
ಹಣ
ಸಾಂದರ್ಭಿಕ ಚಿತ್ರ
ಹೊಸಕೋಟೆ: ಮಾರ್ಚ್ ತಿಂಗಳಲ್ಲಿ ಮಂಡನೆಯಾಗಲಿರುವ ರಾಜ್ಯ ಬಜೆಟ್ನಲ್ಲಿ ದಲಿತ ಸಮುದಾಯದ ಅಭ್ಯುದಯಕ್ಕೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ದಲಿತ ಸಂಘರ್ಷ ಸಮಿತಿ ಆಗ್ರಹಿಸಿದೆ.
ದಲಿತ ಚಳುವಳಿಯ ನಾಯಕರು ಆರ್ಥಿಕ ಸಂಕಷ್ಟ, ಅನಾರೋಗ್ಯದಿಂದ ಬಳತ್ತಿದ್ದು, ಅವರಿಗೆ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ಉಚಿತ ವೈದ್ಯಕೀಯ ಚಿಕಿತ್ಸೆ ವೆಚ್ಚ ಭರಿಸಬೇಕು. ಸರ್ಕಾರದ ವಿವಿಧ ಇಲಾಖೆಗಳ ₹2 ಕೋಟಿವರೆಗೂ ಕಾಮಗಾರಿಗಳಿಗೆ ಪರಿಶಿಷ್ಟ ಜಾತಿ, ಪಂಗಡದವರಿಗೆ ಪ್ರತ್ಯೇಕವಾಗಿ ಮೀಸಲು, ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಉಚಿತ ನೀಟ್ ಹಾಗೂ ಕ್ಲಾಟ್ ತರಬೇತಿ ನೀಡಲು ತಗಲುವ ಸಂಪೂರ್ಣ ವೆಚ್ಚವನ್ನು ಸರ್ಕಾರವೇ ಭರಿಸಬೇಕು, ಎಸ್.ಸಿ.ಪಿ-ಟಿ.ಎಸ್.ಪಿ. ಅನುಷ್ಠಾನ ಜಿಲ್ಲಾವಾರು ಸಮಿತಿ ರಚನೆ ಮಾಡಬೇಕು. ಪ್ರಸ್ತುತ ಶಿಕ್ಷಣ ಹಕ್ಕಿನ ಕಾಯ್ದೆಯಲ್ಲಿ ಶೇಕಡ 25 ರಷ್ಟು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರೆ ದುರ್ಬಲ ವರ್ಗದ ಸಮುದಾಯಗಳ ಮಕ್ಕಳಿಗೆ ಅವಕಾಶ ಹಾಗೂ ದ್ವಿತೀಯ ಪಿ.ಯು.ಸಿ. ಯವರಿಗೆ ವಿಸ್ತರಣೆ ಮಾಡಬೇಕೆಂದು ದಸಂಸ ರಾಜ್ಯ ಬೆಂಗಳೂರು ವಲಯ ಸಂಚಾಲಕ ಮಂಜುನಾಥ್ ಅಣ್ಣಯ್ಯ ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.
ಗ್ರಾಮೀಣ ಪ್ರದೇಶಗಳಲ್ಲಿನ ಖಾಸಗಿ ಶಾಲೆಗಳಲ್ಲಿ ಶುಲ್ಕ ಭರಿಸಲಾಗದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ಬಾಕಿ ಶುಲ್ಕವನ್ನು ಸರ್ಕಾರವೇ ಭರಿಸಬೇಕು. ದಲಿತ ಸಂಘರ್ಷ ಸಮಿತಿಯ 70, 80, 90ರ ಚಳುವಳಿಯ ನಾಯಕರಿಗೆ ಸ್ಮಾರಕಕ್ಕಾಗಿ 10 ಎಕರೆ ಜಮೀನು ಮಂಜೂರು ಮಾಡಬೇಕು.
ಕಳೆದ 15 ವರ್ಷದಿಂದ ಸಾಂಸ್ಕೃತಿಕವಾಗಿ, ಶೈಕ್ಷಣಿಕ ತರಬೇತಿ, ಕೌಶಲ್ಯ ತರಬೇತಿಗಳು, ಅಧ್ಯಯನ ಶಿಬಿರ, ಸಂವಿಧಾನಬದ್ದವಾಗಿ ಕಾರ್ಯ ನಿರ್ವಹಿಸುತ್ತಿರುವ ಅಂಬೇಡ್ಕರ್ ಕಲ್ಬರಲ್ ಎಜುಕೇಷನ್ ಟ್ರಸ್ಟ್ಗಾಗಿ 2 ಎಕರೆ ಜಮೀನು ಮಂಜೂರು ಮಾಡಬೇಕೆಂದು ಮನವಿ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.