ದೇವನಹಳ್ಳಿ: ಕೇಂದ್ರ ಸರ್ಕಾರದ ರಾಷ್ಟ್ರೀಯ ಪೌರತ್ವ ನೋಂದಣಿ ಅಸ್ತ್ರ ದುರ್ಬಲ ಸಮುದಾಯಕ್ಕೆ ಮರಣ ಶಾಸನವಾಗಲಿದೆ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಒಕ್ಕೂಟ ಸಂಚಾಲಕ ಕಾರಹಳ್ಳಿ ಶ್ರೀನಿವಾಸ್ ಆರೋಪಿಸಿದರು.
ಇಲ್ಲಿನ ಅಂಬೇಡ್ಕರ್ ಭವನದಲ್ಲಿ ದಲಿತ ಸಂಘಟನೆಗಳ ಒಕ್ಕೂಟ ವತಿಯಿಂದ ಜ.26 ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾವನದಲ್ಲಿ ನಡೆಯಲಿರುವ ‘ರಾಜ್ಯ ಮಟ್ಟದ ಸಂವಿಧಾನ ಉಳಿವಿಗಾಗಿ ಜನಜಾಗೃತಿ ಆಂದೋಲನ ಸಮಾವೇಶ’ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಆದಿವಾಸಿ, ಅಲೆಮಾರಿ, ದಲಿತ ಹಾಗೂ ಹಿಂದುಳಿದ ಸಮುದಾಯಗಳ ವಿರುದ್ಧ ರಾಷ್ಟ್ರೀಯ ಪೌರತ್ವ ಕಾಯ್ದೆ, ಪೌರತ್ವ ನೋಂದಣಿ ಪ್ರಕ್ರಿಯೆಯ ಮೂಲಕ ದೇಶದ ಮೂಲ ನಿವಾಸಿಗರನ್ನು ಎರಡನೇ ದರ್ಜೆಯ ಪ್ರಜೆಗಳನ್ನಾಗಿಸುವ ಸಂಚನ್ನು ಆರ್.ಎಸ್.ಎಸ್, ಸಂಘ ಪರಿವಾರ ಮತ್ತು ಬಿಜೆಪಿ ಮಾಡುತ್ತಿವೆ. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಅಪ್ರತಿಮ ಪಾತ್ರ ವಹಿಸಿದ ಮುಸ್ಲಿಮರು ದೇಶ ವಿಭಜನೆ ಸಂದರ್ಭದಲ್ಲಿ ತಾವೇ ಆಯ್ಕೆ ಮಾಡಿಕೊಂಡು ಭಾರತದಲ್ಲಿ ಉಳಿದರೇ ಹೊರತು ಜಿನ್ನಾ ಹಾಗೂ ಸಾವರ್ಕರ್ ಪ್ರತಿಪಾದಿಸಿದ ಎರಡು ರಾಷ್ಟ್ರಗಳ ಸಿದ್ಧಾಂತಗಳಿಂದಲ್ಲ ಎಂಬುದನ್ನು ಬಿಜೆಪಿ ಅರ್ಥ ಮಾಡಿಕೊಳ್ಳಬೇಕು ಎಂದರು.
ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ತಿಮ್ಮರಾಯಪ್ಪ ಮಾತನಾಡಿ, ಪೌರತ್ವ ನೊಂದಣಿ ಜಾರಿಯಿಂದಾಗಿ ದೇಶದಲ್ಲಿ ಕೋಟ್ಯಂತರ ಅಮಾಯಕರು ಪರದಾಡಬೇಕಾಗಿದೆ. ಪೌರತ್ವ ನೊಂದಣಿ ಮೂಲಕ ಮೂಲ ನಿವಾಸಿಗರನ್ನು ಒಕ್ಕಲೆಬ್ಬಿಸುವ ಪ್ರಯತ್ನ ಆರಂಭವಾಗಿದ್ದು ಮುಂದಿನ ಹಂತದಲ್ಲಿ ಮತದಾನದ ಹಕ್ಕನ್ನು ಕಿತ್ತು ಕೊಳ್ಳವ ಅನುಮಾನ ಯಾಕೆ ಇರಬಾರದು ಎಂದು ಪ್ರಶ್ನಿಸಿದರು.
ದಲಿತ ಸಂಘರ್ಷ ಸಮಿತಿ ತಾಲ್ಲೂಕು ಪ್ರಧಾನ ಸಂಚಾಲಕ ಅತ್ತಿಬೆಲೆ ನರಸಪ್ಪ ಮಾತನಾಡಿ, ಅರ್ಧ ಶತಮಾನದ ಹಿಂದೆ ಬಹುತೇಕ ಭೂಮಿರಹಿತರ ಸಂಖ್ಯೆ ಹೆಚ್ಚು ಇದ್ದರೂ ಅನಕ್ಷರಸ್ಥ ತಳ ಸಮುದಾಯಗಳಲ್ಲಿ ಯಾವ ದಾಖಲೆ ಪತ್ರಗಳು ಇರಲು ಸಾಧ್ಯ. ದೇಶದಲ್ಲಿ ಸಾವಿರಗಟ್ಟಲೆ ಅಕ್ರಮ ವಲಸಿಗರನ್ನು ಪತ್ತೆ ಹಚ್ಚಲು ಯಾಕೆ ಕೇಂದ್ರ ಸರ್ಕಾರಕ್ಕೆ ಸಾಧ್ಯವಿಲ್ಲ. ಅದಕ್ಕಾಗಿ 130 ಕೋಟಿ ಜನರಿಗೇಕೆ ಸಂಕಷ್ಟ ನೀಡಬೇಕು ಎಂದು ಕೇಳಿದರು.
ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಜೋಗಿಹಳ್ಳಿ ನಾರಾಯಣಸ್ವಾಮಿ, ತಾಲ್ಲೂಕು ಸಂಚಾಲಕ ರಮೇಶ್, ಮುಖಂಡರಾದ ಎಚ್.ಕೆ.ವೆಂಕಟೇಶಪ್ಪ, ಮುನಿರಾಜು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.