ಛತೆಗೆ ಸಹಕರಿಸಬೇಕು. ಇಡಿ ನಗರವನ್ನು ಅಗ್ನಿಶಾಮಕ ದಳದ ವತಿಯಿಂದ ಕ್ರಿಮಿನಾಶಕ ಸಿಂಪಡಣೆ ಮಾಡಲಾಗುತ್ತಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.