ದಾಬಸ್ ಪೇಟೆ: ನೆಲಮಂಗಲ ತಾಲ್ಲೂಕಿನ ಕೆರೆಕತ್ತಿಗನೂರು ಗ್ರಾಮದ ರೈತರಾದ ಬಾಬು ಮತ್ತು ವಾಸು ಬೆಲೆ ಕುಸಿತದಿಂದ ಕಂಗೆಟ್ಟು, ತಾವು ಬೆಳೆದ 300 ಮೂಟೆ ಎಲೆಕೋಸನ್ನು ಮಠ ಹಾಗೂ ಮಂದಿರಗಳಿಗೆ ಉಚಿತವಾಗಿ ನೀಡಿದ್ದಾರೆ.
ಅರ್ಧ ಎಕರೆ ಜಾಗದಲ್ಲಿ ಸುಮಾರು ₹40 ಸಾವಿರ ಖರ್ಚು ಮಾಡಿ ಕೋಸು ಬೆಳೆದಿದ್ದರು. ಮಾರುಕಟ್ಟೆಯಲ್ಲಿ ಒಂದು ಮೂಟೆ ಕೋಸಿಗೆ ಕೇವಲ ₹70ರಿಂದ ₹80ರಂತೆ ಮಾರಾಟವಾಗುತ್ತಿದೆ. ಇದರಿಂದ ಬೇಸರಗೊಂಡ ರೈತರು ಈ ನಿರ್ಧಾರಕ್ಕೆ ಬಂದಿದ್ದಾರೆ.
ಸಿದ್ಧಗಂಗಾ ಮಠ, ಆದಿಚುಂಚನಗಿರಿ ಮಠ, ಯಡಿಯೂರು ಸಿದ್ಧಲಿಂಗೇಶ್ವರ ದೇವಸ್ಥಾನ ಹಾಗೂ ಧರ್ಮಸ್ಥಳ ಮಂಜುನಾಥ ದೇವಸ್ಥಾನಕ್ಕೆ ಕಳುಹಿಸಲಾಗಿದೆ. ಕೋಸು ಕತ್ತರಿಸಿ ಮೂಟೆ ಮಾಡಿ ಲಾರಿಯಲ್ಲಿ ತೆಗೆದುಕೊಂಡು ಹೋಗಲು 40ಕ್ಕೂ ಹೆಚ್ಚು ಗ್ರಾಮಸ್ಥರು ಕೂಲಿಯಿಲ್ಲದೇ ಉಚಿತವಾಗಿ ಸಹಾಯ ಮಾಡಿದ್ದಾರೆ. ಸ್ಥಳೀಯ ಲಾರಿ ಮಾಲೀಕರೊಬ್ಬರು ಕೂಡಾ ಕೋಸನ್ನು ಮಠಗಳು ಹಾಗೂ ದೇಗುಲಗಳಿಗೆ ಕಳುಹಿಸುತ್ತಿದ್ದಾರೆ.
‘ಸಾವಿರಾರು ರೂಪಾಯಿ ಖರ್ಚು ಮಾಡಿ ಬೆಳೆ ತೆಗೆದಾಗ ಹೀಗೆ ದಿಢೀರ್ ಬೆಲೆ ಕುಸಿದರೆ ಏನು ಮಾಡುವುದು? ಬೆಂಬಲ ಬೆಲೆ ಸಿಗುತ್ತಿಲ್ಲ’ ಎಂದು ರೈತ ಬಾಬು ಬೇಸರ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.