ADVERTISEMENT

ಹೊಸಕೋಟೆಯಲ್ಲಿ ನಿರ್ಬಂಧಿತ ಲಾಕ್‌ಡೌನ್: ಶಾಸಕ ಶರತ್ ಬಚ್ಚೇಗೌಡ

​ಪ್ರಜಾವಾಣಿ ವಾರ್ತೆ
Published 23 ಜೂನ್ 2020, 13:47 IST
Last Updated 23 ಜೂನ್ 2020, 13:47 IST
ಹೊಸಕೋಟೆಯ ತಾಲ್ಲೂಕು ಕಚೇರಿಯಲ್ಲಿ ಶಾಸಕ ಶರತ್ ಬಚ್ಚೇಗೌಡ ಅಧಿಕಾರಿಗಳ ಸಭೆ ನಡೆಸಿದರು
ಹೊಸಕೋಟೆಯ ತಾಲ್ಲೂಕು ಕಚೇರಿಯಲ್ಲಿ ಶಾಸಕ ಶರತ್ ಬಚ್ಚೇಗೌಡ ಅಧಿಕಾರಿಗಳ ಸಭೆ ನಡೆಸಿದರು   

ಹೊಸಕೋಟೆ: ಸರ್ಕಾರ ಲಾಕ್‌ಡೌನ್‌ ಸಡಿಲಗೊಳಿಸಿದ ನಂತರ ಕೊರೊನಾ ಸೋಂಕು ಭಯವಿಲ್ಲದೆ ಆರಾಮವಾಗಿ ಓಡಾಡುತ್ತಿದ್ದಾರೆ. ಇದರಿಂದ ತಾಲ್ಲೂಕಿನಲ್ಲಿ ಕಳೆದ ನಾಲ್ಕು ದಿನಗಳಲ್ಲಿ 8 ಮಂದಿಗೆ ಕೋವಿಡ್ ದೃಢಪಟ್ಟಿದೆ. ಒಬ್ಬರು ಬಲಿಯಾಗಿದ್ದಾರೆ. ಹೀಗಾಗಿ ಜೂನ್‌ 24ರಿಂದ ಒಂದು ವಾರದವರೆಗೆ ಸಂಜೆ 5 ಗಂಟೆಯಿಂದ ಬೆಳಿಗ್ಗೆ 7ರವರೆಗೆ ಲಾಕ್‌ಡೌನ್‌ ಮಾಡಲಾಗಿದೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.

ನಗರದ ತಾಲ್ಲೂಕು ಕಚೇರಿಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು. ವ್ಯಾಪಾರಸ್ಥರು. ಅರ್ಚಕರು ಸೇರಿದಂತೆ ವಿವಿಧ ಪ್ರಮುಖರ ಸಭೆಯಲ್ಲಿ ಅವರು ಮಾತನಾಡಿದರು.‌

ನಗರದ ಕೆಲವು ವಾರ್ಡ್‌ಗಳನ್ನು ಸೀಲ್‌ಡೌನ್ ಮಾಡಲಾಗಿದೆ. ಜನರು ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಪೂರ್ತಿ ನಗರವನ್ನೇ ಸೀಲ್‌ಡೌನ್‌ ಮಾಡಬೇಕಾಗಬಹುದು. ಹೋಂ ಕ್ವಾರಂಟೈನ್‌ನಲ್ಲಿ ನಲ್ಲಿರುವವರು ಆರಾಮವಾಗಿ ರಸ್ತೆಗಳಲ್ಲಿ ಓಡಾಡುತ್ತಿರುವುದು ಕೇಳಿಬರುತ್ತಿದ್ದು, ಅಂತವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ. ಮಾಸ್ಕ್ ಇಲ್ಲದೆ ರಸ್ತೆಗಳಲ್ಲಿ ಓಡಾಡುವವರಿಗೆ ದಂಡ ವಿಧಿಸಲಾಗುತ್ತಸದೆ ಎಂದು ಎಚ್ಚರಿಸಿದರು.

ADVERTISEMENT

ಬುಧವಾರದಿಂದ ತರಕಾರಿ ವ್ಯಾಪಾರಿಗಳಿಗೆ ಬೆಳಿಗ್ಗೆ7 ರಿಂದ 12 ವರೆಗೆ ವ್ಯವಹರಿಸಲು ಅವಕಾಶ ನೀಡಿದ್ದು, ದಿನಸಿ ಅಂಗಡಿ, ಬಟ್ಟೆ ಅಂಗಡಿ, ಜ್ಯುಯಲರಿ ಅಂಗಡಿ ಸೇರಿದಂತೆ ಇತರ ಅಂಗಡಿಯವರು ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ಮಾತ್ರ ಅಂಗಡಿ ತೆರೆಯಬೇಕು. ದೇವಾಲಯಗಳು ಬೆಳಗ್ಗೆ 6 ಗಂಟೆಯಿಂದ 11 ವರೆಗೆ ತೆರೆಯಬೇಕು ಮತ್ತು ಮಸೀದಿಗಳಲ್ಲಿ ಐದು ಜನರಿಗಿಂತ ಹೆಚ್ಚು ಜನರು ಪ್ರಾರ್ಥನೆ ಮಾಡುವಂತಿಲ್ಲ. ನಗರದ ಎಲ್ಲಾ ಹೋಟೆಲ್‌ಗಳಲ್ಲಿ ಕಡ್ಡಾಯವಾಗಿ ಕೇವಲ ಪಾರ್ಸಲ್‌ಗೆಮಾತ್ರ ಅವಕಾಶ ನೀಡಿರುವುದಾಗಿ ತಿಳಿಸಿದರು. ಇದು ಒಂದು ವಾರಗಳ ಕಾಲ ಜಾರಿಯಲ್ಲಿರುತ್ತದೆ. ಪರಿಸ್ಥಿತಿಯನ್ನು ನೋಡಿಕೊಂಡು ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದರು. ಇದಕ್ಕೆ ಸಭೆ ಒಮ್ಮತದ ನಿರ್ಣಯ ನೀಡಿತು.

ತಾಲ್ಲೂಕು ಆರೋಗ್ಯಾಧಿಕಾರಿ ಮಂಜುನಾಥ್ ಮಾತನಾಡಿ, ನಗರ ಪ್ರದೇಶದಲ್ಲಿ 58 ಮಂದಿ ಮತ್ತು ಗ್ರಾಮಾಂತರದಲ್ಲಿ 67 ಮಂದಿಗೆ ಹೋಂ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ತಹಶೀಲ್ದಾರ್‌ ಗೀತಾ, ತಾಲ್ಲೂಕು ಪಂಚಾಯತಿ ಇಒ ಶ್ರೀನಾಥ್, ನಗರ ಸಭೆ ಆಯುಕ್ತ ಪರಮೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.