ದೊಡ್ಡಬಳ್ಳಾಪುರ: ಸುಮಾರು 20 ದಿನಗಳಿಂದಲೂ ದಿನ ಬಿಟ್ಟು ದಿನವಾದರು ಮಳೆ ಬೀಳುತ್ತಲೇ ಇದೆ. ಹೀಗಾಗಿ ಮಳೆಯೊಂದಿಗೆ ತೇಲಿ ಬರುತ್ತಿರುವ ಆಷಾಡ ಮಾಸದ ಮೋಡಗಳು ತಾಲ್ಲೂಕಿನ ಹುಲುಕುಡಿ ಬೆಟ್ಟವನ್ನು ತಾಗಿಕೊಂಡು ಹೋಗುತ್ತಿರುವ ದೃಶ್ಯ ಚಾರಣಿಗರ ಕಣ್ಮನ ತಣಿಯುವಂತೆ ಮಾಡಿವೆ.
ತಾಲ್ಲೂಕು ಕೇಂದ್ರದಿಂದ ಸುಮಾರು 13 ಕಿ.ಮೀ ದೂರದಲ್ಲಿನ ಹುಲುಕುಡಿ ಬೆಟ್ಟ ಚಾರಣಪ್ರಿಯರ ಹಾಗೂ ಶಿವ ಭಕ್ತರಿಗೆ ಅಚ್ಚುಮೆಚ್ಚಿನ ಬೆಟ್ಟವಾಗಿದೆ. ಸುಮಾರು 2 ಕಿ.ಮೀ. ಎತ್ತರ ಇರುವ ಬೆಟ್ಟಕ್ಕೆ ಹತ್ತಲು ಕಲ್ಲಿನ ಮೆಟ್ಟಿಲುಗಳು ಇರುವುದರಿಂದ ಸುಲಭವಾಗಿ ಬೆಟ್ಟದ ತುದಿಯನ್ನು ತಲುಪಬಹುದಾಗಿದೆ.
ಹುಲುಕುಡಿ ಬೆಟ್ಟದ ಮೇಲೆ ಚೋಳರ ಕಾಲದಲ್ಲಿ ನಿರ್ಮಿಸಲಾಗಿರುವ ದೇವಾಲಯ ಹಾಗೂ ವೀರಭದ್ರಸ್ವಾಮಿಯ ಮೂರ್ತಿಯ ದರ್ಶನ ಮಾಡಿ ಪುನಿತರಾಗಬಹುದು. ಬೆಟ್ಟದಲ್ಲಿನ ದೇವಾಲಯಕ್ಕೆ ಸಮೀಪದಲ್ಲೇ ಕಲ್ಲಿನ ಬಂಡೆಯಲ್ಲಿ ಸುಂದರವಾದ ಕಲ್ಯಾಣಿಯು ಇದ್ದು ಸದಾ ನೀರಿನಿಂದ ತುಂಬಿರುತ್ತದೆ.
‘ಸೂರ್ಯೋದಯ ಸಮಯಕ್ಕಾಗಲೇ ಬೆಟ್ಟದ ತುದಿಯನ್ನು ತಲುಪಿದ್ದರೆ ಪಶ್ಚಿಮದ ಕಡೆಯಿಂದ ಹತ್ತಿಯಂತೆ ತೇಲಿ ಬರುವ ಮೋಡಗಳ ಸಾಲು ಬೃಹತ್ ಕಲ್ಲು ಬಂಡೆಗಳು ಸೇರಿದಂತೆ ಇಡೀ ಬೆಟ್ಟಕ್ಕೆ ಮುತ್ತಿಗೆ ಹಾಕುತ್ತವೆ. ಬೆಟ್ಟದ ತಪ್ಪಲಿನ ಹಳ್ಳಿಗಳ ಕಡೆಗೆ ಒಮ್ಮೆ ಕಣ್ಣು ಹಾಸಿದರೆ ಇಡೀ ಪ್ರದೇಶ ಚಲನ ಚಿತ್ರಗಳಲ್ಲಿ ತೋರಿಸುವ ಶಿವನ ಕೈಲಾಸ ಪರ್ವತದ ದೃಶ್ಯದಂತೆ ಕ್ಷಣಕಾಲ ನಮ್ಮನ್ನು ಮೂಕವಿಸ್ಮಿತರನ್ನಾಗಿಸುತ್ತದೆ. ಕಲ್ಲು ಬಂಡೆಗಳ ಮೇಲೆ ಕುಳಿತಿರುವ ನಮ್ಮನ್ನು ಸಹ ಮೋಡುಗಳು ಮುತ್ತು ಕೊಟ್ಟುಹೋಗುತ್ತಿರುವಂತ ಅನುಭವ ಆಗುತ್ತದೆ’ ಎನ್ನುತ್ತಾರೆ ಚಾರಣಿಗ ಚಿದಾನಂದ್, ದಿವಾಕರ್ನಾಗ್.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.