ದೇವನಹಳ್ಳಿ: ದೇಶದ ರೈತರ ಕೃಷಿ ಖಾಸಗಿ ಕಂಪನಿಗಳ ಕೃಷಿಯಾಗಲು ಕೇಂದ್ರ ಸರ್ಕಾರ ರೈತ ವಿರೋಧಿ ತಿದ್ದು
ಪಡಿ ಕಾಯ್ದೆಗಳನ್ನು ಜಾರಿಗೆ ತಂದಿದೆ ಎಂದು ಪ್ರಾಂತ ರೈತ ಸಂಘ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರ ತೇಜಸ್ವಿ ಆರೋಪಿಸಿದರು.
ಇಲ್ಲಿನ ಕೋಟೆ ಹಿಂಭಾಗದ ಬೈಪಾಸ್ ರಸ್ತೆ ಪಕ್ಕದಲ್ಲಿ ಭಾನುವಾರ ಪ್ರಾಂತ ರೈತ ಸಂಘದ ನೂತನ ಕಚೇರಿ ಉದ್ಘಾಟನೆ ಮತ್ತು ಜ.26 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆಯಲಿರುವ ಸಂಯುಕ್ತ ಹೋರಾಟ ಬೃಹತ್ ಸಮಾವೇಶ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಕೇಂದ್ರ ಸರ್ಕಾರ ತನ್ನ ಪರಿಮಿತಿ ಮೀರಿ ಬಿಜೆಪಿ ಆಡಳಿತ ನಡೆಸುತ್ತಿರುವ ರಾಜ್ಯಗಳಿಗೆ ಒತ್ತಾಯ ಪೂರ್ವಕವಾಗಿ ಭೂಸುಧಾರಣೆ ಕಾಯ್ದೆ ತಿದ್ದುಪಡಿ ಮಾಡುವಂತೆ ಸೂಚಿಸುತ್ತಿದೆ. ನೂರಾರು ಎಕರೆ ಭೂಮಿ ಖರೀದಿಸಲು ಕಾಯ್ದೆಯಲ್ಲಿ ಅವಕಾಶವಿರುವುದರಿಂದ ಜಮೀನು ಖರೀದಿಸುವ ಖಾಸಗಿ ಕಂಪನಿಗಳು ಕೃಷಿಯನ್ನೇ ಮಾಡುತ್ತೇವೆ ಎಂಬ ಖಾತರಿ ಇಲ್ಲ. ಭವಿಷ್ಯದಲ್ಲಿ ದೇಶದ ಆಹಾರ ಭದ್ರತೆಗೆ ಪೆಟ್ಟು ಬೀಳಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಪ್ರಸ್ತುತ ದೇಶದಲ್ಲಿ ಶೇ60ರಷ್ಟು ಕುಟುಂಬಗಳು ನ್ಯಾಯಬೆಲೆಯಲ್ಲಿ ಸಿಗುವ ಪಡಿತರ ಧಾನ್ಯ ಅವಲಂಭಿಸಿ ಜೀವನ ನಡೆಸುತ್ತಿವೆ. ಭೂಮಿ ಖರೀದಿಸುವ ಖಾಸಗಿ ಕಂಪನಿಗಳು ಆಹಾರ ಧಾನ್ಯ ಬೆಳೆಯುವುದಿಲ್ಲ. ಹಣ್ಣು, ಹೂವು, ತರಕಾರಿ ಜಮೀನು ಕೊಟ್ಟ ರೈತರಿಂದ ಬೆಳೆಸಿ ವಿದೇಶಗಳಿಗೆ ರಪ್ತು ಮಾಡುತ್ತವೆ. ಆಹಾರ ಧಾನ್ಯ ಬೆಳೆದರೂ ದುಪ್ಪಟ್ಟು ಬೆಲೆಗೆ ಖರೀದಿಸಬೇಕಾಗುತ್ತದೆ. ಪಡಿತರ ಧಾನ್ಯಗಳ ವಿತರಣೆ ಸ್ಥಗಿತಗೊಳ್ಳಲಿದೆ ಎಂದು ಅವರು ಹೇಳಿದರು.
ಸಿ.ಪಿ.ಐ(ಎಂ) ಮುಖಂಡ ಮುನಿವೆಂಕಟಪ್ಪ ಹಾಗೂ ಜಿಲ್ಲಾ ಪ್ರಾಂತ ರೈತ ಸಂಘ ಅಧ್ಯಕ್ಷ ಎನ್.ವೀರಣ್ಣ ಮಾತನಾಡಿ, ಗ್ರಾಮಾಂತರ ಜಿಲ್ಲೆಯಿಂದ 250 ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಿಂದ 300 ಟ್ರ್ಯಾಕ್ಟರ್ ಮೂಲಕ ರೈತರು ಹೋರಾಟದಲ್ಲಿ ಭಾಗವಹಿಸಲಿದ್ದಾರೆ. ದೇವನಹಳ್ಳಿ ರಾಣಿಕ್ರಾಸ್ ಬಳಿ ಬೆ.10ಕ್ಕೆ ಸಮಾವೇಶಗೊಂಡು ನಂತರ ಬೆಂಗಳೂರು ನಗರದ ಕಡೆಗೆ ಸಾಗಲಿದೆ. ಆಕಸ್ಮಿಕ ಪೊಲೀಸರು ತಡೆ ಮಾಡಿದರೆ ಅದೇ ರಸ್ತೆ ಜಾಗದಲ್ಲಿ ಸಂಜೆವರೆಗೆ ಪ್ರತಿಭಟನೆ ನಡೆಸಲಾಗುವುದೆಂದು ಹೇಳಿದರು.
ಪ್ರಗತಿಪರ ಸಂಘಟನೆಗಳ ಒಕ್ಕೂಟ ತಾಲ್ಲೂಕು ಅಧ್ಯಕ್ಷ ಬಿ.ಕೆ.ಶಿವಪ್ಪ ಮಾತನಾಡಿ, ಸಂಯುಕ್ತ ಹೋರಾಟಕ್ಕೆ ಬೆಂಬಲವಿದೆ ಎಂದು ಹೇಳಿದರು. ಚಿಕ್ಕಬಳ್ಳಾಪುರ ಜಿಲ್ಲಾ ಪ್ರಾಂತ ರೈತ ಸಂಘ ಅಧ್ಯಕ್ಷ ಮುನಿಕೃಷ್ಣಪ್ಪ ಹಾಗೂ ವಿವಿಧ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.