ದೊಡ್ಡಬಳ್ಳಾಪುರ: ಕೆಲಸಕ್ಕೆ ಹಾಜರಾಗದೆ ಮುಷ್ಕರದಲ್ಲಿ ತೊಡಗಿಕೊಳ್ಳುವಂತೆ ವಿಡಿಯೊ ಮಾಡಿ, ವಾಟ್ಸ್ ಆ್ಯಪ್ನಲ್ಲಿ ಹರಿದುಬಿಟ್ಟಿದ್ದ ಚಾಲಕ ಎಂ.ಜಿ.ಕೃಷ್ಣಪ್ಪ ಅವರ ವಿರುದ್ಧ ಪ್ರಕರಣ ದಾಖಲಿಸಿ, ಎಸ್ಮಾ 2013ರ ಕಾಯ್ದೆ ಅಡಿಯಲ್ಲಿ ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಠಾಣೆ ಸಬ್ಇನ್ಸ್ಪೆಕ್ಟರ್ ಕೆ.ವೆಂಕಟೇಶ್ ತಿಳಿಸಿದ್ದಾರೆ.
ನಗರ ಪೊಲೀಸ್ ಠಾಣೆಗೆ ದೂರು ನೀಡಿರುವ ಕೆಎಸ್ಆರ್ಟಿಸಿ ಬಸ್ ಡಿಪೋ ವ್ಯವಸ್ಥಾಪಕ ಎಂ.ಬಿ.ಆನಂದ್ ಈ ಬಗ್ಗೆ ಮಾಹಿತಿ ನೀಡಿ, ‘ಎಂ.ಜಿ.ಕೃಷ್ಣಪ್ಪ ಅವರು ಡಿಪೋದಲ್ಲಿನ ನೌಕರರು ಕೆಲಸಕ್ಕೆ ಹಾಜರಾಗದಂತೆ, ಮುಷ್ಕರದಲ್ಲಿ ತೊಡಗಿಕೊಳ್ಳುವಂತೆ ಹೇಳಿದ್ದಾರೆ. ಸಾರ್ವಜನಿಕರು ಸರ್ಕಾರಿ ಬಸ್ನಲ್ಲಿ ಸಂಚರಿಸಿ ಜೀವಕ್ಕೆ ತೊಂದರೆಯಾದರೆ ನಾವು ಕಾರಣರಲ್ಲ ಎಂದು ವಿಡಿಯೊ ಮಾಡಿ ವಾಟ್ಸ್ ಆ್ಯಪ್ನಲ್ಲಿ ಹರಿದು ಬಿಟ್ಟು ಪ್ರಚೋದನೆ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಕೃಷ್ಣಪ್ಪ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಲಾಗಿತ್ತು’ ಎಂದರು.
10 ಮಾರ್ಗದಲ್ಲಿ ಬಸ್: ‘ಬುಧವಾರ 10 ಮಾರ್ಗಗಳಲ್ಲಿ ಬಸ್ಗಳು ಸಂಚರಿಸಿವೆ. ಗುರುವಾರ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಸ್ಗಳ ಸಂಚಾರ ಆರಂಭವಾಗಲಿವೆ. ಕೊರೊನಾ ಸೋಂಕಿನ ಸಂಕಷ್ಟದ ಸಮಯದಲ್ಲಿ ಮುಷ್ಕರ ನಡೆಸುವುದು ಸರಿಯಾದ ಕ್ರಮ ಅಲ್ಲ ಎನ್ನುವ ಬಗ್ಗೆ ಇಲಾಖೆಯಲ್ಲಿನ ಹಿರಿಯ ನೌಕರರಿಗೆ ಮನವರಿಕೆಯಾಗಿದೆ. ಅಲ್ಲದೆ ಯುಗಾದಿ ಹಬ್ಬ ಮುಕ್ತಾಯವಾಗಿರುವುದರಿಂದ ಗುರುವಾರದಿಂದ ಪ್ರಯಾಣಿಕರ ಸಂಚಾರ ಹೆಚ್ಚಾಗಲಿದೆ. ಈ ಹಿನ್ನೆಲೆಯಲ್ಲಿ ಹಿರಿಯ ನೌಕರರು ಕರ್ತವ್ಯಕ್ಕೆ ಹಾಜರಾಗುವ ಭರವಸೆ ನೀಡಿದ್ದಾರೆ. ಕೆಲಸಕ್ಕೆ ಹಾಜರಾಗುವ ನೌಕರರಿಗೆ ಪೊಲೀಸ್ ಭದ್ರತೆಯನ್ನು ಕಲ್ಪಿಸಲಾಗುತ್ತಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.