ದೊಡ್ಡಬಳ್ಳಾಪುರ: ತಾಲ್ಲೂಕಿನ ಹೊಸಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಕಳಿ ಗ್ರಾಮದ ಹೊರವಲಯದ ಜಮೀನಿನಲ್ಲಿ ಬೆಳೆಗೆ ನೀರು ಹಾಯಿಸುವಾಗ ರೈತನ ಮೇಲೆ ಕರಡಿ ದಾಳಿ ನಡೆಸಿ, ಗಾಯಗೊಳಿಸಿದೆ.
ರೈತ ರಮೇಶ್ ಗಾಯಗೊಂಡವರು. ಇವರ ತೊಡೆಯ ಭಾಗಕ್ಕೆ ಗಂಭೀರ ಗಾಯವಾಗಿದೆ.
ಜೋಳದ ಬೆಳೆಗೆ ರಮೇಶ್ ನೀರು ಹಾಯಿಸುವಾಗ ಎರಡು ಮರಿಗಳನ್ನು ಬೆನ್ನಿನ ಮೇಲೆ ಕೂರಿಸಿಕೊಂಡು ಬಂದಿದ್ದ ಕರಡಿಯನ್ನು ಕಾಡು ಹಂದಿ ಇರಬಹುದು ಎಂದು ನೋಡಲು ಹೋದಾಗ ಮರಿಗಳೊಂದಿಗೆ ಇದ್ದ ಕರಡಿ ರಮೇಶ್ ಅವರ ಬೆನ್ನತ್ತಿ ಬಂದು ದಾಳಿ ನಡೆಸಿದೆ. ತಕ್ಷಣ ಎಚ್ಚೆತ್ತ ರೈತ ರಮೇಶ್ ಸಮೀಪದಲ್ಲೇ ಇದ್ದ ಮರವನ್ನು ಏರಿ ಕುಳಿತಿದ್ದಾರೆ. ಕರಡಿಯು ಸಹ ಮರ ಹತ್ತಿ ರಮೇಶ್ ಅವರ ತೊಡೆಯನ್ನು ಗಾಯಗೊಳಿಸಿದೆ.
ರಮೇಶ್ ಅವರ ಕೂಗಾಟ ಕೇಳಿಸಿಕೊಂಡ ಅಕ್ಕಪಕ್ಕದ ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತರು ಸ್ಥಳಕ್ಕೆ ದೌಡಾಯಿಸಿ ಬಂದು ಕರಡಿ ದಾಳಿಯಿಂದ ರಮೇಶ್ ಅವರನ್ನು ರಕ್ಷಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ
ಕೊಡಿಸಿದ್ದಾರೆ.
ಮಾಕಳಿ ಬೆಟ್ಟದಲ್ಲಿ ನಾಲ್ಕೈದು ಕರಡಿಗಳು ಇರುವುದನ್ನು ರೈತರು ಗಮನಿಸಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಈ ಬಗ್ಗೆ ಎಚ್ಚೆತ್ತುಕೊಂಡು ಕರಡಿಗಳನ್ನು ಸೆರೆ ಹಿಡಿದು ಅರಣ್ಯ ಪ್ರದೇಶಕ್ಕೆ ಸ್ಥಳಾಂತರ ಮಾಡುವಂತೆ ಸ್ಥಳೀಯ ರೈತ ಜಯರಾಮ್ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.