
ಮಾಗಡಿ: ತಾಲ್ಲೂಕಿನ ಸೋಲೂರು ಹೋಬಳಿ ಲಕ್ಕೇನಹಳ್ಳಿಯಲ್ಲಿ ಗುರುವಾರ ಕಾರೊಂದು ಎರಡು ಬೈಕ್ಗಳಿಗೆ ಡಿಕ್ಕಿ ಹೊಡೆದ ಪರಿಣಾಮ, ಒಬ್ಬ ಬೈಕ್ ಸವಾರ ಹಾಗೂ ಮತ್ತೊಂದು ಬೈಕ್ನ ಹಿಂಬದಿ ಕುಳಿತಿದ್ದ ಮಹಿಳೆ ಮೃತಪಟ್ಟಿದ್ದಾರೆ.
ತಾಲ್ಲೂಕಿನ ತೊರಿಮುಡಲುಪಾಳ್ಯ ಅಶ್ವಿನಿ (26) ಮತ್ತು ನೆಲಮಂಗಲ ನಿವಾಸಿ ಶ್ರೇಯಸ್ (28) ಮೃತರು. ಘಟನೆಯಲ್ಲಿ ಮಹಿಳೆ ಪತಿ ರಮೇಶ್ ಹಾಗೂ ಒಂದು ವರ್ಷದ ಪುತ್ರ ಯುವಾನ್ ಗಂಭೀರವಾಗಿ ಗಾಯಗೊಂಡಿದ್ದು, ನೆಲಮಂಗಲದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಂಗಳೂರಿನಲ್ಲಿ ಉದ್ಯೋಗ ಮಾಡುತ್ತಾ ಕುಟುಂಬದೊಂದಿಗೆ ನೆಲಸಿದ್ದ ರಮೇಶ್, ಹೊಸ ವರ್ಷದ ಪ್ರಯುಕ್ತ ತಮ್ಮ ಗ್ರಾಮಕ್ಕೆ ಬಂದಿದ್ದರು. ಬೆಂಗಳೂರಿನಲ್ಲಿ ಉದ್ಯೋಗ ನಿಮಿತ್ತ ನೆಲಸಿದ್ದ ಅವರು ಬೆಳಿಗ್ಗೆ ಗ್ರಾಮದಿಂದ ಬೆಳಗ್ಗೆ 7.30ರ ಸುಮಾರಿಗೆ ಬೆಂಗಳೂರು ಕಡೆಗೆ ಪತಿ ಮತ್ತು ಮಗುವಿನೊಂದಿಗೆ ಹೋಗುತ್ತಿದ್ದರು.
ಲಕ್ಕೇನಹಳ್ಳಿ ಬಳಿ ಕುಣಿಗಲ್ ಕಡೆಯಿಂದ ಮೂವರು ಯುವಕರಿದ್ದ ಕಾರು ವೇಗವಾಗಿ ಬಂದಿದೆ. ಚಾಲಕನ ನಿಯಂತ್ರಣ ಕಳೆದುಕೊಂಡ ಕಾರು ರಸ್ತೆ ವಿಭಜಕದ ಮೇಲೆ ಹತ್ತಿ, ಪಲ್ಟಿಯಾಗಿ ಪಕ್ಕದ ರಸ್ತೆಯಲ್ಲಿ ಹೋಗುತ್ತಿದ್ದ ಎರಡು ಬೈಕ್ಗಳಿಗೆ ಗುದ್ದಿದೆ. ಡಿಕ್ಕಿ ರಭಸಕ್ಕೆ ಎರಡೂ ಬೈಕ್ಗಳಲ್ಲಿದ್ದವರು ಕೆಳಕ್ಕೆ ಬಿದ್ದಿದ್ದಾರೆ.
ರಮೇಶ್ ಅವರ ಬೈಕ್ನ ಹಿಂಬದಿ ಕುಳಿತಿದ್ದ ಅಶ್ವಿನಿ ಅವರು ಮಗು ಸಮೇತ ಕೆಳಕ್ಕೆ ಬಿದ್ದಿದ್ದಾರೆ. ತಲೆಗೆ ತೀವ್ರ ಪೆಟ್ಟು ಬಿದ್ದಿದ್ದರಿಂದ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಗಂಭೀರವಾಗಿ ಗಾಯಗೊಂಡ ಮತ್ತೊಂದು ಬೈಕ್ನಲ್ಲಿದ್ದ ಶ್ರೇಯಸ್ ಅವರನ್ನು ನೆಲಮಂಗಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.