ADVERTISEMENT

ಮೌಲ್ಯಮಾಪನ ಕೇಂದ್ರ ಬದಲಿಸಲು ಪಟ್ಟು

ಪದವಿ ಕಾಲೇಜುಗಳ ಉಪನ್ಯಾಸಕರು ಪ್ರತಿಭಟನೆ–ಬಹಿಷ್ಕಾರ ಬೆದರಿಕೆ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2022, 6:18 IST
Last Updated 21 ಅಕ್ಟೋಬರ್ 2022, 6:18 IST
ಕೋಲಾರದಲ್ಲಿ ಗುರುವಾರ ಪದವಿ ಕಾಲೇಜುಗಳ ಉಪನ್ಯಾಸಕರು ಪ್ರತಿಭಟನೆ ನಡೆಸಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಸಚಿವ (ಮೌಲ್ಯಮಾಪನ) ಡಾ.ಡೊಮಿನಿಕ್‌ ಅವರಿಗೆ ಮನವಿ ಸಲ್ಲಿಸಿದರು. ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಎಂ.ಬಿ.ನೂರ್ ಅಹ್ಮದ್, ಕಾರ್ಯದರ್ಶಿ ಡಾ.ಎಂ.ರವೀಂದ್ರ, ಸಹ ಪ್ರಾಧ್ಯಾಪಕ ಡಾ.ಆರ್‌.ಶಂಕರಪ್ಪ ಇದ್ದಾರೆ
ಕೋಲಾರದಲ್ಲಿ ಗುರುವಾರ ಪದವಿ ಕಾಲೇಜುಗಳ ಉಪನ್ಯಾಸಕರು ಪ್ರತಿಭಟನೆ ನಡೆಸಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಸಚಿವ (ಮೌಲ್ಯಮಾಪನ) ಡಾ.ಡೊಮಿನಿಕ್‌ ಅವರಿಗೆ ಮನವಿ ಸಲ್ಲಿಸಿದರು. ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಎಂ.ಬಿ.ನೂರ್ ಅಹ್ಮದ್, ಕಾರ್ಯದರ್ಶಿ ಡಾ.ಎಂ.ರವೀಂದ್ರ, ಸಹ ಪ್ರಾಧ್ಯಾಪಕ ಡಾ.ಆರ್‌.ಶಂಕರಪ್ಪ ಇದ್ದಾರೆ   

ಕೋಲಾರ: ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಪದವಿ ಮೌಲ್ಯಮಾಪನ ಕೇಂದ್ರವನ್ನು ಬದಲಾಯಿಸಬೇಕೆಂದು ಒತ್ತಾಯಿಸಿ ಪದವಿ ಕಾಲೇಜುಗಳ ಉಪನ್ಯಾಸಕರು ಗುರುವಾರ ನಗರದ ಸರ್ವಜ್ಞ ಉದ್ಯಾನದ ಬಳಿ ಪ್ರತಿಭಟನೆ ನಡೆಸಿದರು.

ಸ್ಥಳಕ್ಕೆ ಬಂದ ವಿಶ್ವವಿದ್ಯಾಲಯದ ಕುಲಸಚಿವ (ಮೌಲ್ಯಮಾಪನ) ಡಾ.ಡೊಮಿನಿಕ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.

‘4 ಮತ್ತು 6ನೇ ಸೆಮಿಸ್ಟರ್ ಪದವಿ ಪರೀಕ್ಷೆಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕೇಂದ್ರ ಬೆಂಗಳೂರಿನ ಸರ್ವಜ್ಞಾ ನಗರದಲ್ಲಿದ್ದು, ಕೋಲಾರ, ದೇವನಹಳ್ಳಿ, ಚಿಕ್ಕಬಳ್ಳಾಪುರ ಕಡೆಯಿಂದ ಉಪನ್ಯಾಸಕರು ಮೌಲ್ಯಮಾಪನ ನಡೆಸುವುದಕ್ಕೆ ಹೋಗಿ ಬರಲು ತೊಂದರೆಯಾಗುತ್ತದೆ. ಕೇಂದ್ರವನ್ನು ಬೆಂಗಳೂರು ನಗರದ ಹೊರಗೆ ಹೊಸಕೋಟೆ, ಕೆ.ಆರ್‌.ಪುರಂ ಅಥವಾ ಕೋಲಾರದಂಥ ಅನುಕೂಲಕರವಾದ ಸ್ಥಳದ ಯಾವುದಾದರೂ ಕಾಲೇಜಿನಲ್ಲಿ ಮಾಡಬೇಕು’ ಎಂದು ಉಪನ್ಯಾಸಕರು
ಒತ್ತಾಯಿಸಿದರು.

ADVERTISEMENT

‘ಉಪನ್ಯಾಸಕರು 3 ಬಸ್‌ ಬದಲಾಯಿಸಿಕೊಂಡು ಹೋಗಿ ಬರಬೇಕಿದೆ. ಅಷ್ಟೇ ಅಲ್ಲದೆ ವಿಶ್ವವಿದ್ಯಾಲಯದ 2022-23ನೇ ಸಾಲಿನ ಪ್ರಥಮ ಪದವಿ ತರಗತಿ ಶುರು ಮಾಡಿಸಿದ್ದು, ಸುಮಾರು ಅಧ್ಯಾಪಕರು ಬೆಳಿಗ್ಗೆ ಕಾಲೇಜಿನಲ್ಲಿ ಪಾಠ ಮಾಡಿ, ನಂತರ ಮೌಲ್ಯಮಾನಕ್ಕೆ ತೆರಳಬೇಕಿದೆ. ಬಸ್ಸಿನಲ್ಲಿ ತೆರಳಿದರೆ ಮಧ್ಯಾಹ್ನ 3 ಗಂಟೆಯಾಗುತ್ತದೆ. ಮೌಲ್ಯಮಾಪನ ಮುಗಿಸಿ ಮನೆಗೆ ಬರುವಷ್ಟರಲ್ಲಿ ರಾತ್ರಿ 9 ಗಂಟೆ ಆಗಿರುತ್ತದೆ. ಮಹಿಳಾ ಅಧ್ಯಾಪಕರಿಗೆ ತುಂಬಾ ತೊಂದರೆಯಾಗುತ್ತಿದೆ’ ಎಂದು ಪ್ರತಿಭಟನಕಾರರು ಆರೋಪಿಸಿದರು.

‘ಬೆಂಗಳೂರು ಉತ್ತರ ವಿಶ್ವವಿದ್ಯಾಲಯವನ್ನು ಕೋಲಾರ, ಚಿಕ್ಕಬಳ್ಳಾಪುರ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರ ಅನುಕೂಲಕ್ಕಾಗಿ ಬೆಂಗಳೂರು ವಿಶ್ವವಿದ್ಯಾಲದಿಂದ ಪ್ರತ್ಯೇಕಿಸಲಾಯಿತು. ಆದರೆ, ಮೌಲ್ಯಮಾಪನ ಕೇಂದ್ರವನ್ನು ಬೆಂಗಳೂರು ನಗರದಲ್ಲಿ ಸಮಯಕ್ಕೆ ಸರಿಯಾಗಿ ತಲುಪಲು ಆಗದ, ಸಂಚಾರ ದಟ್ಟಣೆ ಇರುವ ಸ್ಥಳದಲ್ಲಿ ನಿಗದಿ ಮಾಡಿರುವುದು ಸರಿಯಲ್ಲ. ಮೌಲ್ಯಮಾಪನ ನಡೆಯುವ ಕಾಲೇಜಿನಲ್ಲಿ ಕೇವಲ 5 ಕೊಠಡಿ ಇದ್ದು, ತುಂಬಾ ಇಕ್ಕಟ್ಟಿನ ಸ್ಥಳದಲ್ಲಿ ಕಾರ್ಯನಿರ್ವಹಿಸಬೇಕಾಗಿದೆ. ನೆಲಮಹಡಿ, ಮೊದಲ ಮಹಡಿಯಲ್ಲಿ ಶಾಲೆ ಇದ್ದು, ಮಕ್ಕಳ ಗಲಾಟೆಯಿಂದ ಮೌಲ್ಯಮಾಪನ ಮಾಡಲು ತೊಂದರೆಯಾಗುತ್ತದೆ. ಮೌಲ್ಯಮಾಪಕರು ಕುಳಿತುಕೊಳ್ಳಲು ಕುರ್ಚಿಗಳ ಕೊರತೆ ಸಹ ಇದೆ. ಈ ಎಲ್ಲಾ ಸಮಸ್ಯೆಗಳ ಕುರಿತು ಈಗಾಗಲೇ ಮೌಲ್ಯಮಾಪನ ಕುಲಸಚಿವರಿಗೆ 500ಕ್ಕೂ ಹೆಚ್ಚು ಅಧ್ಯಾಪಕರು ಸಹಿ ಮಾಡಿರುವ ಮನವಿ ಪತ್ರವನ್ನು ಸಲ್ಲಿಸಿದ್ದರೂ ಕ್ರಮ ಕೈಗೊಂಡಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ನಮ್ಮ ನ್ಯಾಯ ಸಮ್ಮತ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಕೊನೆಯದಾಗಿ ಮೌಲ್ಯಮಾಪನ ಬಹಿಷ್ಕರಿಸಬೇಕಾಗುತ್ತದೆ’ ಎಂಬ ಎಚ್ಚರಿಕೆಯನ್ನೂ ನೀಡಿದರು.

ಪದವಿ ಕಾಲೇಜುಗಳ ಉಪನ್ಯಾಸಕರ ಸಂಘ ಜಿಲ್ಲಾಧ್ಯಕ್ಷ ಎಂ.ಬಿ.ನೂರ್ ಅಹ್ಮದ್, ಕಾರ್ಯದರ್ಶಿ ಡಾ.ಎಂ.ರವಿಂದ್ರ, ಸಹ ಪ್ರಾಧ್ಯಾಪಕರಾದ ಡಾ.ಆರ್‌.ಶಂಕರಪ್ಪ, ಬೃಂದಾದೇವಿ, ಹೇಮಮಾಲಿನಿ, ಕೆ.ಎನ್‌.ಶ್ರೀನಿವಾಸಗೌಡ, ರಮೇಶ್‌ಬಾಬು, ಮಂಜುನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.