ಹೊಸಕೋಟೆ: ತಾಲ್ಲೂಕಿನ ಜಡಿಗೇನಹಳ್ಳಿ ಹೋಬಳಿಯ ವಾಗಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊನಚನಹಳ್ಳಿ ಗ್ರಾಮದಲ್ಲಿ ಸುಮಾರು 16ನೇ ಶತಮಾನಕ್ಕೆ ಸೇರಿದ ದೀಪಸ್ತಂಭ ಶಾಸನವನ್ನು ಗುರುತಿಸಲಾಗಿದೆ.
ತಾಲ್ಲೂಕಿನಲ್ಲಿ ಪುರಾತತ್ವ ಮತ್ತು ಪ್ರಾಚ್ಯವಸ್ತು ಇಲಾಖೆಯಿಂದ ಕೈಗೊಂಡಿರುವ ಸರ್ವೇ ಕಾರ್ಯದಲ್ಲಿ ಶಾಸನ ಸಂಶೋಧಕ, ಇತಿಹಾಸ ಅಕಾಡೆಮಿಯ ಸದಸ್ಯ ವಿಜಯಶಂಕರ ಶಾಸನ ಗುರುತಿಸಿದ್ದಾರೆ.
ಗ್ರಾಮದ ಸಪ್ಪಲಮ್ಮ ದೇವಾಲಯದ ಮುಂದಿರುವ ಕಂಬದಲ್ಲಿರುವ ಈ ಶಾಸನದಲ್ಲಿ ‘ಹೇವಿಳಂಬಿ ಸಂವತ್ಸರದ ಪುಷ್ಯ ಬಹುಳ 1ರಲ್ಲಿ ಬೊರಪ್ಪನ ಮಗ ಮಾರಿಜಯನು ಬಯಿರ ದೇವರಿಗೆ ನಿಲಿಸಿದ ಕಂಬ’ ಎಂಬ ಒಕ್ಕಣೆ ಇದೆ. ಇದು ತಾಲ್ಲೂಕಿನ ಶಾಸನ ಪಟ್ಟಿಗೆ ಹೊಸ ಸೇರ್ಪಡೆಯಾಗಿದೆ. ಶಾಸನದಲ್ಲಿ ಉಲ್ಲೇಖಿಸಿರುವ ಭೈರವ ದೇವಾಲಯ ಈಗ ಇಲ್ಲ ಎಂದು ಇತಿಹಾಸ ಅಕಾಡೆಮಿಯ ಸದಸ್ಯ ವಿಜಯಶಂಕರ ತಿಳಿಸಿದ್ದಾರೆ.
ಸಾಮಾನ್ಯವಾಗಿ ಎಲ್ಲಾ ದೇವಾಲಯಗಳ ಮುಂದೆ ಇಂತಹ ದೀಪಸ್ತಂಭಗಳಿರುತ್ತದೆ. ಆದರೆ ಶಾಸನೋಕ್ತ ದೀಪಸ್ತಂಭ ಕಂಡು ಬರುವುದು ವಿರಳ ಇದೊಂದು ಹೊಸ ಸಂಶೋಧನೆ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.