ADVERTISEMENT

ವಿಮಾನ ನಿಲ್ದಾಣದ ಬಳಿ ಶೀತಲ ಸರಪಳಿ ಘಟಕ

ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಸ್ಥಾಪನೆಗೆ ₹ 22 ಕೋಟಿ ಅನುದಾನ ಮಂಜೂರು

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2018, 14:33 IST
Last Updated 3 ನವೆಂಬರ್ 2018, 14:33 IST
ಪೂಜನಹಳ್ಳಿ ಸರ್ಕಾರಿ ತೋಟಗಾರಿಕೆ ಕ್ಷೇತ್ರ
ಪೂಜನಹಳ್ಳಿ ಸರ್ಕಾರಿ ತೋಟಗಾರಿಕೆ ಕ್ಷೇತ್ರ   

ದೇವನಹಳ್ಳಿ: ತಾಲ್ಲೂಕಿನ ಪೂಜನಹಳ್ಳಿ ತೋಟಗಾರಿಕೆ ಕ್ಷೇತ್ರದ ಜಮೀನಿನಲ್ಲಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ‘ಸಮಗ್ರ ಶೀತಲ ಸರಪಳಿ ಘಟಕ’ ಸ್ಥಾಪನೆಗೆ ₹ 22 ಕೋಟಿ ಅನುದಾನ ಮಂಜೂರಾಗಿದೆ.

ಈ ಕುರಿತು ತೋಟಗಾರಿಕೆ ಇಲಾಖೆ ಮಾಹಿತಿ ನೀಡಿದೆ. ಇದರ ಅನ್ವಯ ಕೆಪೆಕ್ ಸಂಸ್ಥೆಯ ಯೋಜನೆಯಡಿ ತೋಟಗಾರಿಕೆ ಇಲಾಖೆ ಸಹಾಯಧನ ಕೋರಿ ಸಲ್ಲಿಸಿದ ಪ್ರಸ್ತಾವನೆಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರ ಅಧ್ಯಕ್ಷತೆಯಲ್ಲಿ ನಡೆದ ಯೋಜನೆಯ ರಾಜ್ಯ ಮಟ್ಟದ ಸಭೆಯಲ್ಲಿ ಅನುದಾನಕ್ಕೆ ಮಂಜೂರಾತಿ ದೊರಕಿದೆ.

ಯೋಜನೆಯ ಒಟ್ಟು ವೆಚ್ಚ ₹ 25.14 ಕೋಟಿ ಎನ್ನಲಾಗಿದೆ. ಯೋಜನಾ ಸಲಹೆಗಾರರ ಶುಲ್ಕ ₹ 54.99 ಲಕ್ಷ ಹಾಗೂ ರಿನಾಕ್ ಇಂಡಿಯಾಕ್ಕೆ ನೀಡಿದ ಕಾರ್ಯಾದೇಶದ ಮೊತ್ತ ₹ 24.60 ಕೋಟಿ ಎಂದು ನಿರ್ಧರಿಸಲಾಗಿದೆ. ಕೃಷಿ ವಿಕಾಸ ಯೋಜನೆಯಿಂದ ₹ 22 ಕೋಟಿ ಮಾತ್ರ ಮಂಜೂರಾಗಿದ್ದು ಬಾಕಿ ಅವಶ್ಯವಿರುವ ₹ 3.14 ಕೋಟಿಯನ್ನು ಕೆಪೆಕ್‌ನ ಸಂಪನ್ಮೂಲಗಳಿಂದ ಭರಿಸಲಾಗುತ್ತಿದೆ ಎಂದು ತಿಳಿಸಲಾಗಿದೆ.

ADVERTISEMENT

ಸರಕು ಸ್ವೀಕೃತಿ, ಸ್ವಚ್ಛಗೊಳಿಸುವ ಘಟಕ ಮತ್ತು ಸಂಸ್ಕರಣೆ ಹಾಗೂ ವಿಂಗಡಣೆ ಘಟಕ, ಪ್ರಿ ಕೂಲಿಂಗ್ ಘಟಕ 2, ದಾಳಿಂಬೆ ಹಣ್ಣಿನ ಬೀಜಗಳ ಪ್ಯಾಕಿಂಗ್ ಘಟಕ, ಸೊಪ್ಪು ಗೆಡ್ಡೆ ಇತರೆ ತರಕಾರಿಗಳ ಸಂಸ್ಕರಣಾ ಘಟಕ, ಮಾವು ಸಂಸ್ಕರಣಾ ಘಟಕ, ಬಿಸಿ ನೀರಿನ ಶಾಖೋಪಕರಣ ಘಟಕ, ಪ್ರತಿ ತಾಸಿಗೆ 900 ಕೆ.ಜಿ ಸ್ಪಾಂಜಿ ಟಿಶ್ಯೂ ಮತ್ತು ಮಾವಿಗಾಗಿ ಇತರೆ ಆಂತರಿಕ ವಿಂಗಡಣೆ ಯಂತ್ರೋಪಕರಣಗಳು, ಬಾಳೆ ಹಣ್ಣಿನ ಘಟಕ, ಹಣ್ಣು ಮಾಗಿಸುವ ಕೊಠಡಿಗಳು 5 ಹಾಗೂ ಆಡಳಿತ ಕಚೇರಿ ಮತ್ತು ಪ್ರಯೋಗಾಲಯ ಈ ತೋಟಗಾರಿಕೆ ಕೇಂದ್ರದಲ್ಲಿ ಇರಲಿದೆ.

ತೋಟಗಾರಿಕೆ ಇಲಾಖೆ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ರಾಜ್ಯದಿಂದ ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳ ರಫ್ತಿನ ಪ್ರಮಾಣ ಹೆಚ್ಚುತ್ತಿದ್ದು ಪೂರಕವಾಗಿ ಕೊಯ್ಲಿನ ನಂತರದ ಮೂಲ ಸೌಕರ್ಯಗಳ ಅವಶ್ಯಕತೆ ಇದೆ.

2013–14 ನೇ ಸಾಲಿನಲ್ಲಿ ಕೃಷಿ ಹಾಗೂ ತೋಟಗಾರಿಕೆ ಉತ್ಪನ್ನಗಳ ಒಟ್ಟು ರಪ್ತ್ತುಮೌಲ್ಯ ₹ 9,103 ಕೋಟಿಗಳಿಷ್ಟಿದ್ದು 2017–18 ನೇ ಸಾಲಿನಲ್ಲಿ ₹ 11,436 ಕೋಟಿಗೆ ಏರಿಕೆ ಕಂಡಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.