ADVERTISEMENT

ವಿದ್ಯುತ್‌ ಕರ ನಿರಾಕರಣ ಚಳವಳಿಗೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 7 ಜೂನ್ 2020, 9:49 IST
Last Updated 7 ಜೂನ್ 2020, 9:49 IST
ಶನಿವಾರ ನಡೆದ ಸಭೆಯಲ್ಲಿ ಭಾಗವಹಿಸಿದ್ದ ನೂರಾರು ಜನ ನೇಕಾರರು
ಶನಿವಾರ ನಡೆದ ಸಭೆಯಲ್ಲಿ ಭಾಗವಹಿಸಿದ್ದ ನೂರಾರು ಜನ ನೇಕಾರರು   

ದೊಡ್ಡಬಳ್ಳಾಪುರ: ದುಬಾರಿ ವಿದ್ಯುತ್ ಬಿಲ್‌ ನೀಡುತ್ತಿರುವುದರ ವಿರುದ್ಧ ಹಾಗೂ ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣಕ್ಕೆ ಹೊರಟಿರುವ ಸರ್ಕಾರದ ನೀತಿ ಖಂಡಿಸಿ ಕರ್ನಾಟಕ ರಾಜ್ಯ ನೇಕಾರರ ಹಿತರಕ್ಷಣಾ ಸಮಿತಿ ವತಿಯಿಂದ ಜೂನ್‌ 8ರಂದು ಬೆಳಿಗ್ಗೆ 10.30ಕ್ಕೆ ನಗರದ ಬೆಸ್ಕಾಂ ಕಚೇರಿ ಮುಂದೆ ಪ್ರತಿಭಟನೆ ನಡೆಸಲು ಶನಿವಾರ ನಡೆದ ನೇಕಾರರ ಸಭೆಯಲ್ಲಿ ನಿರ್ಧರಿಸಲಾಗಿದೆ.

ಕರ್ನಾಟಕ ರಾಜ್ಯ ನೇಕಾರರ ಹಿತರಕ್ಷಣಾ ಸಮಿತಿ ನಗರ ಘಟಕದ ಅಧ್ಯಕ್ಷ ಪಿ.ಎ.ವೆಂಕಟೇಶ್‌, ಉಪಾಧ್ಯಕ್ಷ ಆರ್‌.ಎಸ್‌.ಶ್ರೀನಿವಾಸ್‌ ಮಾತನಾಡಿ , ಲಾಕ್‌ಡೌನ್‌ ಸಂದರ್ಭ ಸ್ಥಗಿತವಾಗಿರುವ ನೇಕಾರಿಕೆ ಉದ್ಯಮ ಇನ್ನು ಆರಂಭವೇ ಆಗಿಲ್ಲ. ಇಂತಹ ಸಂದರ್ಭದಲ್ಲಿ ಬೆಸ್ಕಾಂ ಸಿಬ್ಬಂದಿ ತಮಗೆ ಇಷ್ಟ ಬಂದಷ್ಟು ವಿದ್ಯುತ್‌ ಬಿಲ್‌ ಬರೆದುಕೊಂಡು ಹೋಗಿದ್ದಾರೆ. ಬಿಲ್‌ ಪಾವತಿ ಮಾಡದಿದ್ದರೆ ವಿದ್ಯುತ್‌ ಸಂಪರ್ಕವನ್ನು ಕಡಿತಮಾಡುವ ಎಚ್ಚರಿಕೆ ನೀಡುತ್ತಿದ್ದಾರೆ. ಇಲ್ಲಿಯವರೆಗೂ ವಿದ್ಯುತ್‌ ಮಗ್ಗಗಳಿಗೆ ರಿಯಾಯಿತಿ ದೊರೆಯುತಿತ್ತು. ವಿದ್ಯುತ್‌ ಕ್ಷೇತ್ರವನ್ನು ಖಾಸಗೀಕರಣ ಮಾಡಿದರೆ ನೇಕಾರರ ಬದುಕು ಮತ್ತಷ್ಟು ಕಷ್ಟವಾಗಲಿದೆ. ನೇಕಾರಿಕೆ ಉದ್ಯಮ ಉತ್ತಮಗೊಳ್ಳುವವರೆಗೂ ಗೃಹಬಳಕೆ ಹಾಗೂ ಮಗ್ಗದ ವಿದ್ಯುತ್‌ ಶುಲ್ಕ ಮನ್ನಾ ಮಾಡಬೇಕು ಎಂದು ಒತ್ತಾಯಿಸಿ ಕರ ನಿರಾಕರಣ ಚಳವಳಿ ಆರಂಭಿಸಲಾಗುತ್ತಿದೆ ಎಂದರು.

ರಾಜ್ಯ ನೇಕಾರರ ಹಿತರಕ್ಷಣಾ ಸಮಿತಿ ಕಾರ್ಯದರ್ಶಿ ಅಶೋಕ್‌, ಸಹ ಕಾರ್ಯದರ್ಶಿ ಮುನಿರಾಜು, ಖಜಾಂಚಿ ಕೆ.ಮಲ್ಲೇಶ್‌, ಪದಾಧಿಕಾರಿಗಳಾದ ರಾಮಚಂದ್ರ, ಚೌಡಯ್ಯ,ರಾಮಾಂಜಿನಪ್ಪ, ಈಶ್ವರ್‌, ಕೆ.ರಘುಕುಮಾರ್‌, ಕೃಷ್ಣಾರೆಡ್ಡಿ, ಆದಿನಾರಾಯಣ ರೆಡ್ಡಿ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.