ದೊಡ್ಡಬಳ್ಳಾಪುರ: ತಾಲ್ಲೂಕಿನಲ್ಲಿ ಶುಕ್ರವಾರ ರಾತ್ರಿ ಸುರಿದ ಹಿಂಗಾರು ಮಳೆಗೆ ನಂದಿಬೆಟ್ಟದ ಸಾಲಿನಲ್ಲಿ ಚನ್ನರಾಯಸ್ವಾಮಿ ಬೆಟ್ಟದ ತಪ್ಪಲಿನ ದೊಡ್ಡರಾಯಪ್ಪನಹಳ್ಳಿ ಗೌಡನಕೆರೆ, ಚಿಕ್ಕರಾಯಪ್ಪನಹಳ್ಳಿ ಕೂಸಮ್ಮನಕೆರೆ ಹಾಗೂ ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ ಎರಡೂ ನಗರಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಜಕ್ಕಲಮೊಡಗು ಜಲಾಶಯ ಕೋಡಿ ಬಿದ್ದಿವೆ.
ಜಕ್ಕಲಮೊಡಗು ಜಲಾಶಯ ಭರ್ತಿಯಾಗಿರುವುದರಿಂದ ಬೇಸಿಗೆಯಲ್ಲಿ ನಗರದ ಜನರ ಕುಡಿಯುವ ನೀರಿನ ಭವಣೆ ನೀಗಲಿದೆ.
ದೊಡ್ಡಬೆಳವಂಗಲ ಹೋಬಳಿಯ ಮಧುರನಹೊಸಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮಳೆಯ ಜೊತೆಗೆ ಗಾಳಿ ಸಹ ಬೀಸಿದ್ದರಿಂದ ರಾಗಿ ಹೊಲಗಳು ನೆಲಕಚ್ಚಿವೆ. ಇದರಿಂದ ಇನ್ನೂ ಈಗಷ್ಟೇ ರಾಗಿ ತೆನೆ ಹೊರುಬರುತ್ತಿರುವುದರಿಂದ ನೆಲಕಚ್ಚಿರುವ ರಾಗಿ ಹೊಲಗಳು ಕೊಳೆತು ಹಾಳಾಗುವ ಭೀತಿ ಮೂಡಿದೆ.
ಚಿಕ್ಕರಾಯಪ್ಪನಹಳ್ಳಿ ಕೂಸಮ್ಮನಕೆರೆಯಲ್ಲಿ ಬೇಸಿಗೆಯಲ್ಲಿ ಅಕ್ರಮ ಮಣ್ಣು ಸಾಗಿಸವವರು ಕೋಡಿ ಮೂಲಕ ಲಾರಿಗಳು ಸಂಚರಿಸಲು ದಾರಿಮಾಡಿಕೊಳ್ಳುವ ಸಲುವಾಗಿ ಕೋಡಿಗೆ ಅಡ್ಡಲಾಗಿ ಕಟ್ಟಲಾಗಿದ್ದ ಕಲ್ಲುಗಳನ್ನು ಕಿತ್ತು ಹಾಕಲಾಗಿದೆ. ಇದರಿಂದ ಶುಕ್ರವಾರ ರಾತ್ರಿ ಕೆರೆಗೆ ಹರಿದು ಬಂದಿರುವ ಮಳೆ ನೀರು ಹರಿದು ಹೊರ ಹೋಗುತ್ತಿವೆ.
ಕೋಡಿ ಕಲ್ಲುಗಳನ್ನು ದುರ್ತಿ ಮಾಡಿಸಿ ಕೆರೆಯಲ್ಲಿ ನೀರು ನಿಲ್ಲುವಂತೆ ಮಾಡಿಸಲು ಹಲವಾರು ಬಾರಿ ಗ್ರಾಮ ಪಂಚಾಯಿತಿಗೆ ಮನವಿ ಮಾಡಿದ್ದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದ ಕೆರೆಯಲ್ಲಿನ ನೀರು ಹರಿದು ಹೋಗುತ್ತಿವೆ ಎಂದು ದೊಡ್ಡರಾಯಪ್ಪನಹಳ್ಳಿ ಗ್ರಾಮದ ರೈತ ಚನ್ನೇಗೌಡ ದೂರಿದ್ದಾರೆ.
ಗ್ರಾಮದವರೇ ಸೇರಿಕೊಂಡು ಶನಿವಾರ ಕೋಡಿ ಕಲ್ಲುಗಳನ್ನು ದುರಸ್ತಿ ಮಾಡಿ ಕೆರೆಯ ನೀರು ಹರಿದು ಹೋಗುವುದನ್ನು ತಡೆಯಲಾಗಿದೆ. ಆದರೆ ಇದು ತಾತ್ಕಾಲಿಕ ಕೆಲಸ. ಕೋಡಿಕಲ್ಲುಗಳನ್ನು ಸುಸಜ್ಜಿತವಾಗಿ ದುರಸ್ತಿ ಮಾಡಿಸಬೇಕು. ಇದರಿಂದ ಬೇಸಿಗೆಯಲ್ಲಿ ಕೆರೆಯ ನೀರು ನಿಲ್ಲುವುದರಿಂದ ದನಕರುಗಳಿಗೆ ಹಾಗೂ ನಂದಿಬೆಟ್ಟದ ಸಾಲಿನಲ್ಲಿನ ಪ್ರಾಣಿ ಪಕ್ಷಗಳಿಗು ಕುಡಿಯುವ ನೀರು ದೊರೆಯಲಿವೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.