
ವಿಜಯಪುರ (ದೇವನಹಳ್ಳಿ): ಪಟ್ಟಣದ ಚನ್ನಕೇಶವ ರಥೋತ್ಸವ ಮಂಗಳವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
ರಥೋತ್ಸವ ಅಂಗವಾಗಿ ಕೋಟೆ ಬೀದಿಯ ಚನ್ನಕೇಶವ ದೇವಾಲಯದಲ್ಲಿ ಬೆಳಗ್ಗೆಯಿಂದ ಸುಪ್ರಭಾತ ಸೇವೆ, ವಿಶೇಷ ಹೂವಿನ ಅಲಂಕಾರ, ಅಭಿಷೇಕ, ಮಂಗಳಾರತಿ ವಿವಿಧ ಧಾರ್ಮಿಕ ಪೂಜೆ ನಡೆದವು.
ಚಂದ್ರ ಗ್ರಹಣದ ಪ್ರಯುಕ್ತ ಶ್ರೀದೇವಿ ಭೂಮಿನ ಸಮೇತ ಚನ್ನಕೇಶವ ಉತ್ಸವ ಮೂರ್ತಿಗಳನ್ನು ಮಧ್ಯಾಹ್ನ 12 ಗಂಟೆಗೆ ದೇವಾಲಯದಿಂದ ಮೆರವಣಿಗೆ ಮೂಲಕ ಹೊತ್ತು ಗಾಂಧಿ ಚೌಕದ ರಥದಲ್ಲಿ ಪ್ರತಿಷ್ಠಾಪಿಸಲಾಯಿತು.
ಮಧ್ಯಾಹ್ನ 2 ಗಂಟೆಗೆ ರಥವನ್ನು ಭಕ್ತರ ಜಯ ಘೋಷಗಳೊಂದಿಗೆ ಗಾಂಧಿಚೌಕದಿಂದ ನಗರೇಶ್ವರ ದೇವಾಲಯದ ರಸ್ತೆಯ ಮೂಲಕ ಗಂಗಾ ತಾಯಿ ದೇವಾಲಯ ವೃತ್ತದವರೆಗೆ ಎಳೆದು ಸಂಭ್ರಮಿಸಿದರು. ವಿವಿಧಡೆಯಿಂದ ಆಗಮಿಸಿದ ಭಕ್ತರು ರಥಕ್ಕೆ ಬಾಳೆಹಣ್ಣು ಹಾಕಿ ಭಕ್ತಿ ಸಮರ್ಪಿಸಿದರು. ರಾತ್ರಿ ಮರಳಿ ಎಳೆಯಬೇಕಿದ್ದ ರಥವನ್ನು ಮಧ್ಯಾಹ್ನ 3.30ಕ್ಕೆ ಗಾಂಧಿಚೌಕಕ್ಕೆ ವಾಪಸ್ ತರಲಾಯಿತು.
ಚನ್ನಕೇಶವ ದೇವಾಲಯ, ನವಗ್ರಹ ದೇವಾಲಯ, ಮಹಂತಿನ ಮಠ ಸೇರಿದಂತೆ ವಿವಿಧೆಡೆ ಭಕ್ತರಿಗೆ ಪಾನಕ, ಮಜ್ಜಿಗೆ, ಕೋಸಂಬರಿ ವಿತರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.