
ದಾಬಸ್ ಪೇಟೆ: ದ್ವಿಚಕ್ರ ವಾಹನ ಚಲಾವಣೆ ಮಾಡುವಾಗ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಹೆಲ್ಮೆಟ್ ಧರಿಸದೆ ಅಪಘಾತವಾದರೆ ಅಥವಾ ಕೆಳಗೆ ಬಿದ್ದು ತಲೆಗೆ ಪೆಟ್ಟಾದರೆ ಕೋಮಾಕ್ಕೆ ಹೋಗುವ ಹಾಗೂ ಸಾವಾಗುವ ಸಂಭವವಿದೆ ಎಂದು ನೆಲಮಂಗಲ ಪ್ರಾದೇಶಿಕ ಸಾರಿಗೆ ಕಚೇರಿಯ ಮೋಟರ್ ವಾಹನ ನಿರೀಕ್ಷಕ ದಿನೇಶ್ ಕುಮಾರ್ ಎಚ್ಚರಿಸಿದರು.
ದಾಬಸ್ ಪೇಟೆ ಪಟ್ಟಣದ ಶಿವಗಂಗೆ ರಸ್ತೆಯಲ್ಲಿ ಬುಧವಾರ ಪ್ರಾದೇಶಿಕ ಸಾರಿಗೆ ಇಲಾಖೆ ನೆಲಮಂಗಲ ಹಾಗೂ ವಂಡರ್ ಲಾ ಸಹಯೋಗದೊಂದಿಗೆ ಏರ್ಪಡಿಸಿದ್ದ 3ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಪ್ರಯುಕ್ತ ದ್ವಿಚಕ್ರ ವಾಹನ ವಾಹನ ಸವಾರರಿಗೆ ಉಚಿತವಾಗಿ ಹೆಲ್ಮೆಟ್ ವಿತರಣೆ ಮಾಡಿ ಅವರು ಮಾತನಾಡಿದರು.
ಆರ್ಟಿಒ ಹಾಗೂ ಪೊಲೀಸ್ ಇಲಾಖೆಯವರು ದಂಡ ಹಾಕುವುದಕ್ಕೆ ಅವಕಾಶ ಕೊಡಬಾರದು. ತಮ್ಮ ಪ್ರಾಣವನ್ನು ಉಳಿಸಿಕೊಳ್ಳಬೇಕು ಎಂದರು.
ದ್ವಿಚಕ್ರ ವಾಹನ ಸವಾರರು ಹೊರಗಡೆ ಹೊರಟಾಗ ಹೆಲ್ಮೆಟ್ ಧರಿಸಿಕೊಂಡು ಹೋಗುವುದನ್ನು ರೂಢಿಸಿಕೊಳ್ಳಿ. ಇದರಿಂದ ಅಪಘಾತವಾದರೂ ತೊಂದರೆ ಆಗುವುದು ತಪ್ಪುತ್ತದೆ ಎಂದು ಸಹಾಯಕ ಮೋಟಾರ್ ವಾಹನ ನಿರೀಕ್ಷಕ ಕೀರ್ತಿ ತಿಳಿಸಿದರು.
ಸುಮಾರು 250 ಮಂದಿ ದ್ವಿಚಕ್ರ ವಾಹನ ಸವಾರರಿಗೆ ಉಚಿತವಾಗಿ ಹೆಲ್ಮೆಟ್ ವಿತರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.