ಆನೇಕಲ್: ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಜನಿಸಿದ್ದ ಹೆಣ್ಣು ಮಗುವೊಂದನ್ನು ಅಪರಿಚಿತ ಮಹಿಳೆಯೊಬ್ಬರು ಅಪಹರಿಸುವ ಘಟನೆ ಗುರುವಾರ ನಡೆದಿದೆ.
ಜಿಗಣಿ ಸಮೀಪದ ಶ್ರೀರಾಮಪುರದಲ್ಲಿ ವಾಸವಾಗಿದ್ದ ಅಸ್ಸಾಂ ಮೂಲದ ಚಂದ್ರರಾಣಿ ಮತ್ತು ಬಪ್ಪಂದಾಸ್ ದಂಪತಿಗೆ ಬುಧವಾರ ಆನೇಕಲ್ ಸರ್ಕಾರಿ ಆಸ್ಪತ್ರೆಯಲ್ಲಿ ಮಗು ಜನಿಸಿತ್ತು. ಬಾಣಂತಿ ಚಂದ್ರರಾಣಿ ಬಳಿಗೆ ಬಂದ ಅಪರಿಚಿತ ಮಹಿಳೆಯೊಬ್ಬರು ಸುಮಾರು 2 ಗಂಟೆಗಳಿಗೂ ಹೆಚ್ಚು ಕಾಲ ಸಲುಗೆಯಿಂದ ಮಾತನಾಡುತ್ತಾ ಕುಳಿತಿದ್ದರು. ತನ್ನ ಮಗಳು ಸಿಜೇರಿಯನ್ಗೆ ಬಂದಿದ್ದಾಳೆ ಎಂದು ಸುಳ್ಳು ಹೇಳಿ ಚಂದ್ರರಾಣಿಯೊಂದಿಗೆ ಮಾತುಕತೆಯಲ್ಲಿ ತೊಡಗಿ ವಿಶ್ವಾಸಗಳಿಸಿದಳು.
ಅಳುತ್ತಿದ್ದ ಮಗುವನ್ನು ಸಮಾಧಾನ ಪಡಿಸುವ ನಾಟಕವಾಡಿ ಓಡಾಡುತ್ತಾ ಮಗುವಿನೊಂದಿಗೆ ವಾರ್ಡ್ನಿಂದ ಹೊರಬಂದು ಬಾಣಂತಿಗೆ ಊಟ ತರುವ ನೆಪದಲ್ಲಿ ಆಸ್ಪತ್ರೆಯಿಂದ ಹೊರಟವಳು ವಾಪಸ್ ಆಸ್ಪತ್ರೆಗೆ ಬರದಿದ್ದಾಗ ಆತಂಕಗೊಂಡ ಬಾಣಂತಿ ಕೂಗಿಕೊಂಡಾಗ ಘಟನೆ ಗೊತ್ತಾಗಿದೆ. ಆಸ್ಪತ್ರೆಯ ಸಿಸಿಟಿವಿಯಲ್ಲಿ ದೃಶ್ಯ ದಾಖಲಾಗಿದೆ.
ಆನೇಕಲ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.