ADVERTISEMENT

ವಿಜಯಪುರ: ಡಯಾಲಿಸಿಸ್ ಕೇಂದ್ರ ಸ್ಥಾಪನೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2024, 14:11 IST
Last Updated 9 ಮಾರ್ಚ್ 2024, 14:11 IST
ವಿಜಯಪುರದ ಸಮುದಾಯ ಆರೋಗ್ಯ ಕೇಂದ್ರ.
ವಿಜಯಪುರದ ಸಮುದಾಯ ಆರೋಗ್ಯ ಕೇಂದ್ರ.   

ವಿಜಯಪುರ(ದೇವನಹಳ್ಳಿ): ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಿ, ಇಲ್ಲಿ ಆಧ್ಯತೆ ಮೇರೆಗೆ ಡಯಾಲಿಸೀಸ್ ಕೇಂದ್ರ ಸ್ಥಾಪಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಪಟ್ಟಣದಲ್ಲಿ 23 ವಾರ್ಡ್‌ಗಳಿಂದ 50 ಸಾವಿರಕ್ಕೂ ಹೆಚ್ಚು ಜನ ಇದ್ದಾರೆ. ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಮೂತ್ರಪಿಂಡಗಳ ವೈಫಲ್ಯಕ್ಕೆ ತುತ್ತಾಗಿರುವ ಬಹಳಷ್ಟು ಮಂದಿ ಇದ್ದು, ತಾಲ್ಲೂಕು ಆಸ್ಪತ್ರೆ ಹೋಗಬೇಕಿದೆ.

ರೋಗಿಗಳು ಬಸ್‌ಗಳಲ್ಲಿ ಪ್ರಯಾಣ ಮಾಡಲು ಸಾಧ್ಯವಾಗದೇ, ಆಟೊಗಳಿಗೆ ದುಬಾರಿ ಹಣ ಕೊಟ್ಟು ಹೋಗಿ ಡಯಾಲಿಸಿಸ್ ಮಾಡಿಸಿಕೊಂಡು ಬರಲು ಸಾಧ್ಯವಾಗದ ಅಸಹಾಯಕರು, ಮನೆಗಳಲ್ಲೆ ಉಳಿದು ಗಂಭೀರವಾದ ಪರಿಸ್ಥಿತಿಗೆ ಒಳಗಾಗುತ್ತಿದ್ದಾರೆ.

ADVERTISEMENT

ಸರ್ಕಾರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಡಯಾಲಿಸಿಸ್‌ ಕೇಂದ್ರ ಆರಂಭಿಸಿದರೆ ಹೋಬಳಿಯಲ್ಲಿ ರೋಗಿಗಳಿಗೆ ಅನುಕೂಲ ಆಗಲಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ವಿಜಯಪುರದಿಂದ ದೇವನಹಳ್ಳಿ ತಾಲ್ಲೂಕು ಕೇಂದ್ರವು 10 ಕಿ.ಮೀ ದೂರದಲ್ಲಿದೆ. ಕಿಕ್ಕಿರಿದು ತುಂಬಿರುವ ಬಸ್‌ಗಳಲ್ಲಿ ಪ್ರಯಾಣಿಸಲು ಸಾಧ್ಯವಾಗುತ್ತಿಲ್ಲ. ಬಸ್ ನಿಲ್ದಾಣಕ್ಕೆ ನಡೆದುಕೊಂಡು ಹೋಗುವುದಕ್ಕೂ ಶಕ್ತಿಯಿಲ್ಲ. ಜೊತೆಯಲ್ಲಿ ಸಹಾಯಕ್ಕೆ ಬರುವುದಕ್ಕೆ ಯಾರೂ ಇರಲ್ಲ. ಒಂದು ದಿನ ಕೆಲಸ ಹೋಗುತ್ತದೆ ಎನ್ನುವ ಕಾರಣಕ್ಕೆ ಯಾರೂ ಬರಲ್ಲ. ಆಟೋದಲ್ಲಿ ಹೋಗಿ ಬರಲು ₹800 ರೂಪಾಯಿ ಕೇಳುತ್ತಾರೆ. ಪಟ್ಟಣದ ಆಸ್ಪತ್ರೆಯಲ್ಲೆ ಡಯಾಲಿಸಿಸ್ ಕೇಂದ್ರವಿದ್ದರೆ, ಅನುಕೂಲವಾಗುತ್ತದೆ ಎನ್ನುತ್ತಾರೆ ರೋಗಿಯೊಬ್ಬರು.

ತಾಲ್ಲೂಕು ಆಸ್ಪತ್ರೆಯಲ್ಲಿ ಡಯಾಲಿಸಿಸ್ ಕೇಂದ್ರವಿದೆ. ಯಂತ್ರೋಪಕರಣಗಳೂ ಇವೆ. ಪ್ರಸ್ತುತ ಡಯಾಲಿಸಿಸ್ ಮಾಡಿಕೊಡಲಾಗುತ್ತಿದೆ. ಸಮಯದಾಯ ಕೇಂದ್ರದಲ್ಲಿ ಡಯಾಲಿಸಿಸ್‌ ಕೇಂದ್ರ ಆರಂಭಿಸಬೇಕಾದರೆ ಆಸ್ಪತ್ರೆ ಮೇಲ್ದರ್ಜೆಗೇರಿಸಬೇಕು. ಪ್ರತ್ಯೇಕವಾದ ಕಟ್ಟಡಬೇಕು. ಪರಿಣಿತ ಸಿಬ್ಬಂದಿ ಕೊಡಬೇಕು. ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿಕೊಡಬಹುದಷ್ಟೆ, ಸರ್ಕಾರ ಆದ್ಯತೆ ಮೇರೆಗೆ ಮಂಜೂರು ಮಾಡಿದರೆ ಮಾಡಬಹುದು ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.