ಆನೇಕಲ್: ರೈತರಿಗೆ ಆಧುನಿಕ ಕೃಷಿಯ ಬಗ್ಗೆ ಮಾರ್ಗದರ್ಶನ ನೀಡಲುಕೃಷಿ ಇಲಾಖೆ ಮಂಗಳವಾರತಾಲ್ಲೂಕಿನ ಹಂದೇನಹಳ್ಳಿಯಲ್ಲಿ ರೈತರು ಮತ್ತು ವಿಜ್ಞಾನಿಗಳ ಸಂವಾದ ಏರ್ಪಡಿಸಿತ್ತು.
ಆಧುನಿಕ ಕೃಷಿ ವಿಧಾನಗಳ ಕುರಿತು ಮಾತನಾಡಿದ ಕೃಷಿ ವಿಜ್ಞಾನಿ ಡಾ. ಕಾವ್ಯ ಅವರು, ‘ಕೃಷಿಯಲ್ಲಿ ವೈಜ್ಞಾನಿಕ ವಿಧಾನ ಅಳವಡಿಸಿಕೊಂಡರೆ ರೈತರು ಹೆಚ್ಚಿನ ಲಾಭಗಳಿಸಲು ಸಾಧ್ಯ. ಆಧುನಿಕ ಕೃಷಿಯಿಂದಾಗಿ ಉತ್ತಮ ಫಸಲು, ಇಳುವರಿ ಪಡೆಯಲು ಸಾಧ್ಯ. ಬಿತ್ತನೆ ಸಂದರ್ಭದಿಂದಲೂ ರೈತರು ವೈಜ್ಞಾನಿಕ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು. ಭತ್ತ, ಜೋಳ, ರಾಗಿ, ಕಡಲೆ, ಶೇಂಗಾ ಬೀಜಗಳಿಗೆ ಬೀಜೋಪಚಾರ ಮಾಡಬೇಕು’ ಎಂದರು.
‘ಬೀಜೋಪಚಾರ ಮಾಡುವು ದರಿಂದ ಬೆಳೆಗಳಿಗೆ ಬೆಂಕಿ ರೋಗ,ಸೊರಗು ರೋಗ, ಮಣ್ಣಿನಿಂದ ಬರುವ ರೋಗಗಳು ಬಾರದಂತೆತಡೆಯಬಹುದು. ಬೀಜೋಪಚಾರಕ್ಕೆರೈತರು ರೈತ ಸೇವಾ ಕೇಂದ್ರಗಳ ನೆರವು ಪಡೆಯಬೇಕು. ಸಂಯುಕ್ತ ಬಿತ್ತನೆ ಕೂರಿಗೆ ಬಳಸಬೇಕು. ಇದರಿಂದ ರಾಗಿ, ಮುಸುಕಿನ ಜೋಳ, ತೊಗರಿ, ನೆಲಗಡಲೆ, ಕಡಲೆ ಬಿತ್ತನೆಗೆ ಅನುಕೂಲವಾಗಲಿದೆ’ ಎಂದರು.
ಮಳೆಯಾಶ್ರಿತ ಪ್ರದೇಶಗಳಲ್ಲಿ ಕಡಿಮೆ ಅವಧಿಯಲ್ಲಿ ಹೆಚ್ಚಿನ ಪ್ರದೇಶದ ಬಿತ್ತನೆ ಮಾಡಲು ಸಂಯುಕ್ತ ಬಿತ್ತನೆ ಕೂರಿಗೆ ಉಪಯುಕ್ತವಾಗಿದೆ. ವಿವಿಧ ಹಂತಗಳಲ್ಲಿ ಯಂತ್ರಗಳ ಬಳಕೆಗೆ ರೈತರು ಕೃಷಿ ಇಲಾಖೆಯ ಸಲಹೆ ಮಾರ್ಗದರ್ಶನ ಪಡೆಯಬೇಕು ಎಂದು ಅವರು ಸಲಹೆ ನೀಡಿದರು.ಸಿಂಡಿಕೇಟ್ ರೈತ ಸೇವಾ ಸಂಘದ ನಿರ್ದೇಶಕ ರಾಜಣ್ಣ, ಗ್ರಾಮ ಪಂಚಾಯಿತಿ ಸದಸ್ಯ ಚೇತನ್, ಮಾಜಿ ಅಧ್ಯಕ್ಷ ಉಮಾ ಇದ್ದರು.
ರೈತರಿಗೆ ಸರ್ಕಾರದಿಂದ ವಿವಿಧ ಸೌಲಭ್ಯಗಳು ದೊರೆಯುತ್ತವೆ. ನರೇಗಾ ಯೋಜನೆಯಡಿಯಲ್ಲಿ ಎರೆಹುಳೆ ತೊಟ್ಟಿ
ನಿರ್ಮಿಸಲು ₹27 ಸಾವಿರ, ಇಂಗು ಗುಂಡಿ ಮರುಪೂರ್ಣ ಮಾಡಲು ₹19 ಸಾವಿರ, ಕಂದಕ ಬದು ನಿರ್ಮಾಣ ಮಾಡಲು ₹35 ಸಾವಿರ ನೀಡಲಾಗುತ್ತದೆ. ಈ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
‘ಸರ್ಕಾರದ ಯೋಜನೆ ಬಳಸಿಕೊಳ್ಳಿ’
‘ಕೃಷಿ ಇಲಾಖೆಯು ಅಗ್ರಿಕಲ್ಚರ್ ಟೆಕ್ನಾಲಜಿ ಮ್ಯಾನೇಜ್ಮೆಂಟ್ ಏಜೆನ್ಸಿ (ಆತ್ಮ) ಎಂಬ ಯೋಜನೆ ಜಾರಿಗೊಳಿಸಿದ್ದು, ರೈತ ಸೇವಾ ಕೇಂದ್ರಗಳಲ್ಲಿ ರೈತರಿಗೆ ಆನ್ಲೈನ್ ಮೂಲಕ ತರಬೇತಿ ಮತ್ತು ಮಾರ್ಗದರ್ಶನ ನೀಡಲಾಗುತ್ತದೆ. ರೈತರಿಗೆ ವೈಜ್ಞಾನಿಕ ಅರಿವು ಮೂಡಿಸುವುದು ಮತ್ತು ತಾಂತ್ರಿಕ ಬಳಕೆಯಲ್ಲಿ ಕೌಶಲ ಮೂಡಿಸುವ ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ಆತ್ಮ ಯೋಜನೆ ಅತ್ಯಂತ ಉಪಯುಕ್ತವಾಗಿದೆ’ ಎಂದು ಕೃಷಿ ಇಲಾಖೆಯ ಶಕುಂತಲಾ ಬಿರಾದರ್ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.