ವಿಜಯಪುರ(ದೇವನಹಳ್ಳಿ): ವಿಶ್ವ ಪರಿಸರ ದಿನದ ಅಂಗವಾಗಿ ಪಟ್ಟಣದ ಪುರಸಭೆ ಕಾರ್ಯಾಲಯದ ಆವರಣದಲ್ಲಿ ಪ್ರಗತಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಂದ ಪರಿಸರ ಸಂರಕ್ಷಣೆ ಜಾಗೃತಿ ಕಾರ್ಯಕ್ರಮ ನಡೆಯಿತು.
ಶಾಲಾ ವಿದ್ಯಾರ್ಥಿಗಳು ಹಸಿ ಕಸ, ಒಣ ಕಸ, ಆಸ್ಪತ್ರೆ ತ್ಯಾಜ್ಯ ಮತ್ತು ಇ-ತ್ಯಾಜ್ಯದ ವಿಂಗಡಣೆ, ವಿಲೇವಾರಿ ಕುರಿತು ಪ್ರಾತ್ಯಕ್ಷಿಕೆ ನೀಡಿ ಅರಿವು ಮೂಡಿಸಿದರು. ಬಿತ್ತಿಪತ್ರ ಪ್ರದರ್ಶನದ ಮೂಲಕ ಪರಿಸರ ಸಂರಕ್ಷಣೆ ಜಾಗೃತಿ ಮೂಡಿಸಿದರು.
ಪುರಸಭೆ ಅಧ್ಯಕ್ಷೆ ಭವ್ಯ ಮಧು ಮಾತನಾಡಿ, ‘ಹಸಿರೇ ನಮ್ಮ ಉಸಿರಾಗಿದ್ದು, ಮುಂದಿನ ಪೀಳಿಗೆಗಾಗಿ ಸ್ವಚ್ಛ ಸುಂದರ ಪ್ರಕೃತಿಯನ್ನು ಎಲ್ಲರೂ ನಿರ್ಮಿಸಬೇಕಿದೆ. ಪ್ರತಿಯೊಬ್ಬರು ಪರಿಸರ ಸಂರಕ್ಷಣೆಗೆ ಒತ್ತು ನೀಡಬೇಕು ಎಂದು ಹೇಳಿದರು.
ಅಪಾಯಕಾರಿ ಪ್ಲಾಸ್ಟಿಕ್ ಬಳಕೆ ತ್ಯಜಿಸಬೇಕು, ಗಿಡ-ಮರಗಳನ್ನು ಹುಟ್ಟಿದ ಮಗುವಿನಂತೆ ಪೋಷಿಸಬೇಕು. ಪರಿಸರ ದಿನ ಒಂದೇ ದಿನಕ್ಕೆ ಸೀಮಿತ ಮಾಡದೇ ಪ್ರತಿದಿನ ಪರಿಸರ ದಿನ ಎಂಬಂತೆ ಆಚರಿಸಬೇಕು ಎಂದರು.
ಪುರಸಭೆ ಸದಸ್ಯ ಎಂ.ಸತೀಶ್ ಕುಮಾರ್, ಪರಿಸರ ಸಂರಕ್ಷಣೆಗಾಗಿ ಪ್ರತಿ ಕುಟುಂಬವು ಪುರಸಭೆಗೆ ಸಹಕಾರ ನೀಡಬೇಕು ಎಂದರು.
ಪುರಸಭೆ ಉಪಾಧ್ಯಕ್ಷೆ ತಾಜುನ್ನಿಸಾ ಮಹಬೂಬ್ ಪಾಷ, ಸದಸ್ಯೆ ಶಿಲ್ಪಅಜಿತ್, ಪ್ರಗತಿ ಶಾಲೆ ಮುಖ್ಯ ಶಿಕ್ಷಕ ಬಸವರಾಜ್, ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.