ADVERTISEMENT

ಆನೇಕಲ್: ರೈತರ ನೋವಿಗೆ ಧ್ವನಿಯಾದ ಕವಿಗಳ ಹಾಡು

ಕೃಷಿ ನೀಡುವ ಖುಷಿ ಹಣ ನೀಡದು: ಕಿರುತೆರೆ ನಿರ್ದೇಶಕ ಟಿ.ಎನ್‌.ಸೀತಾರಾಮ್‌

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2025, 2:02 IST
Last Updated 8 ಆಗಸ್ಟ್ 2025, 2:02 IST
ಆನೇಕಲ್ ತಾಲ್ಲೂಕಿನ ಮುತ್ತಾನಲ್ಲೂರಿನಲ್ಲಿ ನಡೆಯುತ್ತಿರುವ ನಮ್ಮ ಭೂಮಿಗಾಗಿ ಹೋರಾಟ ಅಹೋರಾತ್ರಿ ಪ್ರತಿಭಟನಾ ಸ್ಥಳಕ್ಕೆ ಸಾಹಿತಿಗಳಾದ ಟಿ.ಎನ್‌.ಸೀತಾರಾಮ್‌, ಶೂದ್ರ ಶ್ರೀನಿವಾಸ್, ತಾ.ನಂ.ಕುಮಾರಸ್ವಾಮಿ ಭೇಟಿ ನೀಡಿ ರೈತರಿಗೆ ಬೆಂಬಲ ಸೂಚಿಸಿದರು
ಆನೇಕಲ್ ತಾಲ್ಲೂಕಿನ ಮುತ್ತಾನಲ್ಲೂರಿನಲ್ಲಿ ನಡೆಯುತ್ತಿರುವ ನಮ್ಮ ಭೂಮಿಗಾಗಿ ಹೋರಾಟ ಅಹೋರಾತ್ರಿ ಪ್ರತಿಭಟನಾ ಸ್ಥಳಕ್ಕೆ ಸಾಹಿತಿಗಳಾದ ಟಿ.ಎನ್‌.ಸೀತಾರಾಮ್‌, ಶೂದ್ರ ಶ್ರೀನಿವಾಸ್, ತಾ.ನಂ.ಕುಮಾರಸ್ವಾಮಿ ಭೇಟಿ ನೀಡಿ ರೈತರಿಗೆ ಬೆಂಬಲ ಸೂಚಿಸಿದರು   

ಆನೇಕಲ್: ಸರ್ಜಾಪುರ ಹೋಬಳಿಯಲ್ಲಿ ಕೆಐಎಡಿಬಿ ಭೂಸ್ವಾಧೀನ ವಿರೋಧಿಸಿ ಮುತ್ತಾನಲ್ಲೂರು ಗ್ರಾಮದಲ್ಲಿ ನಡೆಯುತ್ತಿರುವ ‘ನಮ್ಮ ಭೂಮಿಗಾಗಿ ಹೋರಾಟ’ ಅಹೋರಾತ್ರಿ ಪ್ರತಿಭಟನಾ ಸ್ಥಳದಲ್ಲಿ ಗುರುವಾರ ಕವಿಗಳ ಕಲರವ ಕಂಡು ಬಂದಿತು.

ಹಲವಾರು ಮಂದಿ ಲೇಖಕರು, ಪ್ರಾಧ್ಯಾಪಕರು, ಗಾಯಕರು ಹೋರಾಟಕ್ಕೆ ಬೆಂಬಲ ನೀಡಿ ಕವನ ವಾಚನ, ಗಾಯನ, ಕ್ರಾಂತಿ ಗೀತೆಗಳ ಮೂಲಕ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದರು.

‘ರೋಷಾಗ್ನಿಯ ಜ್ವಾಲೆ’ ಶೀರ್ಷಿಕೆಯಡಿ ಪ್ರಭಾಕರ್‌ ರೆಡ್ಡಿ, ‘ರೈತರ ಹೋರಾಟಕ್ಕೆ ನಮ್ಮ ಹೆಜ್ಜೆಗಳು’  ಆಶಾ, ‘ಫಲ ನೀಡುತ್ತದೆ ಹೋರಾಟ’ ಎಂಬ ಶೀರ್ಷಿಕೆಯಡಿ ಕವನ ವಾಚನ ನಡೆಯಿತು.

ADVERTISEMENT

ಗಾಯಕರಾದ ರಾಮಕೃಷ್ಣಯ್ಯ, ಶ್ರೀವಲ್ಲಿ ಶೇಷಾದ್ರಿ, ಸರ್ಜಾಪುರ ಪ್ರಸಾದ್, ಹುಸ್ಕೂರು ಮುನಿಯಪ್ಪ, ಆಶಾ ಅವರು ಕ್ರಾಂತಿಗೀತೆಗಳ ಗಾಯನ ನಡೆಸಿಕೊಟ್ಟರು.

ಕಿರುತೆರೆ ನಿರ್ದೇಶಕ ಟಿ.ಎನ್‌.ಸೀತಾರಾಮ್‌ ಮಾತನಾಡಿ, ಮುತ್ತಾನಲ್ಲೂರು ಗ್ರಾಮದಲ್ಲಿ ರೈತರು ನಡೆಸುತ್ತಿರುವ ಹೋರಾಟ ಭೂಮಿಯ ಮತ್ತು ರೈತರ ಸಂಬಂಧದ ಭಾವನಾತ್ಮಕ ಹೋರಾಟವಾಗಿದೆ. ರೈತರು ಎಕರೆಗೆ ₹50 ಕೋಟಿ ನೀಡಿದರೂ ನಮ್ಮ ಜಮೀನನ್ನು ನೀಡುವುದಿಲ್ಲ ಎಂಬ ಸಂಕಲ್ಪ ಮಾಡುತ್ತಿರುವುದು ರೈತರ ದಿಟ್ಟತನಕ್ಕೆ ಸಾಕ್ಷಿಯಾಗಿದೆ. ಇದು ರೈತರಿಗೆ ಮಣ್ಣು, ಪ್ರಕೃತಿಯೊಂದಿಗೆ ಇರುವ ಭಾಂದವ್ಯದ ಪ್ರತೀಕ. ಹಣ ನೀಡದಿರುವ ಖುಷಿ ರೈತರಿಗೆ ಕೃಷಿ ನೀಡುತ್ತದೆ. ರೈತರ ಉಸಿರು ಇಲ್ಲಿ ನಿಟ್ಟುಸಿರಾಗಿದೆ ಎಂದರು.

ಮುತ್ತಾನಲ್ಲೂರು ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಇದನ್ನು ತಡೆಯಲು ರೈತರ ಅಹೋರಾತ್ರಿ ಹೋರಾಟಕ್ಕೆ ಎಲ್ಲರೂ ಬೆಂಬಲ ನೀಡಬೇಕು ಎಂದು ಕೋರಿದರು.

ಸಾಹಿತಿ ಶೂದ್ರ ಶ್ರೀನಿವಾಸ್‌, ಅಪಾರ್ಟ್‌ಮೆಂಟ್‌ಗಳು, ಬಹುಮಹಡಿ ಕಟ್ಟಡಗಳು, ಕಾರ್ಖಾನೆಗಳು ಸುಂದರ ವಾತಾವರಣವನ್ನು ವಿಷಮಯ ಮಾಡುತ್ತಿವೆ. ಕೆರೆಗಳು ಮತ್ತು ಪರಿಸರ ನಾಶವಾಗುತ್ತಿವೆ. ಹಳ್ಳಿಯ ಬದುಕು ಅಸ್ತಿತ್ವ ಕಳೆದುಕೊಳ್ಳುತ್ತಿದೆ. ಇಂತಹ ಸಂದರ್ಭದಲ್ಲಿ ರೈತರು ಒಗ್ಗೂಡಿ ಹೋರಾಟ ಮಾಡಿ ತಾವು ಯಾರಿಗೂ ಜಗ್ಗುವುದಿಲ್ಲ ಎಂಬುದನ್ನು ಆಡಳಿತಕ್ಕೆ ಮನದಟ್ಟು ಮಾಡುವ ಪ್ರಯತ್ನ ಶ್ಲಾಘನೀಯ. ಇದಕ್ಕೆ ಎಲ್ಲರ ಬೆಂಬಲವಿದೆ ಎಂದರು.

ಲೇಖಕ ತಾ.ನಂ.ಕುಮಾರಸ್ವಾಮಿ, ಸರ್ಜಾಪುರ ಹೋಬಳಿಯಲ್ಲಿ ರೇಷ್ಮೆ, ಕೃಷಿ, ತೋಟಗಾರಿಕೆ, ಹೈನುಗಾರಿಕೆಗೆ ತನ್ನದೇ ಆದ ವಿಶೇಷ ಸ್ಥಾನವಿದೆ. ಶೇ 80ರಷ್ಟು ರೈತರು ಕೃಷಿಯನ್ನು ಅವಲಂಭಿಸಿದ್ದಾರೆ. ಇಂತಹ ಫಲವತ್ತಾದ ಪ್ರದೇಶವನ್ನು ನಾಶ ಮಾಡಲು ಸರ್ಕಾರ ಭೂಸ್ವಾಧೀನಕ್ಕೆ ಮುಂದಾಗಿದೆ. ಭೂಸ್ವಾಧೀನವು ಭೂತಾಯಿಯ ಮೇಲಿನ ದೌರ್ಜನ್ಯವಾಗಿದೆ. ಚಳವಳಿಗೆ ಸಾವಿಲ್ಲ ಎಂಬುದನ್ನು ರೈತರು ಪ್ರದರ್ಶಿಸಬೇಕಾಗಿದೆ ಎಂದು ಹೇಳಿದರು.

ವಿಧಾನ ಪರಿಷತ್‌ ಮಾಜಿ ಸದಸ್ಯ ಮೋಹನ್‌ ಕುಮಾರ್‌ ಕೊಂಡಜ್ಜಿ, ಪ್ರಾಧ್ಯಾಪಕಿ ಸುನೀತಾ, ನಿವೃತ್ತ ಉಪನ್ಯಾಸಕರ ಪ್ರಭಾಕರರೆಡ್ಡಿ, ಜೇನುಗೂಡು ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯ ಮಹೇಶ್‌ ಊಗಿನಹಳ್ಳಿ, ವಕೀಲರ ಸಂಘದ ನಿರ್ದೇಶಕ ಪುರುಷೋತ್ತಮ್‌, ಮುಖಂಡರಾದ ಚಿನ್ನಪ್ಪ.ವೈ.ಚಿಕ್ಕಹಾಗಡೆ, ಪುಷ್ಪಮ್ಮ, ವಿಶ್ವನಾಥರೆಡ್ಡಿ ಇದ್ದರು.

ಸಿನಿಮಾ ಕಿರುತೆರೆಯಲ್ಲೂ ಹೋರಾಟ:

‘ಸಿನಿಮಾದಲ್ಲಿ ರೈತರ ಜಮೀನುಗಳನ್ನು ಉದ್ಯಮಿಗಳು ಕಸಿದುಕೊಳ್ಳುವ ಚಿತ್ರವೊಂದನ್ನು ನಾನು ನಿರ್ಮಿಸಿದ್ದೆ. ತಮ್ಮ ಧಾರವಾಹಿ ಮುಕ್ತ ಮುಕ್ತದಲ್ಲಿ ರೈತರ ಭೂಮಿಯನ್ನು ಉದ್ಯಮಿ ಕಸಿದುಕೊಳ್ಳುವ ಪ್ರಯತ್ನದ ವಿರುದ್ಧ ಹೋರಾಟ ಮಾಡುವ ಚಿತ್ರಣವಿದೆ. ಈ ಘಟನೆಯನ್ನು ನೋಡಿ ಆ ದೃಶ್ಯಗಳು ನೆನಪಾಗುತ್ತಿವೆ’ ಎಂದು ಕಿರುತೆರೆ ನಿರ್ದೇಶಕ ಟಿ.ಎನ್‌.ಸೀತಾರಾಮ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.