
ದೊಡ್ಡಬಳ್ಳಾಪುರ: ವಾರದ ಹಿಂದೆ ಡಿ.ಕ್ರಾಸ್ ರಸ್ತೆಯಲ್ಲಿ ಆಟೊ ಚಾಲಕ ಪವನ್ ಎಂಬ ಯುವಕನನ್ನು ಕೊಚ್ಚಿ ಕೊಲೆ ಮಾಡಲಾಗಿತ್ತು. ಕೊಲೆಯ ಐವರು ಆರೋಪಿಗಳನ್ನು ಗುರುವಾರ ಪೊಲೀಸರು ಬಂಧಿಸಿದ್ದಾರೆ. ಪ್ರೀತಿ ಬೇರೆ ಮಾಡಿದ ದ್ವೇಷ ಹಾಗೂ ಹವಾ ಸೃಷ್ಟಿಸುವ ಉದ್ದೇಶದಿಂದ ಕೃತ್ಯ ಎಸಲಾಗಿತ್ತು ಎಂಬುದು ಪೊಲೀಸ್ ವಿಚಾರಣೆಯಿಂದ ತಿಳಿದು ಬಂದಿದೆ.
ಕೊಲೆಯಾದ ಪವನ್ ಸ್ನೇಹಿತ ಪ್ರೇಮಿ ಎಂಬುವವರ ತಂಗಿಯೊಂದಿಗೆ ಕೊಲೆ ಆರೋಪಿ ಸಂದೀಪ್ ಸಲುಗೆಯಿಂದ ಇದ್ದ. ಇದೇ ವಿಚಾರವಾಗಿ ಪ್ರೇಮಿ ಹಾಗೂ ಪವನ್ ಇಬ್ಬರು ಸೇರಿ ಸಂದೀಪ್ ಮೇಲೆ ಒಂದು ತಿಂಗಳ ಹಿಂದೆ ಹಲ್ಲೆ ನಡೆಸಿ, ಮತ್ತೆ ತಂಗಿಯ ವಿಚಾರಕ್ಕೆ ಬಾರದಂತೆ ಎಚ್ಚರಿಕೆ ನೀಡಿದ್ದರು. ಆದರೆ ಇದೇ ದ್ವೇಷದಿಂದ ನಡೆಯುತ್ತಿದ್ದ ಶೀತಲ ಸಮರ ಪವನ್ ಕೊಲೆಯಲ್ಲಿ ಅಂತ್ಯವಾಗಿದೆ.
ಘಾಟಿಯಲ್ಲಿ ಲಾಂಗ್ ಖರೀದಿ: ಆರೋಪಿಗಳಾದ ಸಂದೀಪ್, ಉದಯ್, ಮಂಜುನಾಥ್ ತಾಲ್ಲೂಕಿನ ಘಾಟಿ ಕ್ಷೇತ್ರದಲ್ಲಿನ ಅಂಗಡಿಯಲ್ಲಿ ಲಾಂಗು, ಮಚ್ಚುಗಳನ್ನು 20 ದಿನಗಳ ಹಿಂದೆಯೇ ಖರೀದಿಸಿ ಸಂಗ್ರಹಿಸಿದ್ದರು. ಗಾಂಜಾ ವ್ಯಸನಿಗಳಾಗಿದ್ದ ಆರೋಪಿಗಳು ಸದಾ ಮತ್ತಿನಲ್ಲೇ ಇರುತ್ತಿದ್ದರು ಎನ್ನುವುದು ತನಿಖೆ ವೇಳೆ ಪೊಲೀಸರ ಗಮನಕ್ಕೆ ಬಂದಿದೆ.
ಹವಾ ಸೃಷ್ಟಿಸುವ ಚಟ: ದೊಡ್ಡಬಳ್ಳಾಪುರದ ಡಿ.ಕ್ರಾಸ್ ಏರಿಯ, ಪಾಲನಜೋಗಹಳ್ಳಿ ಹಾಗೂ ನಾಗದೇನಹಳ್ಳಿ ಸುತ್ತಮುತ್ತ ತಮ್ಮ ಗುಂಪಿನ ಹವಾ ಸೃಷ್ಟಿಸಿಕೊಂಡು ಮೆರೆಯಬೇಕು ಎನ್ನುವ ಚಟಕ್ಕೆ ಬಿದ್ದ ಐವರು ಆರೋಪಿಗಳು ಗಾಂಜಾ ದಾಸರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ವಿಚಾರಣೆ ವೇಳೆ ವೇಳೆ ಕೊಲೆ ಮಾಡಿರುವ ಬಗ್ಗೆ ಕಿಂಚಿತ್ತೂ ಪಶ್ಚಾತಾಪ ಇಲ್ಲದೆ ವರ್ತಿಸುತ್ತಿದ್ದಾರೆ ಎಂದು ಪೊಲೀಸರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಆರೋಪಿ ಹಿಡಿದುಕೊಟ್ಟ ಜಿಪಿಆರ್ಎಸ್: ಡಿ.ಕ್ರಾಸ್ ಸಮೀಪ ನಡೆದ ಪವನ್ ಕೊಲೆಗೆ ಬಳಸಿದ್ದ ಕಾರಿನಲ್ಲಿ ಜಿಪಿಆರ್ಎಸ್ ಅಳವಡಿಸಲಾಗಿತ್ತು. ಇದು ಆರೋಪಿಗಳ ಪತ್ತೆಗೆ ಸಹಕಾರಿಯಾಗಿದೆ.
ಕೊಲೆ ನಡೆದ ರಾತ್ರಿ ಡಿ.ಕ್ರಾಸ್ ಸಮೀಪದ ಅಂಗಡಿಯೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ ಕಾರು ಹಾದು ಹೋಗಿದ್ದ ದೃಶ್ಯಾವಳಿದ ಜಾಡು ಹಿಡುದು ಹಿಂಬಾಲಿಸಿದ್ದ ಪೊಲೀಸರಿಗೆ ಸಂದೀಪ್ ಬಾಡಿಗೆ ಕಾರಿಗೆ ಆಳವಡಿಸಿದ್ದ ಜಿಪಿಆರ್ಎಸ್ ಜಾಡು ಆರೋಪಿಗಳ ತಲೆಮರೆಸಿಕೊಂಡಿದ್ದ ಬೂದಿಗೆರೆಯ ಮನೆಯನ್ನು ತೋರಿಸಿದೆ.
ಜಿಪಿಆರ್ಎಸ್ ಆಧಾರದ ಮೇಲೆ ಆರೋಪಿಗಳ ಜಾಡಿ ಹಿಡಿದು ಹೊರಟ ಪೊಲೀಸರು ದಾರಿಯುದ್ದಕ್ಕೂ 300 ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಸಂಗ್ರಹಿಸಿ ಪರಿಶೀಲನೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಅಲ್ಲದೆ ಕೊಲೆ ನಡೆದ ಸಮಯದಲ್ಲಿ ಡಿ.ಕ್ರಾಸ್ ಸೇರಿದಂತೆ ಆರೋಪಿಗಳು ಸಂಚರಿಸಿದ್ದ ಕಡೆಯಲ್ಲಿನ ಮೊಬೈಲ್ ಟವರ್ ಲೊಕೇಶನ್ ಸಹ ಸಂಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.