ADVERTISEMENT

ನಾಳೆಯಿಂದ ಶನಿಮಹಾತ್ಮ ದರ್ಶನ

​ಪ್ರಜಾವಾಣಿ ವಾರ್ತೆ
Published 7 ಜೂನ್ 2020, 9:54 IST
Last Updated 7 ಜೂನ್ 2020, 9:54 IST
ಶನಿಮಹಾತ್ಮ ದೇವಾಲಯದಲ್ಲಿ ಭಕ್ತಾದಿಗಳು ಪಾಲಿಸಬೇಕಾಗಿರುವ ನಿಯಮಗಳ ಸೂಚನ ಫಲಕವನ್ನು ಅನಾವರಣಗೊಳಿಸಲಾಯಿತು
ಶನಿಮಹಾತ್ಮ ದೇವಾಲಯದಲ್ಲಿ ಭಕ್ತಾದಿಗಳು ಪಾಲಿಸಬೇಕಾಗಿರುವ ನಿಯಮಗಳ ಸೂಚನ ಫಲಕವನ್ನು ಅನಾವರಣಗೊಳಿಸಲಾಯಿತು   

ಕನಸವಾಡಿ (ದೊಡ್ಡಬಳ್ಳಾಪುರ): ಇಲ್ಲಿನ ಇತಿಹಾಸ ಪ್ರಸಿದ್ದ ಶನಿಮಹಾತ್ಮ ದೇವಾಲಯಕ್ಕೆ ಜೂನ್‌ 8ರಿಂದ ಭಕ್ತಾದಿಗಳ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ ಎಂದು ಶನಿಮಹಾತ್ಮಸ್ವಾಮಿ ದೇವಸ್ಥಾನ ಕಾರ್ಯಕಾರಿ ಸಮಿತಿ ಅಧ್ಯಕ್ಷ ಕೆ.ವಿ.ಪ್ರಕಾಶ್‌ ತಿಳಿಸಿದ್ದಾರೆ.

ಶನಿವಾರ ದೇವಾಲಯದ ಕಾರ್ಯಾಲಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ಲಾಕ್‌ಡೌನ್‌ ಜಾರಿಗೆ ಬಂದ ನಂತರ ದೇವಾಲಯಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಆದರೆ ಸಂಪ್ರದಾಯದಂತೆ ಪ್ರತಿ ದಿನವು ಬೆಳಿಗ್ಗೆ ಅರ್ಚಕರಿಂದ ಪೂಜೆ ಹಾಗೂ ಮಹಾಮಂಗಳಾರತಿ ನಡೆಸಲಾಗುತ್ತಿತ್ತು. ಸರ್ಕಾರ ಜೂನ್‌ 8ರಿಂದ ದೇವಾಲಯಕ್ಕೆ ಬರುವ ಭಕ್ತಾದಿಗಳ ಪ್ರವೇಶಕ್ಕೆ ಅವಕಾಶ ನೀಡಿ ಕೆಲ ನಿಬಂಧನೆಗಳನ್ನು ವಿಧಿಸಿದೆ. ದೇವಾಲಯದಲ್ಲಿ ಕಡ್ಡಾಯವಾಗಿ ಅಂತರವನ್ನು ಕಾಪಾಡುವುದು, ಸ್ವಚ್ಛತೆಗೆ ಪ್ರಥಮ ಆದ್ಯತೆ, ದೇವಾಲಯ ಪ್ರವೇಶಕ್ಕೂ ಮುನ್ನ ಕಾಲುಗಳನ್ನು ತೊಳೆದುಕೊಂಡು ಬರುವಂತೆ ನೀರಿನ ಸೌಕರ್ಯ, ಸ್ಯಾನಿಟೈಸರ್‌, ಥರ್ಮಲ್‌ಸ್ಕ್ರೀನಿಂಗ್‌ ನಡೆಸಲು ಅಗತ್ಯ ಇರುವ ಎಲ್ಲಾ ಸಿದ್ದತೆ ಕೈಗೊಳ್ಳಲಾಗಿದೆ’ ಎಂದರು.

ದೇವಾಲಯದ ಒಳಗೆ ಭಕ್ತಾದಿಗಳಿಗೆ ತೀರ್ಥ, ಪ್ರಸಾದ ಸೇರಿದಂತೆ ಯಾವುದನ್ನೂ ನೀಡುವುದಿಲ್ಲ. ಆದರೆ ದೇವಾಲಯದ ಅನ್ನದಾಸೋಹ ಭವನದಲ್ಲಿ ತಿಂಡಿಯ ವ್ಯವಸ್ಥೆ ಮಾಡಲಾಗಿದೆ. ದೇವಾಲಯದಲ್ಲಿ ಈ ಹಿಂದಿನಂತೆ ಬೆಳಿಗ್ಗೆ 7 ರಿಂದ 9 ಗಂಟೆವರೆಗೆ ಅಭಿಷೇಕ ನಡೆಯಲಿದೆ. 9 ಗಂಟೆಯಿಂದ ಸಂಜೆ 6 ಗಂಟೆವರೆಗೆ ದೇವರ ದರ್ಶನಕ್ಕೆ ಭಕ್ತಾದಿಗಳಿಗೆ ಅವಕಾಶ ನೀಡಲಾಗಿದೆ. ದೇವಾಲಯ ಪ್ರವೇಶಕ್ಕೆ 10 ವರ್ಷದ ಒಳಗಿನ ಮಕ್ಕಳು ಹಾಗೂ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಅವಕಾಶ ಇಲ್ಲ ಎಂದರು.

ADVERTISEMENT

ನೂತನ ಸಮಿತಿ ಅಸ್ತಿತ್ವಕ್ಕೆ:‘ಸುಪ್ರೀಂ ಕೋರ್ಟ್‌ ಆದೇಶದಂತೆ 2020ರ ಮಾರ್ಚ್‌ 19ರಿಂದ ದೇವಾಲಯಕ್ಕೆ ಹೊಸದಾಗಿ ಕಾರ್ಯಕಾರಿ ಸಮಿತಿ ಅಸ್ತಿತ್ವಕ್ಕೆ ಬಂದಿದೆ ಎಂದು ಮಾಹಿತಿ ನೀಡಿದ ಕಾರ್ಯಕಾರಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಸಿ.ಡಿ.ಸತ್ಯನಾರಾಯಣಗೌಡ, ಈ ಹಿಂದೆ ದೇವಾಲಯದ ಸಂಸ್ಥಾಪಕರಾಗಿದ್ದ ಗಂಗಹನುಮಯ್ಯ ಅವರ ಮಾರ್ಗದರ್ಶನದಲ್ಲಿ ರಚನೆಯಾಗಿದ್ದ ನಿಯಮದಂತೆಯೇ ಈಗಿನ ಸಮಿತಿ ಅಸ್ತಿತ್ವಕ್ಕೆ ಬಂದಿದೆ. ನೂತನ ಸಮಿತಿಯು ದೇವಾಲಯದ ಅಭಿವೃದ್ಧಿಗೆ ಅಗತ್ಯ ಇರುವ ಎಲ್ಲಾ ರೀತಿಯ ನಿರ್ಧಾರಗಳನ್ನು ಕೈಗೊಂಡು ರಾಜ್ಯದೆಲ್ಲೆಡೆ ದೇವಾಲಯದ ಕೀರ್ತಿ ಪ್ರಚಾರಕ್ಕೆ ಬರುವಂತೆ ಕೆಲಸ ಮಾಡಲಾಗುವುದು’ ಎಂದರು.

ನೂತನ ಕಾರ್ಯಕಾರಿ ಸಮಿತಿ: ಕೆ.ವಿ.ಪ್ರಕಾಶ್‌ ಅಧ್ಯಕ್ಷರು, ಸಿ.ಡಿ.ಸತ್ಯನಾರಾಯಣಗೌಡ ಪ್ರಧಾನ ಕಾರ್ಯದರ್ಶಿ, ಧರ್ಮದರ್ಶಿಗಳಾಗಿ ಜಿ.ರಾಜ್‌ಕುಮಾರ್‌, ಜಿ.ಸತ್ಯ ನಾರಾಯಣ, ಜಿ.ಮೋಹಿತ್‌, ಎಂ.ಶಿವಣ್ಣ, ಎಂ.ರಾಜಗೋಪಾಲ್‌, ಆರ್‌.ಆನಂದಕುಮಾರ್‌, ಬಿ.ಸಿದ್ದರಾಮಯ್ಯ, ರಾಮಾಂಜನೇಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.