ADVERTISEMENT

ಹೊಸಕೋಟೆ: ಅಮಾನಿಕೆರೆ ಜೀವವೈವಿಧ್ಯತೆಗೆ ಆಪತ್ತು

ಕೊಳಚೆ ನೀರು, ಕಸ ವಿಲೇವಾರಿ–ಒತ್ತುವರಿಯಿಂದ ನಲುಗಿದ ಕೆರೆ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2025, 2:03 IST
Last Updated 9 ಆಗಸ್ಟ್ 2025, 2:03 IST
ದೊಡ್ಡ ಅಮಾನಿಕೆರೆಯಲ್ಲಿ ಪಕ್ಷಿಗಳು 
ದೊಡ್ಡ ಅಮಾನಿಕೆರೆಯಲ್ಲಿ ಪಕ್ಷಿಗಳು    

ಹೊಸಕೋಟೆ: ಕಸ ವಿಲೇವಾರಿ, ಕೊಳಚೆ ನೀರು ಮತ್ತು ಒತ್ತುವರಿಯಿಂದಾಗಿ ದೊಡ್ಡ ಅಮಾನಿ ಕೆರೆ ಮತ್ತು ಚಿಕ್ಕ ಅಮಾನಿಕೆರೆ ನಲುಗಿ ಹೋಗಿದ್ದು, ಕೆರೆ ಸ್ವರೂಪ ವಿರೂಪಗೊಂಡಿದೆ. ಇದರಿಂದ ನಗರದ ಜೀವವೈವಿಧ್ಯದ ತಾಣವಾಗಿರುವ ಕೆರೆಗಳಿಗೆ ಆಪತ್ತು ಎದುರಾಗಿದೆ. 

ಹೊಸಕೋಟೆ ಪಾಳೇಗಾರರ ಕಾಲದ ಈ ಕೆರೆಗಳಲ್ಲಿ ಅಪರೂಪದ ಅಳಿವಿನಂಚಿನ ಸುಮಾರು 266ಕ್ಕೂ ಹೆಚ್ಚು ಸ್ಥಳೀಯ ಮತ್ತು ವಲಸೆ ಪ್ರಾಣಿ–ಪಕ್ಷಿಗಳ ಆವಾಸ ಸ್ಥಾನವಾಗಿತ್ತು. ನಗರ ಬೆಳೆದಂತೆ ಎರಡೂ ಕೆರೆಗಳಿಗೆ ಒತ್ತುವರಿಯಿಂದ ಅವುಗಳ ಸಿಹಿ ನೀರಿನ ಜೌಗು ಪ್ರದೇಶದ ಮೂಲ ಸ್ವರೂಪವೇ ಬದಲಾಗಿದೆ.

ಒಂದು ಕಡೆ ಒತ್ತುವರಿ ಹಂತ ಹಂತವಾಗಿ ಕೆರೆಯನ್ನು ನುಂಗಿ ಹಾಕುತ್ತಿದ್ದರೆ, ಕೆಲವರು ನಿತ್ಯ ಇಲ್ಲಿ ಕಸ ತಂದು ಸುರಿಯುತ್ತಿದ್ದಾರೆ. ಅಲ್ಲದೆ ಮಲಿನ ಮತ್ತು ಚರಂಡಿ ಕೊಳಚೆಯೂ ಕೆರೆ ಸೇರುತ್ತಿದೆ. ಇದರಿಂದ ಕೆರೆ ನೀರು ಮಾತ್ರವಲ್ಲದೆ ಕೆರೆ ವಾತಾವರಣವೇ ಕಲುಷಿತವಾಗುತ್ತಿದೆ. ಇದರಿಂದ ಇಲ್ಲಿ ಜೀವವೈವಿಧ್ಯತೆಗೆ ಆಪತ್ತು ಎದುರಾಗಿದೆ.

ADVERTISEMENT

ದೊಡ್ಡ ಅಮಾನಿಕೆರೆ ಸುಮಾರು 787.6 ಹೆಕ್ಟೇರ್, ಚಿಕ್ಕ ಅಮಾನಿಕೆರೆಯು 212.21 ಹೆಕ್ಟೇರ್ ವಿಸ್ತೀರ್ಣ ಹೊಂದಿದೆ. ಇಲ್ಲಿ ಬಾರ್ -ಹೆಡೆಡ್, ಹೆಬ್ಬಾತು, ಬಣ್ಣದ ಕೊಕ್ಕರೆ, ಪೆಲಿಕನ್, ವಿವಿಧ ಜಾತಿಯ ಬಾತುಕೋಳಿ, ಬೆಳ್ಳಕ್ಕಿ, ಹೆರಾನ್ನಂತಹ ಪಕ್ಷಿ ಪ್ರಭೇದ, ವೈವಿಧ್ಯಮ ಪ್ರಾಣಿ–ಪಕ್ಷಿ, 17 ಜಾತಿಯ ಕಪ್ಪೆ, 33 ಜಾತಿಯ ಚಿಟ್ಟೆ ಪ್ರಭೇದದ ವಾಸವಿದೆ. ಅಪರೂಪದ ಗಿಡ ಮೂಲಿಕೆಗಳ ಕೇಂದ್ರವಾಗಿದೆ. ಇಂತಹ ಜೀವ ವೈವಿಧ್ಯ ತಾಣಕ್ಕೆ ಕುತ್ತು ಎದುರಾಗಿದೆ.

ಬೆಂಗಳೂರಿಗೆ ಹೊಸಕೋಟೆಯು ಸಮೀಪದಲ್ಲೇ ಇರುವ ಕಾರಣ ಕ್ಷೇತ್ರದ ಜನಪ್ರತಿನಿಧಿಗಳು, ಪ್ರವಾಸೋದ್ಯಮ ಇಲಾಖೆ, ಕಂದಾಯ ಇಲಾಖೆ,  ತೋಟಗಾರಿಕೆ ಇಲಾಖೆ ಒಟ್ಟುಗೂಡಿ ಕಾರ್ಪೋರೆಟ್‌ ಕಂಪನಿಗಳ ಸಿಎಸ್‌ಆರ್ ಅನುದಾನದಡಿಯಲ್ಲಿ ಎರಡೂ ಕೆರೆಗಳನ್ನು ಅಭಿವೃದ್ದಿ ಪಡಿಸಬೇಕೆಂಬುದು ಸ್ಥಳೀಯರ ಆಗ್ರಹ.

ಇದರಿಂದ ನೀರಿನ ಮೂಲ ಹಾಗೂ ಅಳಿವಿನಂಚಿನ ಪ್ರಭೇಧ ರಕ್ಷಣೆ ಜೊತೆಗೆ ಅವುಗಳ ಅವಾಸಸ್ಥಾನವನ್ನು ಉಳಿಸದಂತಾಗುತ್ತದೆ ಎಂಬುದು ನಾಗರಿಕರ ಒತ್ತಾಯ.

ದೊಡ್ಡ ಅಮಾನಿಕೆರೆಯಲ್ಲಿ ಜೊಂಡು ಬೆಳೆದಿರುವುದು
ಕೆರೆ ಆವರಣದಲ್ಲಿ ತ್ಯಾಜ್ಯದ ರಾಶಿ
ದೊಡ್ಡ ಅಮಾನಿಕೆರೆ 
ಕೆರೆ ನೀರಿಗೆ ಕಸ ಸುರಿದಿರುವುದು
ದೊಡ್ಡಅಮಾನಿಕೆರೆ

ಪ್ರವಾಸಿ ತಾಣವಾಗಲಿ:

ದೊಡ್ಡ ಅಮಾನಿಕೆರೆಗೆ ಪ್ರತಿ ತಿಂಗಳು 500 ರಿಂದ 1000 ಪಕ್ಷಿ ಪ್ರಿಯರು ಭೇಟಿಕೊಡುತ್ತಿದ್ದಾರೆ. ಇದನ್ನು ಅಭಿವೃದ್ಧಿ ಪಡಿಸುವುದರಿಂದ ಇಲ್ಲಿಗೆ ಭೇಟಿ ನಿಡುವವರ ಸಂಖ್ಯೆಯೂ ಹೆಚ್ಚುತ್ತದೆ. ಕೆರೆಯನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಗೊಳಿಸಬೇಕು. ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಬರುವುದರಿಂದ ವೃದ್ಧಿಯಾಗುತ್ತಿದೆ. ಬಿದಿಬದಿ ವ್ಯಾಪಾರಿಗಳಿಗೆ ವ್ಯಾಪಾರ–ವಹಿವಾಟು ಹೆಚ್ಚುತ್ತದೆ ಎನ್ನುವುದು ಪ್ರಜ್ಞಾವಂತರ ಸಲಹೆ.

ಒತ್ತುವರಿ ತೆರವುಗೊಳಿಸಿ:

ಒತ್ತುವರಿಯಿಂದ ಕೆರೆ ಪ್ರದೇಶ ಕುಗ್ಗುತ್ತದೆ. ಸಣ್ಣ ನೀವಾರಿ ಇಲಾಖೆ ಹಾಗೂ ಗ್ರಾಮ ಪಂಚಾಯಿತಿಯವರು ಒತ್ತುವರಿಯಾಗಿರುವ ಜಾಗವನ್ನು ಸರ್ವೆ ನಡೆಸಿ ಒತ್ತುವರಿ ತೆರವುಗೊಳಿಸಬೇಕು. ಹೊಸಕೋಟೆ ಪಟ್ಟಣಕ್ಕೆ ಸುಸಜ್ಜಿತ ಉದ್ಯಾನವಾಗಲಿ ವಿಶ್ರಾಂತಿ ಪಡೆಯುವ ಸ್ಥಳವಾಗಲಿ ಇಲ್ಲವೇ ಮುಂಜಾನೆ ಅಥವಾ ಸಂಜೆ ವಾಯು ವಿಹಾರ ಮಾಡಲು ಹಚ್ಚ ಹಸರಿನ ಸ್ಥಳವಿಲ್ಲ. ಹೀಗಾಗಿ ಒತ್ತುವರಿ ತೆರವುಗೊಳಿಸಿ ಉದ್ಯಾನದ ಮಾದರಿಯಲ್ಲಿ ಕೆರೆ ಅಭಿವೃದ್ಧಿಗೊಳಿಸಬೇಕೆಂಬುದು ಪ್ರಜ್ಞಾವಂತರ ಮನವಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.