
ದೊಡ್ಡಬಳ್ಳಾಪುರ: ‘ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಎಸ್.ಐ.ಆರ್ ಎನ್ನುವ ಖಾಯ್ದೆ ಜನತೆಯ ಮತದಾನದ ಹಕ್ಕನ್ನು ಪ್ರಶ್ನೆ ಮಾಡುವಂತಿದೆ. ಇದರಿಂದ ಭಾರತದ ಪ್ರಜೆಗಳಾದ ನಮಗೆ ಸಂವಿಧಾನ ನೀಡಿರುವ ಮತದಾನ ಮಾಡುವ ಹಕ್ಕನ್ನು ಕಳೆದುಕೊಳ್ಳಲಿದ್ದೇವೆ’ ಎಂದು ಪ್ರೊ.ಇಕ್ಬಲ್ ಅಹಮದ್ ಹೇಳಿದರು.
ನಗರದಲ್ಲಿ ಶನಿವಾರ ಎದ್ದೇಳು ಕರ್ನಾಟಕ ಸಂಘಟನೆಯಿಂದ ನಡೆದ ಎಸ್ಐಆರ್ ಸಾಧಕ ಬಾಧಕಗಳನ್ನು ಪರಿಚಯಸುವ ಕಿರುಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.
ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ಈ ಕಾಯ್ದೆ ರೂಪಿಸಿದಂತೆ ಇದೆ. ಪ್ರಜಾಪ್ರಭುತ್ವ ಮತ್ತು ನಮ್ಮ ಸಂವಿಧಾನದಲ್ಲಿ ನಂಬಿಕೆ ಇರುವ ಎಲ್ಲರು ಇದನ್ನು ವಿರೋಧಿಸಬೇಕಿದೆ ಎಂದರು.
ಕಾಂಗ್ರೆಸ್ ಮುಖಂಡ ಜಿ.ಲಕ್ಷ್ಮಿಪತಿ, ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ ನೆಪದಲ್ಲಿ ದೇಶದ ಬಡವರು, ಅನಕ್ಷರಸ್ಥರನ್ನು ಮತದಾನದಿಂದ ವಂಚಿಸುವ ಹುನ್ನಾರ ನಡೆಯುತ್ತಿದೆ. ಕಾಂಗ್ರೆಸ್ ಪಕ್ಷ ಇದರ ವಿರುದ್ಧ ಈಗಾಗಲೇ ಹೋರಾಟ ನಡೆಸುತ್ತಿದೆ ಎಂದು ಹೇಳಿದರು.
ಕಾಂಗ್ರೆಸ್ ಮುಖಂಡ ರಾಜಗೋಪಾಲ್, ‘ಎಸ್ಐಆರ್ ಏಪ್ರಿಲ್ ನಿಂದ ಜಾರಿಯಾಗಲಿದೆ ಎಂದು ಪತ್ರಿಕೆಗಳಲ್ಲಿ ಬರುತ್ತಿದೆ. ಆದರೆ ನಮ್ಮ ಗ್ರಾಮಗಳಲ್ಲಿ ಈಗಾಗಲೇ ಮತದಾರರ ಪರಿಷ್ಕರಣೆ ನಡೆಯುತ್ತಿದೆ. ನನ್ನ ಪತ್ನಿ ಎರಡು ಅವಧಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದಾರೆ. ಈಗ ನಿಮ್ಮ ನಾಗರೀಕತೆ ಸಾಬಿತು ಮಾಡಿ ಎಂದು ನೋಟೀಸ್ ಜಾರಿ ಮಾಡಿದ್ದಾರೆ’ ಎಂದರು.
ಹಿರಿಯ ವಕೀಲ ಸಿದ್ಧಾರ್ಥ, ಛಲವಾದಿ ಮಹಾಸಭಾದ ಅಧ್ಯಕ್ಷ ನರೇಶ್,ನಿವೃತ್ತ ಬಿಇಒ ದೊಡ್ಡರಂಗಪ್ಪ, ಮುಖಂಡರಾದ ಆದರ್ಶ ಸಂಕ್ರಾಂತಿ, ರಾಜು ಅರದೇಶನಹಳ್ಳಿ, ಹೊನ್ನಪ್ಪ ಚಪ್ಪರಕಲ್ಲು,ಮಾಳವ ನಾರಾಯಣ್, ಗುರುರಾಜಪ್ಪ, ಮಹದೇವ್, ಕೇಶವ, ಮಂಜುನಾಥ್, ಯುವ ಕಾಂಗ್ರೆಸ್ ಮುಖಂಡ ಅಜಯ್, ಕನ್ನಡ ಪಕ್ಷದ ವೆಂಕಟೇಶ್, ಮಂಜುನಾಥ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.