ಆನೇಕಲ್: ‘ಸರ್ಕಾರದ ಎಲ್ಲಾ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಕೊರೊನಾ ಸಂಕಷ್ಟ ಸಮರ್ಥವಾಗಿ ನಿಭಾಯಿಸಲು ಶ್ರಮಿಸಿದ್ದಾರೆ ಮತ್ತು ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ’ ಎಂದು ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಕೃಷ್ಣಪ್ಪ ಹೇಳಿದರು.
ತಾಲ್ಲೂಕಿನ ಜಿಗಣಿಯಲ್ಲಿ ಕೊರೊನಾ ವಾರಿಯರ್ಸ್ಗೆ ಅಭಿನಂದನೆ ಸಲ್ಲಿಸಿ ಅವರು ಮಾತನಾಡಿದರು.
‘ಆರೋಗ್ಯ, ಪೊಲೀಸ್, ಕಂದಾಯ, ಶಿಕ್ಷಣ ಸೇರಿದಂತೆ ಎಲ್ಲಾ ಇಲಾಖೆಗಳು ಸಂಕಷ್ಟದ ಸಮಯದಲ್ಲಿ ಸಹಕರಿಸಿದ್ದರಿಂದ ಕೊರೊನಾ ನಿಯಂತ್ರಿಸಲು ಸಾಧ್ಯವಾಯಿತು. ಹಲವಾರು ಸಂಘ ಸಂಸ್ಥೆಗಳು ಕೊರೊನಾ ಸಂದರ್ಭದಲ್ಲಿ ದಾಸೋಹ ಕೇಂದ್ರಗಳು ಮತ್ತು ಆಹಾರ ಕಿಟ್ಗಳನ್ನು ವಿತರಿಸುವ ಮೂಲಕ ಆರ್ಥಿಕವಾಗಿ ಹಿಂದುಳಿದವರಿಗೆ ಮತ್ತು ವಲಸೆ ಕಾರ್ಮಿಕರ ಕಷ್ಟಗಳಿಗೆ ಸ್ಪಂದಿಸಿದ್ದಾರೆ’ ಎಂದರು.
‘ಜಿಗಣಿ ಕೈಗಾರಿಕಾ ಪ್ರದೇಶವಾಗಿದ್ದು ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿರುವ ಏಕೈಕ ಪುರಸಭೆಯಾಗಿದೆ. ಜಿಗಣಿಯ ಅಭಿವೃದ್ಧಿಗೆ ಹಲವಾರು ಯೋಜನೆಗಳನ್ನು ಕೈಗೊಳ್ಳಲಾಗಿದೆ. ಅಭಿವೃದ್ಧಿಗೆ ಸ್ಥಳೀಯ ಕೈಗಾರಿಕೆಗಳು ಸಹಕಾರ ನೀಡಿದಾಗ ಮತ್ತಷ್ಟು ಅಭಿವೃದ್ಧಿ ಸಾಧ್ಯ’ ಎಂದರು.
ಜಿಗಣಿ ಸರ್ಕಲ್ ಇನ್ಸ್ಪೆಕ್ಟರ್ ಕೆ.ವಿಶ್ವನಾಥ್ ಮಾತನಾಡಿ, ‘ಖಾಸಗಿ ಆಸ್ಪತ್ರೆಗಳು ಕೊರೊನಾ ರೋಗಿಗಳಿಗೆ ದುಬಾರಿ ಶುಲ್ಕ ವಿಧಿಸುತ್ತಿದ್ದವು. ಅಜೀಮ್ ಪ್ರೇಮ್ಜೀ ಪ್ರತಿಷ್ಠಾನ ಮತ್ತು ಟೊಯೊಟಾ ಕಿರ್ಲೋಸ್ಕರ್, ಕೆಟಿಟಿಎಂ ಕಂಪನಿಗಳ ಸಹಕಾರದಿಂದ ಕೋವಿಡ್ ಕೇರ್ ಕೇಂದ್ರ ತೆರೆಯಲಾಗಿದೆ’ ಎಂದರು.
ಜಿಗಣಿ ಪುರಸಭಾ ಮುಖ್ಯಾಧಿಕಾರಿ ಅಮರನಾಥ್, ಜಿಗಣಿ ಸರ್ಕಾರಿ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಲತಾ, ಹಾರಗದ್ದೆ ಸರ್ಕಾರಿ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ನೀತಾರೆಡ್ಡಿ, ಎನಬಲರ್ಸ್ ಇಂಡಿಯಾ ಟ್ರಸ್ಟ್ನ ಚೇತನ್, ಟೈ ಇಂಡಿಯಾ ಕಂಪನಿಯ ಪರಮೇಶ್ವರನ್ ಬಾಲಕೃಷ್ಣನ್, ಸಂತೋಷ್ ರಾವ್, ಮುಖಂಡರಾದ ಮೆಡಿಕಲ್ ಬಾಬು, ರಾಮಚಂದ್ರ, ಗಿರೀಶ್, ಜೆ.ಸಿ.ಕೃಷ್ಣಪ್ಪ, ನಾಗರಾಜು, ಪ್ರವೀಣ್ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.