ADVERTISEMENT

ನೇತ್ರ ಸಂರಕ್ಷಣೆಗೆ ಆದ್ಯತೆ ನೀಡಿ

ವಿಜಯಪುರದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ

​ಪ್ರಜಾವಾಣಿ ವಾರ್ತೆ
Published 5 ಜನವರಿ 2020, 13:14 IST
Last Updated 5 ಜನವರಿ 2020, 13:14 IST
ವಿಜಯಪುರದ ಶಹರಿ ರೋಜ್‌ಗಾರ್ ಯೋಜನಾ ಕಟ್ಟಡದಲ್ಲಿ ಆಯೋಜಿಸಿದ್ದ ಉಚಿತ ನೇತ್ರ ತಪಾಸಣಾ ಶಿಬಿರಕ್ಕೆ ಪುರಸಭಾ ಮುಖ್ಯಾಧಿಕಾರಿ ಎ.ಬಿ.ಪ್ರದೀಪ್ ಕುಮಾರ್ ಚಾಲನೆ ನೀಡಿದರು
ವಿಜಯಪುರದ ಶಹರಿ ರೋಜ್‌ಗಾರ್ ಯೋಜನಾ ಕಟ್ಟಡದಲ್ಲಿ ಆಯೋಜಿಸಿದ್ದ ಉಚಿತ ನೇತ್ರ ತಪಾಸಣಾ ಶಿಬಿರಕ್ಕೆ ಪುರಸಭಾ ಮುಖ್ಯಾಧಿಕಾರಿ ಎ.ಬಿ.ಪ್ರದೀಪ್ ಕುಮಾರ್ ಚಾಲನೆ ನೀಡಿದರು   

ವಿಜಯಪುರ: ದೃಷ್ಟಿ ಸಮಸ್ಯೆಯಾಗದಂತೆ ಗಮನ ಹರಿಸಬೇಕಾಗಿರುವುದು ಎಲ್ಲರ ಹೊಣೆಗಾರಿಕೆ ಎಂದು ಪುರಸಭಾ ಮುಖ್ಯಾಧಿಕಾರಿ ಎ.ಬಿ.ಪ್ರದೀಪ್‌ಕುಮಾರ್ ಹೇಳಿದರು.

ಇಲ್ಲಿನ ಶಹರಿ ರೋಜ್‌ಗಾರ್ ಯೋಜನಾ ಕಟ್ಟಡದಲ್ಲಿ ಪುರಸಭೆ ಹಾಗೂ ದೇವನಹಳ್ಳಿಯ ದೃಷ್ಟಿ ಕಣ್ಣಿನ ಆಸ್ಪತ್ರೆಯ ಸಹಕಾರದೊಂದಿಗೆ ಆಯೋಜಿಸಿದ್ದ ಉಚಿತ ನೇತ್ರ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು.

ದಿನನಿತ್ಯದ ಬದುಕಿನಲ್ಲಿ ದೃಷ್ಟಿಯನ್ನು ಕಾಪಾಡಿಕೊಳ್ಳುವುದು ಬಹಳಷ್ಟು ಪ್ರಾಮುಖ್ಯವಾಗಿದೆ. ಕಣ್ಣಿನ ಸಮಸ್ಯೆಗಳಿದ್ದರೂ ಕೆಲವರು ಅದರ ಬಗ್ಗೆ ಗಮನ ಹರಿಸುವುದಿಲ್ಲ. ಇದು ಮುಂದಿನ ಜೀವನದಲ್ಲಿ ಗಂಭೀರವಾದ ಸಮಸ್ಯೆಯನ್ನು ತಂದೊಡ್ಡಬಹುದು ಅಥವಾ ದೃಷ್ಟಿ ಕಳೆದುಕೊಳ್ಳಲು ಕಾರಣವಾಗಬಹುದು. ಆದ್ದರಿಂದ ಯಾರೂ ನಿರ್ಲಕ್ಷ್ಯ ಮಾಡದೇ ಮೂರು ತಿಂಗಳಿಗೊಮ್ಮೆಯಾದರೂ ಕಣ್ಣಿನ ತಪಾಸಣೆ ಮಾಡಿಸಿಕೊಳ್ಳಬೇಕು ಎಂದರು.

ADVERTISEMENT

ಸದೃಢ ಸಮಾಜ ನಿರ್ಮಾಣಕ್ಕಾಗಿ ಅಂಗೀಕಾರ್ ಆಂದೋಲನ ಯೋಜನೆಯಡಿಯಲ್ಲಿ ಸಾರ್ವಜನಿಕರಿಗೆ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಉಜ್ವಲ ಯೋಜನೆಯಡಿಯಲ್ಲಿ ಗ್ಯಾಸ್ ಸಂಪರ್ಕ, ಒಳಚರಂಡಿ ಸಂಪರ್ಕಗಳು, ಮನೆ ಕಟ್ಟಲು ಅನುದಾನ, ಗಿಡಗಳು ನೆಡಲು ಯೋಜನೆಗಳನ್ನು ನಿರ್ಮಿಸುವ ಕೆಲಸ ಮಾಡಲಾಗುತ್ತಿದೆ ಎಂದರು.

ಜಿಲ್ಲಾ ನಗರಾಭಿವೃದ್ಧಿ ಕೋಶದ ಸಾಮಾಜಿಕ ಅಭಿವೃದ್ಧಿ ತಜ್ಞ ರಿಜ್ವಾನ್ ಮಾತನಾಡಿ, ಮಹಾತ್ಮ ಗಾಂಧಿ ಅವರ 150 ನೇ ಜಯಂತಿ ಅಂಗವಾಗಿ ಪ್ರಧಾನ ಮಂತ್ರಿ ಆವಾಜ್ ಯೋಜನೆಯಡಿಯಲ್ಲಿ ಪರಿಸರ, ಸಹಬಾಳ್ವೆ, ಆರೋಗ್ಯ ಮತ್ತಿತರ ಪರಿಸರ ಸ್ನೇಹಿ ಸಾರ್ವಜನಿಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜನವರಿ 26 ರವರೆಗೂ ಹಮ್ಮಿಕೊಳ್ಳಲಾಗಿದೆ. ಜಿಲ್ಲಾಧಿಕಾರಿ ಇದರ ನೇತೃತ್ವ ವಹಿಸಿದ್ದು, ಜಿಲ್ಲೆಯ ನಾಲ್ಕೂ ತಾಲ್ಲೂಕುಗಳಲ್ಲಿ ಇವು ನಡೆಯುತ್ತಿವೆ. ಜನರು ಇಂತಹ ಕಾರ್ಯಕ್ರಮಗಳ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು.

123 ಕ್ಕೂ ಹೆಚ್ಚು ಸಾರ್ವಜನಿಕರ ನೇತ್ರ ತಪಾಸಣೆ ನಡೆಸಿ, 14 ಮಂದಿಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಸೂಚಿಸಿದರು.

ಪುರಸಭಾ ಆರೋಗ್ಯ ನಿರೀಕ್ಷಕ ಉದಯ್‌ಕುಮಾರ್, ಎಂಜಿನಿಯರ್ ಗಂಗಾಧರ್, ವ್ಯವಸ್ಥಾಪಕ ಆಂಜನೇಯಲು, ಕಿರಿಯ ಆರೋಗ್ಯ ನಿರೀಕ್ಷಕಿ ಪ್ರಭಾವತಿ, ದೃಷ್ಟಿ ಕಣ್ಣಿನ ಆಸ್ಪತ್ರೆಯ ಡಾ.ಮಮತ, ಪ್ರಮೀಳ, ಪುಷ್ಪ, ದೀಪಿಕಾ, ಎಸ್.ಜೆ.ಎಸ್.ಆರ್.ವೈ ಯೋಜನಾಧಿಕಾರಿ ಶಿವನಾಗೇಗೌಡ, ಲಿಂಗಣ್ಣ, ಜನಾರ್ದನ್, ಪೌರಕಾರ್ಮಿಕ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ನಾಗರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.