ADVERTISEMENT

ಹೊಸಕೋಟೆ ಮಿನಿ ಬಿಹಾರ್ ಕುಖ್ಯಾತಿಯಿಂದ ಹೊರತರಲು ಶ್ರಮ: ಎಂಟಿಬಿ ನಾಗರಾಜ್‌

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2023, 0:44 IST
Last Updated 13 ಫೆಬ್ರುವರಿ 2023, 0:44 IST
ಹೊಸಕೋಟೆ ಕುರುಬರಹಳ್ಳಿಯಲ್ಲಿ ವಿವಿಧ ಕಾಮಗಾರಿಗಳಿಗೆ ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್‌ ಭೂಮಿ ಪೂಜೆ ನೆರವೇರಿಸಿದರು
ಹೊಸಕೋಟೆ ಕುರುಬರಹಳ್ಳಿಯಲ್ಲಿ ವಿವಿಧ ಕಾಮಗಾರಿಗಳಿಗೆ ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್‌ ಭೂಮಿ ಪೂಜೆ ನೆರವೇರಿಸಿದರು   

ಹೊಸಕೋಟೆ: ತಾಲ್ಲೂಕಿನ ಎಲ್ಲ ಹಳ್ಳಿಗಳಲ್ಲಿಯೂ ಅಭಿವೃದ್ಧಿ ಕೆಲಸ ಹಂತ ಹಂತವಾಗಿ ಮಾಡಲಾಗುವುದು. ಗುಣಮಟ್ಟದ ಕಾಮಗಾರಿ ಕೈಗೊಳ್ಳುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ದೂರು ಬಂದರೆ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್‌ ತಿಳಿಸಿದರು.

ತಾಲ್ಲೂಕಿನ ಉಪ್ಪಾರಹಳ್ಳಿ, ಕುರುಬರಹಳ್ಳಿಯಲ್ಲಿ ಸಿ.ಸಿ ರಸ್ತೆ ನಿರ್ಮಾಣ ಕಾಮಗಾರಿಗೆ ನೆರವೇರಿಸಿ ಮಾತನಾಡಿದರು.

ಸರ್ಕಾರದಿಂದ ಅನುದಾನ ತಂದು ತಾಲ್ಲೂಕಿನಾದ್ಯಂತ ಅಭಿವೃದ್ಧಿ ಕೆಲಸ ಮಾಡಲಾಗುತ್ತಿದೆ. ಎಲ್ಲ ರಸ್ತೆಗಳಿಗೂ ಡಾಂಬರೀಕರಣ ಮಾಡಿ ಉತ್ತಮ ರಸ್ತೆಗಳ ನಿರ್ಮಾಣಕ್ಕೆ ಶ್ರಮಿಸಲಾಗುತ್ತಿದೆ. ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿಯೂ ತುರ್ತು ಕೆಲಸ ಪ್ರಗತಿಯಲ್ಲಿದೆ ಎಂದರು.

ADVERTISEMENT

'ಹೊಸಕೋಟೆಯನ್ನು ಮಿನಿ ಬಿಹಾರ್‌ ಎಂಬ ಕುಖ್ಯಾತಿಯಿಂದ ಹೊರತಂದು ನಾಗರಿಕ ಸಮಾಜ ನಿರ್ಮಾಣ ಮಾಡಲು ಜೀವನ ಸವೆಸಿದ್ದೇನೆ. ಜನರು ಶಾಂತಿಯುತವಾಗಿ ಪ್ರಜಾಪ್ರಭುತ್ವದಡಿ ಎಲ್ಲರೂ ಬದುಕು ನಿರ್ಮಿಸಿಕೊಂಡಿದ್ದಾರೆ. ನಿರಂಕುಶ ಮನಃಸ್ಥಿತಿ ದೂರವಿಡಲು ಜನರು ಮುಂದಾಗಿ' ಎಂದರು.

ತಾಲ್ಲೂಕಿನ ಜನರಿಗೆ 293 ಎಕರೆಯಲ್ಲಿ ವಸತಿ ನಿವೇಶನ ನೀಡಲು ಭೂಮಿ ಮೀಸಲು ಇಡಲಾಗಿದೆ. ಭೂಕಬಳಿಕೆ ಮಾಡಿರುವವರು ಯಾರೆಂದು ಜನರಿಗೆ ಗೊತ್ತಿದೆ. ಚುನಾವಣೆಯಲ್ಲಿ ತಕ್ಕ ಪಾಠ ಜನರೇ ಕಲಿಸುತ್ತಾರೆ ಎಂದರು.

ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ರಘುವೀರ್, ಕುರುಬರಹಳ್ಳಿ ಗ್ರಾ.ಪಂ ಅಧ್ಯಕ್ಷ ಚಿಕ್ಕತಿರುಮಳಪ್ಪ,ಸದಸ್ಯರಾದ ಟಿ ವೆಂಕಟೇಶ್, ನಾರಾಯಣಸ್ವಾಮಿ ಎಂ, ಮಾಜಿ ಸದಸ್ಯ ಕೃಷ್ಣೋಜಿರಾವ್, ಮುಖಂಡರಾದ ಚಿಕ್ಕಚನ್ನಬೀರಪ್ಪ, ರಾಮಕೃಷ್ಣಪ್ಪ, ಕೆ.ಎಂ ರಾಜು, ಕೆ.ವಿ.ನಾರಾಯಣಸ್ವಾಮಿ, ಅಶ್ವಥ್‌ ನಾರಾಯಣ, ಉಪ್ಪಾರಹಳ್ಳಿ ಪುಟ್ಟರಾಜು, ಮಂಜುನಾಥ್‌,ಗೋಪಾಲ್‌,ಗುತ್ತಿಗೆದಾರರಾದ ರವಿ, ಗ್ರಾಮಸ್ಥರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.