ದೊಡ್ಡಬಳ್ಳಾಪುರ: ಪೌರಾಡಳಿತ ಇಲಾಖೆಯ ಸರ್ವರ್ನಲ್ಲಿ ಗುರುವಾರ ತಾಂತ್ರಿಕ ದೋಷ ಕಾಣಿಸಿಕೊಂಡ ಕಾರಣ ‘ಎ’ ಮತ್ತು ‘ಬಿ’ ಖಾತೆ ಪಡೆಯಲು ಬಂದಿದ್ದ ನೂರಾರು ಜನರು ಇಡೀ ದಿನ ಸರದಿ ಸಾಲಿನಲ್ಲಿ ಪರದಾಡುವಂತಾಯಿತು.
ಸಂಜೆಯವರೆಗೂ ಸರ್ವರ್ ಸಮಸ್ಯೆ ಸರಿ ಹೋಗದ ಕಾರಣ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಕೌಂಟರ್ ಮುಂದೆ ಆಸ್ತಿ ತೆರಿಗೆ ಪಾವತಿಸಲು ಸಂಜೆವರೆಗೂ ಜನರು ಸಾಲುಗಟ್ಟಿ ನಿಂತಿದ್ದರು.
ಖಾತೆ ಮಾಡಿಸಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುತ್ತಾರೆ ಎನ್ನುವ ಅಂದಾಜು ಇದ್ದರೂ ಹೆಚ್ಚುವರಿ ಕೌಂಟರ್ ತೆರೆಯದ ಕಾರಣ ಜನಸಂದಣಿ ಉಂಟಾಯಿತು.
ಮಹಿಳೆಯರು, ಹಿರಿಯ ನಾಗರಿಕರು ಹಾಗೂ ಅಂಗವಿಕಲರಿಗೆ ಪ್ರತ್ಯೇಕ ಕೌಂಟರ್ ತೆರೆಯದ ಕಾರಣ ಹಿರಿಯ ನಾಗರಿಕರು ಮತ್ತು ಅಂಗವಿಕಲರೂ ದಿನಗಟ್ಟಲೆ ಸಾಲಿನಲ್ಲಿ ನಿಲ್ಲಬೇಕಾಯಿತು. ಆದರೆ, ಸಂಜೆಯಾದರೂ ಸರ್ವರ್ ಸಮಸ್ಯೆ ಸರಿ ಹೋಗದ ಕಾರಣ ಆಸ್ತಿ ತೆರಿಗೆ ಪಾವತಿಗೆ ರಶೀದಿ ಪಡೆಯಲು ಸಾಧ್ಯವಾಗಲಿಲ್ಲ.
‘ಎ’ ಮತ್ತು ‘ಬಿ’ ಖಾತೆಗೆ ಅರ್ಜಿ ಸಲ್ಲಿಸಲು ಪ್ರಸಕ್ತ ಸಾಲಿನ ಆಸ್ತಿ ತೆರಿಗೆ ಪಾವತಿ ಕಡ್ಡಾಯ. ಸ್ಥಳೀಯ ಸಂಸ್ಥೆಗಳಲ್ಲಿ ತೆರಿಗೆ ಪಾವತಿಗೆ ಆನ್ಲೈನ್ ಸೌಲಭ್ಯ ಇದೆ. ಆದರೆ ಅದಕ್ಕೂ ಮುನ್ನ ಸ್ವತ್ತಿನ ತೆರಿಗೆ ಹಾಗೂ ಇತರ ಮಾಹಿತಿ ಒಳಗೊಂಡ ರಶೀದಿಯನ್ನು ಪೌರಾಡಳಿತ ಇಲಾಖೆಯ ವೆಬ್ಸೈಟ್ ಮೂಲಕ ಪಡೆಯಬೇಕು. ಸರ್ವರ್ ಸಮಸ್ಯೆ ಕಾರಣ ಇದು ಸಾಧ್ಯವಾಗಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.