ADVERTISEMENT

ಹೊಸಕೋಟೆ: ಮಾದಿಗ ಜನಾಂಗ 40 ವರ್ಷಗಳಷ್ಟು ಹಿಂದುಳಿದಿದೆ

ಮುಂದಿನ ಪೀಳಿಗೆಗೆ ಸಂಕಷ್ಟ ಬಳುವಳಿಯಾಗದಿರಲಿ: ಕೇಂದ್ರದ ಮಾಜಿ ಸಚಿವ ಎ.ನಾರಾಯಣಸ್ವಾಮಿ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2025, 2:09 IST
Last Updated 13 ಅಕ್ಟೋಬರ್ 2025, 2:09 IST
ಹೊಸಕೋಟೆಯ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಭಾನುವಾರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಕುರಿತು ಜಾಗೃತಿ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಕಾರ್ಯಕ್ರಮ ನಡೆಯಿತು
ಹೊಸಕೋಟೆಯ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಭಾನುವಾರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಕುರಿತು ಜಾಗೃತಿ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಕಾರ್ಯಕ್ರಮ ನಡೆಯಿತು   

ಹೊಸಕೋಟೆ: ‘ರಾಜ್ಯದಲ್ಲಿ ಸುಮಾರು 50 ಲಕ್ಷ ಇರುವ ಮಾದಿಗ ಜನಾಂಗ ಮುಂದುವರೆದಿಲ್ಲ. 101 ಜಾತಿಗಳ ನಡುವೆ ಮೀಸಲಾತಿ ಪಡೆಯುವಲ್ಲಿ ಯಶಸ್ಸನ್ನು ಕಂಡಿದ್ದೇ ಇಲ್ಲ. ಇದರ ಪರಿಣಾಮ ಮಾದಿಗ ಸಮಾಜ ಇನ್ನೂ 40 ವರ್ಷಗಳಷ್ಟು ಹಿಂದೆಯೇ ಇದೆ’ ಎಂದು ಕೇಂದ್ರದ ಮಾಜಿ ಸಚಿವ ಎ.ನಾರಾಯಣಸ್ವಾಮಿ ಹೇಳಿದರು. 

ಕರ್ನಾಟಕ ಮಾದಾರ ಮಹಾಸಭಾ ಮತ್ತು ಕರ್ನಾಟಕ ರಾಜ್ಯ ಎಡಗೈ ಜಾತಿಗಳ ಸಮನ್ವಯ ಸಮಿತಿಯಿಂದ ಭಾನುವಾರ ನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಕುರಿತು ಜಾಗೃತಿ ಹಾಗೂ ಸದಸ್ಯತ್ವ ನೋಂದಣಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕ್ರೈಸ್ತ ಧರ್ಮಕ್ಕೆ ಸೇರ್ಪಡೆಯಾಗಿರುವ ಮಾದಿಗ ಸಮುದಾಯದವರು ಸಮೀಕ್ಷೆಯಲ್ಲಿ ಹಿಂದೂ ಧರ್ಮ ಹಾಗೂ ಮಾದಿಗ ಜಾತಿ ಎಂದೇ ಸಮೂದಿಸಬೇಕು. ಇದರಿಂದ ನಿಮ್ಮ ಮಕ್ಕಳ ಶೈಕ್ಷಣಿಕ ಅಭಿವೃದ್ದಿಗೆ ಮೀಸಲಾತಿ ದೊರೆಯಲಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮಹಿಳಾ ಮೀಸಲಾತಿ, ಮಹಿಳೆಯರಿಗೂ ಪ್ರಧಾನ್ಯತೆ ದೊರೆಯಲಿದೆ. ವಿಧಾನಸಭಾ ಕ್ಷೇತ್ರಗಳಲ್ಲಿಯೂ ಸಹ ಹೆಚ್ಚುವರಿಯಾಗಿ 70 ಸ್ಥಾನ ಸಿಗುವ ಸಾದ್ಯತೆ ಇದೆ ಹೇಳಿದರು.

ADVERTISEMENT

ಜಗತ್ತು ತಂತ್ರಜ್ಞಾನ ಹಾಗೂ ಎಐ ನೊಂದಿಗೆ ಮುನ್ನೆಡೆಯುತ್ತಿದೆ. ಇಂತಹ ಸಂದರ್ಭದಲ್ಲೂ ನಮ್ಮ ಜನಾಂಗದ ಸಾಮಾಜಿಕ–ಶೈಕ್ಷಣಿಕ ಸಮೀಕ್ಷೆಯಲ್ಲಿ ಜಾಗರೂಕರಾಗಿ ಮಾಹಿತಿ ನೀಡಬೇಕು. ಇಲ್ಲದಿದ್ದಲ್ಲಿ ಯುವ ಪೀಳಿಗೆಯು ಮೀಸಲಾತಿಯಿಂದ ವಂಚಿತವಾಗಬೇಕಾಗುತ್ತದೆ. ಈಗ ನಿರ್ಲಕ್ಷಿಸಿದರೆ ನಮ್ಮ ಮುಂದಿನ ಪೀಳಿಗೆಗೆ ಸಂಕಷ್ಟಕ್ಕೆ ಸಿಲುಕಿವುದು ಕಟ್ಟಿಟ್ಟ ಬುತ್ತಿ ಎಂದು ಎಚ್ಚರಿಸಿದರು.

ಕಳೆದ 40 ವರ್ಷಗಳಿಂದ ಒಳಮೀಸಲಾತಿಗಾಗಿ ಹೋರಾಡಿದ ಬಳಿಕ ಜಾರಿಗೆ ಬಂದಿದೆ. ಈಗ ಒಳಮೀಸಲಾತಿ ಜಾರಿಯಾದ ಮೇಲೆ ಸಾಮಾಜಿಕ–ಆರ್ಥಿಕ ಸಮೀಕ್ಷೆ ನಡೆಯುತ್ತಿದೆ.  ಎಲ್ಲರು ಧರ್ಮ ಕಾಲಂನಲ್ಲಿ ಹಿಂದು ಮತ್ತು ಜಾತಿ ಕಾಲಂನಲ್ಲಿ ಮಾದಿಗ ಎಂದು ನಮೂದಿಸಿ ಎಂದು ಸಲಹೆ ನೀಡಿದರು.

‘ನಮ್ಮ ಸಮುದಾಯವನ್ನು ದಾರಿ ತಪ್ಪಿಸಿ ಆದಿ ದ್ರಾವಿಡ, ಆದಿ ಕರ್ನಾಟಕ ಎಂದು ನಮೂದಿಸಲು ಹೇಳುತ್ತಿದ್ದಾರೆ. ಎಕೆ ಮತ್ತು ಎಡಿ ಎಂಬ ಜಾತಿ ಪ್ರಮಾಣ ಪತ್ರ ಇದ್ದರೆ ಕೂಡಲೆ ಹಿಂದಿರುಗಿಸಿ ಮಾದಿಗ ಎಂಬ ಜಾತಿ ಪ್ರಮಾಣ ಪತ್ರ ಪಡೆಯಿರಿ. ಮಾದಿಗ ಸಮುದಾಯಕ್ಕೆ ಮಾತ್ರ ಮೀಸಲಾತಿ ದೊರೆಯಲಿದ್ದು, ಎಕೆ ಎಡಿ ಎಂಬ ಜಾತಿ ಪ್ರಮಾಣ ಪತ್ರಕ್ಕೆ ಸರ್ಕಾರದಿಂದ ಯಾವ ಮಾನ್ಯತೆ ಇಲ್ಲದಂತಾಗುವ ಸ್ಥಿತಿ ಉಂಟಾಗುತ್ತದೆ’ ಎಂದು ತಿಳಿಸಿದರು.

ಮಾಜಿ ಸಚಿವ ಎಚ್.ಆಂಜನೇಯ, ಚಿತ್ರದುರ್ಗ ಮಾಜಿ ಸಂಸದ ಚಂದ್ರಣ್ಣ, ಪಾವಗಡ ಮಾಜಿ ಶಾಸಕ ತಿಮ್ಮರಾಯಪ್ಪ, ನಿವೃತ್ತ ಐಎಎಸ್ ಅಧಿಕಾರಿ ಶಿವಶಂಕರ್, ಯೋಜನಾ ಪ್ರಾಧಿಕಾರದ ನಿರ್ದೆಶಕ ಡಾ.ಎಚ್‌ಎಂ ಸುಬ್ಬರಾಜ್, ಜಿಲ್ಲಾ ಮುಖಂಡ ಬಿಕೆ ಶಿವಪ್ಪ, ತಾಲ್ಲೂಕು ಕೆಆರ್‌ಬಿ ಶಿವಾನಂದ್, ನರಸಿಂಹಯ್ಯ, ಎಚ್‌ಎಂ ಶಿವಾನಂದ್, ಎ ನಾರಾಯಣಸ್ವಾಮಿ, ವಿಜಯ್ ಕುಮಾರ್, ಹರೀಶ್ ಚಕ್ರವರ್ತಿ, ಗುಬ್ಬಿ ಸತೀಶ್, ರವಿ, ಗುರಪ್ಪ, ಇಟ್ಟಸಂದ್ರ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಮೂರ್ತಿ, ಜಾಂಭವ ಯುವ ಸೇನೆಯ ಅಧಕ್ಷರಾದ ರಮೇಶ್ ಚಕ್ರವರ್ತಿ ಹಾಜರಿದ್ದರು.

ಸಾಮಾಜಿಕ–ಶೈಕ್ಷಣಿಕ ಸಮೀಕ್ಷೆಯಲ್ಲಿ ಮಾದಿಗ ಸಮುದಾಯವು ಸೂಕ್ತ ಜಾತಿ ಮಾಹಿತಿ ನೀಡದಿದ್ದಲ್ಲಿ ಮಾದಿಗ ಸಮುದಾಯವು ತನ್ನ ಮುಂದಿನ ಪೀಳಿಗೆಗೆ ಸಂಕಷ್ಟವನ್ನು ಬಳುವಳಿಯಾಗಿ ನೀಡಬೇಕಾಗುತ್ತದೆ. ಅವರಿಗೆ ಭವಿಷ್ಯವೂ ಇರುವುದಿಲ್ಲ
ಎ.ನಾರಾಯಣಸ್ವಾಮಿ ಕೇಂದ್ರದ ಮಾಜಿ ಸಚಿವ

ಹತ್ತಿರಕ್ಕೆ ಸೇರಿಸಬೇಡಿ...

‘ಸಮಾಜದಲ್ಲಿ ಉತ್ತಮ ಸ್ಥಾನಮಾನ ಪಡೆಯಬೇಕಾದರೆ ಮಿಸಲಾತಿಯನ್ನು ಸಮರ್ಪಕವಾಗಿ ಬಳಸಿಕೊಳ್ಳುವುದೊಂದೆ ದಾರಿ. ಹಾಗಾಗಿ ಇಲ್ಲಿ ಯಾರ ಮಾತಿಗೂ ಕಿವಿ ಕೊಡಬೇಡಿ ಕೆಲವರು ನಮ್ಮ ಜನಾಂಗವನ್ನು ಆದಿ ದ್ರಾವಿಡ ಆದಿ ಕರ್ನಾಟಕ ಎಂದು ಬರೆಸಲು ಮುಂದಾಗಿದ್ದಾರೆ. ಅದು ಸರಿಯಲ್ಲ. ಅಂತಹವರನ್ನು ಹತ್ತಿರಕ್ಕೆ ಸೇರಿಸಬೇಡಿ’ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.