ADVERTISEMENT

ದೇಶದಲ್ಲಿ ಬಡತನ ನಿರ್ಮೂಲನೆ ಆಗಿಲ್ಲ

ದೇಶದ ಎಲ್ಲ ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರು ಒಂದಾಗಬೇಕು

​ಪ್ರಜಾವಾಣಿ ವಾರ್ತೆ
Published 27 ಜನವರಿ 2019, 15:45 IST
Last Updated 27 ಜನವರಿ 2019, 15:45 IST
ಚನ್ನರಾಯಪಟ್ಟಣ ಹೋಬಳಿ ಚೌಡಪ್ಪನಹಳ್ಳಿಯ ನಳಂದಾ ವಿದ್ಯಾಸಂಸ್ಥೆಯ ಆವರಣದಲ್ಲಿ 70ನೇ ಗಣರಾಜ್ಯೋತ್ಸವದ ಅಂಗವಾಗಿ ಅಧ್ಯಕ್ಷ ಚೌಡಪ್ಪನಹಳ್ಳಿ ಲೋಕೇಶ್ ಮಾತನಾಡಿದರು
ಚನ್ನರಾಯಪಟ್ಟಣ ಹೋಬಳಿ ಚೌಡಪ್ಪನಹಳ್ಳಿಯ ನಳಂದಾ ವಿದ್ಯಾಸಂಸ್ಥೆಯ ಆವರಣದಲ್ಲಿ 70ನೇ ಗಣರಾಜ್ಯೋತ್ಸವದ ಅಂಗವಾಗಿ ಅಧ್ಯಕ್ಷ ಚೌಡಪ್ಪನಹಳ್ಳಿ ಲೋಕೇಶ್ ಮಾತನಾಡಿದರು   

ವಿಜಯಪುರ:ನಾಗರಿಕರು ಗಣತಂತ್ರ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟು ಮುನ್ನಡೆಯುವುದನ್ನು ರೂಢಿಸಿಕೊಳ್ಳಬೇಕು ಎಂದು ನಳಂದಾ ವಿದ್ಯಾಸಂಸ್ಥೆಯ ಅಧ್ಯಕ್ಷ ಚೌಡಪ್ಪನಹಳ್ಳಿ ಲೋಕೇಶ್ ಹೇಳಿದರು.

ಚನ್ನರಾಯಪಟ್ಟಣ ಹೋಬಳಿ ಚೌಡಪ್ಪನಹಳ್ಳಿ ನಳಂದಾ ವಿದ್ಯಾಸಂಸ್ಥೆಯ ಆವರಣದಲ್ಲಿ ಶನಿವಾರ ಆಯೋಜಿಸಿದ್ದ 70ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ಮಾಡಿ ಅವರು ಮಾತನಾಡಿದರು.

ಇದುವರೆಗೂ ಸಂವಿಧಾನದ ಆಶಯಗಳು ನೆರವೇರಲಿಲ್ಲ. ಬಲಿತ ವರ್ಗ ಬಲಿಯುತ್ತಿದೆ. ದುಡಿಮೆಯ ವರ್ಗ ದುಡಿಯುತ್ತಲೇ ಇದೆ. ದೇಶದಲ್ಲಿ ಬಡತನ ನಿರ್ಮೂಲನೆ ಸಾಧ್ಯವಾಗಿಲ್ಲ. ಅನಕ್ಷರತೆಯನ್ನು ಹೋಗಲಾಡಿಸಲು ಹೋರಾಟಗಳನ್ನು ಮಾಡಬೇಕಾಗಿದೆ. ಅಸ್ಪೃಶ್ಯತೆ ತಾಂಡವವಾಡುತ್ತಿದೆ. ಅಂಬೇಡ್ಕರ್ ಅವರ ಕನಸು ನನಸು ಮಾಡಬೇಕಾದರೆ, ಈ ದೇಶದಲ್ಲಿನ ಎಲ್ಲಾ ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರು ಸೇರಿದಂತೆ ಎಲ್ಲರೂ ಒಂದಾಗಬೇಕಾಗಿದೆ. ಆಡಳಿತ ವ್ಯವಸ್ಥೆಯಲ್ಲಿ ನಿರ್ಣಯ ಕೈಗೊಳ್ಳುವ ಸ್ಥಳದಲ್ಲಿ ಈ ದೇಶದ ಕಟ್ಟಕಡೆಯ ಸಮುದಾಯಗಳು ಕುಳಿತಾಗ ಮಾತ್ರ ಸಂವಿಧಾನಕ್ಕೆ ಅರ್ಥ ಬರುತ್ತದೆ ಎಂದರು.

ADVERTISEMENT

ಎಪಿಎಂಸಿ ನಾಮಿನಿ ನಿರ್ದೇಶಕ ಜಯರಾಮೇಗೌಡ ಮಾತನಾಡಿ, ಈ ದೇಶದಲ್ಲಿ ಎಲ್ಲ ಸಮುದಾಯಗಳಿಗೂ ಶಿಕ್ಷಣ ಸಿಗುತ್ತಿದೆ. ಎಲ್ಲಾ ಸಮಾಜದವರು ಚುನಾವಣೆಗಳಲ್ಲಿ ಸ್ಪರ್ಧಿಸಲು ಅವಕಾಶ ಇದೆ ಎಂದಾದರೆ ಅದಕ್ಕೂ ಮೂಲ ಕಾರಣ ಬಾಬಾ ಸಾಹೇಬ್ ಅಂಬೇಡ್ಕರ್ ಎಂದರು.

ವಕೀಲ ಮಹೇಶ್ ದಾಸ್ ಮಾತನಾಡಿ, "ಸಂವಿಧಾನಬದ್ಧ ಹಕ್ಕುಗಳಿಗಾಗಿ ಹೋರಾಟ ಮಾಡುತ್ತಿರುವುದೇ ಹೆಚ್ಚಾಗಿದೆ. 70 ವರ್ಷಗಳಲ್ಲಿ ನಾವು ಏನನ್ನೂ ಗಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಸ್ವಾತಂತ್ರ್ಯದ ನಂತರ ಗಣರಾಜ್ಯವಾದ ಮೇಲೆ ಒಂದು ದೇವಾಲಯಕ್ಕೆ ಹೋಗಬೇಕಾದರೆ ಮಹಿಳೆಗೆ ಪೊಲೀಸರ ರಕ್ಷಣೆಬೇಕು ಎಂದಾದರೆ ನಮ್ಮ ಸಮಾಜ ಎತ್ತ ಸಾಗುತ್ತಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ' ಎಂದು ಬೇಸರ ವ್ಯಕ್ತಪಡಿಸಿದರು.

ಶಾಲಾ ಮಕ್ಕಳು ಗಣ್ಯರಿಂದ ಬೌದ್ಧ ಪ್ರಾರ್ಥನೆ, ನಾಡಗೀತೆ, ಧ್ವಜಾರೋಹಣ, ರಾಷ್ಟ್ರಗೀತೆಯ ಮೂಲಕ ಕಾರ್ಯಕ್ರಮ ಆರಂಭ ಮಾಡಿದರು. ಶಾಲಾ ಮಕ್ಕಳ ನೃತ್ಯಗಳು ಎಲ್ಲರ ಗಮನಸೆಳೆದವು.ಗಂಗವಾರ-ಚೌಡಪ್ಪನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಎಸ್.ರಾಜಣ್ಣ, ವಿಎಸ್‌ಎಸ್‌ಎನ್‌ ಅಧ್ಯಕ್ಷ ಶಂಕರಪ್ಪ ಮಾತನಾಡಿದರು.

ಪ್ರಾಂಶುಪಾಲರಾದ ಮೇರಿ ಸೆಲ್ವಿ, ಮುಖಂಡರಾದ ಮಂಜುನಾಥ್, ರಾಮಚಂದ್ರ, ಎಂ.ಶಂಕರ್, ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.