ದೊಡ್ಡಬಳ್ಳಾಪುರ: ತಾಲ್ಲೂಕಿನ ಹುಲಿಕುಡಿ ಬೆಟ್ಟದ ತಪ್ಪಲಿನ ಬೂಚನಹಳ್ಳಿ ಗ್ರಾಮದ ಅಂಚಿನ ತೋಟಗಳಲ್ಲಿ ಗುರುವಾರ ಮಧ್ಯಾಹ್ನ ಕಾಣಿಸಿಕೊಂಡಿದ್ದ ಗಂಡು ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಸೆರೆಹಿಡಿದಿದ್ದು, ಗ್ರಾಮಸ್ಥರು ನಿಟ್ಟಿಸಿರುವ ಬಿಟ್ಟಿದ್ದಾರೆ.
ಮಧ್ಯಾಹ್ನ 2 ಗಂಟೆ ಸುಮಾರಿಗೆ ಬೂಚನಹಳ್ಳಿ ಗ್ರಾಮದ ಹೊರಭಾಗದ ಹೊಲದಲ್ಲಿ ಒಡಾಡುತ್ತಿದ್ದ ಚಿರತೆಯನ್ನು ನೋಡಿದ ಗ್ರಾಮಸ್ಥರು ಕೂಗಾಡಿದರು. ಆದರೂ ಸಹ ಅದು ಯಾರಿಗೂ ಅಂಜದೆ ಹೊದಲ್ಲಿಯೇ ಒಡಾಡುತ್ತಿತು.
ವಿಷಯ ತಿಳಿದ ಜಿಲ್ಲಾ ಉಪಅರಣ್ಯ ಸಂಕ್ಷಣಾ ಅಧಿಕಾರಿ ಸಂತೋಷ್ಕುಮಾರ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸೈಯದ್ನಿಜಾಮುದ್ದೀನ್, ಬನ್ನೇರುಘಟ್ಟ ಉದ್ಯಾನದ ಡಾ.ಕಿರಣ್ ಹಾಗೂ ವಲಯ ಅರಣ್ಯ ಅಧಿಕಾರಿ ಹಂಸವಿ ಅವರ ಮಾರ್ಗದರ್ಶನದಲ್ಲಿ ಅರಣ್ಯ ಇಲಾಖೆ, ಅಗ್ನಿಶಾಮಕ ದಳದ, ಪೊಲೀಸ್ ಇಲಾಖೆ ಸಿಬ್ಬಂದಿ ನೇತೃತ್ವದಲ್ಲಿ ಚಿರತೆ ಸೆರೆಹಿಡಿಯಲು ಕಾರ್ಯಾಚರಣೆ ಆರಂಭಿಸಿದರು.
ರೈತರ ಹೊಲದಲ್ಲಿ ಸುತ್ತಾಡುತ್ತಿದ್ದ ಚಿರತೆ ಜನರ ಕೂಗಾಟಕ್ಕೆ ಬೆದರಿ ಗ್ರಾಮದ ಅಂಚಿನ ಹಿತ್ತಲಿನ ದನದ ಕೊಟ್ಟಿಗೆ ಕಡೆಗೆ ನುಗಿತ್ತು. ನಂತರ ಕೊಟ್ಟಿಗೆಯ ಸಮೀಪದಲ್ಲೇ ಇದ್ದ ಹುಲ್ಲಿನ ಬಣವೆ ಕೆಳಗಡೆ ಅವಿತುಕೊಂಡಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ತಕ್ಷಣ ಕಾರ್ಯಪ್ರವೃತ್ತರಾಗಿ ಅರವಳಿಕೆ ಚುಚ್ಚು ಮದ್ದು ನೀಡಿ ಬೆಲೆಯೊಂದಿಗೆ ಚಿರತೆಯನ್ನು ಸರೆಹಿಡಿಯಲಾಯಿತು. ಜನರ ಕೂಗಾಟಕ್ಕೆ ಬಸವಳಿದ್ದ ಚಿರತೆಗೆ ಅಗತ್ಯ ಚಿಕಿತ್ಸೆ ನೀಡುವ ಮೂಲಕ ಬೋನಿನಲ್ಲಿ ಕೊಂಡೊಯ್ಯಲಾಯಿತು.
ಚಿರತೆ ಒಡಾಟದ ದೃಶ್ಯಗಳು ಮೊಬೈಲ್ಗಳ ವಾಟ್ಸ್ಆಪ್ ಗ್ರೂಪ್ಗಳಲ್ಲಿ ಹರಿದಾಡುತ್ತಿದ್ದಂತೆ ಚಿರತೆಯನ್ನು ಹತ್ತಿರದಿಂದ ನೋಡುವ ಕುತೂಹಲದಿಂದ ಬೂಚನಹಳ್ಳಿ ಸುತ್ತಮುತ್ತಲಿನ ಗ್ರಾಮದ ನೂರಾರು ಜನ ಸೇರಿದ್ದರು. ಕೆಲವರು ಮರವನ್ನು ಹತ್ತಿಕುಳಿತು ಚಿರತೆಯನ್ನು ನೋಡುತ್ತಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.