ADVERTISEMENT

ಆನೇಕಲ್‌ನೊಂದಿಗೆ ಅವಿನಾಭಾವ ಸಂಬಂಧ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2019, 9:34 IST
Last Updated 30 ಡಿಸೆಂಬರ್ 2019, 9:34 IST
ಆನೇಕಲ್‌ನ ಭಕ್ತರೊಬ್ಬರ ಮನೆಯಲ್ಲಿ ಪಾದಪೂಜೆ ಸ್ವೀಕರಿಸಿದ್ದ ಪೇಜಾವರ ಶ್ರೀಗಳು
ಆನೇಕಲ್‌ನ ಭಕ್ತರೊಬ್ಬರ ಮನೆಯಲ್ಲಿ ಪಾದಪೂಜೆ ಸ್ವೀಕರಿಸಿದ್ದ ಪೇಜಾವರ ಶ್ರೀಗಳು   

ಆನೇಕಲ್ : ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ ಆನೇಕಲ್‌ನೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು. ಹಲವಾರು ಶಿಷ್ಯರ ಮನೆಗೆ ಭೇಟಿ ನೀಡುತ್ತಿದ್ದ ಗುರುಗಳು ಆನೇಕಲ್‌ ತಾಲ್ಲೂಕಿನ ವಿವಿಧ ದೇವಾಲಯಗಳ ಉದ್ಘಾಟನೆಯನ್ನು ನೆರವೇರಿಸಿದ್ದಾರೆ.

ಕರಕಲಘಟ್ಟದ ಕೆ.ವಿ.ಲಕ್ಷ್ಮೀನಾರಾಯಣಾಚಾರ್ಯ ಅವರು ಶ್ರೀಗಳ ಆಪ್ತ ಶಿಷ್ಯರಾಗಿದ್ದರು. ಅವರ ಮನೆಗೆ ಶ್ರೀಗಳು ಆಗಮಿಸಿ ಸಂಸ್ಥಾನ ಪೂಜೆ, ಪಾದಪೂಜೆಯನ್ನು ಸ್ವೀಕರಿಸುತ್ತಿದ್ದರು.

ಅತ್ತಿಬೆಲೆಯ ಲಕ್ಷ್ಮೀಕುಂಟೆ ಆಂಜನೇಯ ಸ್ವಾಮಿ ದೇವಾಲಯ, ತಿಮ್ಮರಾಯಸ್ವಾಮಿ ದೇವಾಲಯ, ವೇಣುಗೋಪಾಲ ದೇವಾಲಯ, ಮಾಯಸಂದ್ರ ಆಂಜನೇಯ ಸ್ವಾಮಿ ದೇವಾಲಯ, ಕರಕಲಘಟ್ಟ ಆಂಜನೇಯ ಸ್ವಾಮಿ ದೇವಾಲಯ, ಚಿಕ್ಕಹೊಸಹಳ್ಳಿ ಮಹದೇಶ್ವರ ಸ್ವಾಮಿ ದೇವಾಲಯ ಸೇರಿದಂತೆ ಹಲವು ದೇವಾಲಯಗಳ ಉದ್ಘಾಟನೆಯಲ್ಲಿ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು.

ADVERTISEMENT

ಪಂಚಮ ಪರ್ಯಾಯದ ಅಂಗವಾಗಿ ಆನೇಕಲ್‌ ತಾಲ್ಲೂಕಿನ ಚಂದಾಪುರ ಸಮೀಪದ ಕಿತ್ತಗಾನಹಳ್ಳಿಯ ದಲಿತ ಕೇರಿಯಲ್ಲಿ ಪಾದಯಾತ್ರೆ ನಡೆಸಿ ಜನರಲ್ಲಿ ಸಮಾನತೆಯನ್ನು ಸಾರಿದ್ದರು. ಧಾರ್ಮಿಕ ಭಾವನೆಗಳು ಬೆಳೆಯಲು ಆಧ್ಯಾತ್ಮಿಕ ಶಕ್ತಿ ನೀಡಿದ್ದರು.

ತಾಲ್ಲೂಕಿನ ಇಗ್ಗಲೂರು ಬಳಿ ಕಸಾಯಿಖಾನೆ ಸ್ಥಾಪನೆ ಮಾಡಲು ಸರ್ಕಾರ ತೀರ್ಮಾನ ಕೈಗೊಂಡಿದ್ದ ಸಂದರ್ಭದಲ್ಲಿ ಪೇಜಾವರ ಶ್ರೀಗಳು ಅದನ್ನು ತಡೆಯಲು ನಡೆಸಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಹಲವಾರು ಭಕ್ತರ ಮನೆಗೆ ಭೇಟಿ ನೀಡಿ ಪಾದಪೂಜೆ ಸ್ವೀಕರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.