
ಬನ್ನೇರುಘಟ್ಟ (ಆನೇಕಲ್): ಬನ್ನೇರುಘಟ್ಟ ಪೊಲೀಸ್ ಠಾಣೆ ವ್ಯಾಪ್ತಿಯ ಸಕಲವಾರದ ಬಳಿ ಭಾನುವಾರ ಹಣ ಸಾಗಿಸುವ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕನೊಬ್ಬನನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ಮಾರಾಕಸ್ತ್ರ ತೋರಿಸಿ ₹31.30 ಲಕ್ಷ ನಗದು ದೋಚಿದ್ದಾರೆ.
ಉಡಾನ್ ಕ್ಯಾಶ್ ಕಲೆಕ್ಟಿಂಗ್ ಖಾಸಗಿ ಕಂಪನಿಯ ಹಣ ಸಂಗ್ರಹ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದ ಕೈಲಾಶ್ ಭಾನುವಾರ ವಿವಿಧ ಶಾಖೆಗಳಿಗೆ ತೆರಳಿ ₹31,38,625 ಸಂಗ್ರಹಿಸಿ ಸ್ಕೂಟರ್ ಡಿಕ್ಕಿಯಲ್ಲಿ ಇಟ್ಟುಕೊಂಡು ಹೊರಟಿದ್ದರು. ಎರಡು ಬೈಕ್ಗಳಲ್ಲಿ ಅವರನ್ನು ಹಿಂಬಾಲಿಸಿಕೊಂಡು ಬಂದ ನಾಲ್ವರು ದುಷ್ಕರ್ಮಿಗಳು ಬನ್ನೇರುಘಟ್ಟ ಬಳಿ ಸ್ಕೂಟರ್ ಅಡ್ಡಗಟ್ಟಿದರು.
ಕೈಲಾಶ್ ಅವರಿಗೆ ಲಾಂಗ್ ತೋರಿಸಿ ಬೆದರಿಸಿದ ದುಷ್ಕರ್ಮಿಗಳು ₹31.30 ಲಕ್ಷ ಇದ್ದ ಸ್ಕೂಟರ್ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಘಟನೆ ಸಂಭವಿಸಿದ ಜಾಗದ ಒಂದೆರಡು ಕಿಲೋ ಮೀಟರ್ ದೂರ ಹೋದ ನಂತರ ಸ್ಕೂಟರ್ನಲ್ಲಿದ್ದ ಹಣ ತೆಗೆದುಕೊಂಡು, ಸ್ಕೂಟರ್ ಅಲ್ಲಿಯೇ ಬಿಟ್ಟು ಹೋಗಿದ್ದಾರೆ. ಸಿಸಿಟಿವಿ ಕ್ಯಾಮೆರಾದಲ್ಲಿ ದರೋಡೆಯ ದೃಶ್ಯ ಸೆರೆಯಾಗಿದೆ.
ಕೈಲಾಶ್ ಉಡಾನ್ ಕ್ಯಾಶ್ ಕಲೆಕ್ಟಿಂಗ್ ಕಂಪನಿಯ ಏಜೆಂಟ್ ಆಗಿದ್ದು ಕಳೆದು ಐದು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದರು. ಇ– ಕಾಮರ್ಸ್ ಕಂಪನಿಗಳು ಮತ್ತು ಗೋದಾಮುಗಳಿಂದ ನಗದು ಸಂಗ್ರಹಿಸಿ ತೆರಳುತ್ತಿದ್ದಾಗ ಸಂಜೆ 4.30ಕ್ಕೆ ಮುಖ್ಯರಸ್ತೆಯಲ್ಲೇ ದರೋಡೆ ನಡೆದಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.