ADVERTISEMENT

ಮಾವು, ಬೇವು ದುಬಾರಿ: ಕೊರೊನಾ ಕರಿನೆರಳು

ಯುಗಾದಿ ಸಂಭ್ರಮದಲ್ಲಿ ಆತಂಕ; ತರಕಾರಿ ಬೆಲೆ ಕುಸಿತ, ಖರೀದಿಯಲ್ಲಿ ಕಾಣದ ಉತ್ಸಾಹ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2021, 5:55 IST
Last Updated 13 ಏಪ್ರಿಲ್ 2021, 5:55 IST
ದೊಡ್ಡಬಳ್ಳಾಪುರ ಯುಗಾದಿ ಹಬ್ಬದ ಅಂಗವಾಗಿ ಮಾವಿನ ಎಲೆ ಹಾಗೂ ಬೇವಿನ ಸೊಪ್ಪಿನ ಮಾರಾಟ ಭರದಿಂದ ಸಾಗಿತ್ತು
ದೊಡ್ಡಬಳ್ಳಾಪುರ ಯುಗಾದಿ ಹಬ್ಬದ ಅಂಗವಾಗಿ ಮಾವಿನ ಎಲೆ ಹಾಗೂ ಬೇವಿನ ಸೊಪ್ಪಿನ ಮಾರಾಟ ಭರದಿಂದ ಸಾಗಿತ್ತು   

ದೊಡ್ಡಬಳ್ಳಾಪುರ: ಕೊರೊನಾ ಕರಿನೆರಳಿನ ನಡುವೆ ಯುಗಾದಿ ಹಬ್ಬ ಆಗಮಿಸಿದೆ. ನೀರಿನ ಸಮಸ್ಯೆ ಎಲ್ಲೆಡೆ ಕಾಡುತ್ತಿದೆ. ಇದರ ಪರಿಣಾಮ ಯುಗಾದಿ ಮೇಲೂ ಬಿದ್ದಿದೆ. ಈ ಬಾರಿಯ ಶ್ರೀಪ್ಲವ ಸಂವತ್ಸರದ ಯುಗಾದಿ ಸ್ವಾಗತಕ್ಕೆ ಮಾವು, ಬೇವು, ಹೂವು, ದುಬಾರಿಯಾಗಿದೆ. ಹಬ್ಬದ ಸಂಭ್ರಮ ಸಾಧಾರಣವಾಗಿದೆ.

ಚೆಂಡು ಹೂ ₹50, ಕಾಕಡ ಒಂದು ಕೆಜಿಗೆ ₹600, ಕನಕಾಂಬರ, ಮಲ್ಲಿಗೆ, ಮಳ್ಳೆ ಹೂ ಒಂದು ಕೆಜಿಗೆ ₹500, ಬಟನ್ಸ್, ರೋಸ್, ಸೇವಂತಿ ₹200 ಆಗಿದೆ. ಮಾವಿನ ಎಲೆ ₹20ರಿಂದ ₹25ವರೆಗೆ ಮಾರಾಟವಾಗುತ್ತಿದೆ. ಬೇವಿನ ಸೊಪ್ಪು ಬೆಲೆ ಏರಿಕೆಯಾಗಿದೆ. ಇದರೊಂದಿಗೆ ತೆಂಗಿನಕಾಯಿ ಒಂದಕ್ಕೆ 30ರಿಂದ ₹40ಆಗಿದೆ. ಈ ನಡುವೆ ತರಕಾರಿ ಬೆಲೆ ಕುಸಿತವಾಗಿದೆ.

ಈ ಬಾರಿ ಮಾವಿನ ಫಸಲು ಹೆಚ್ಚಾಗಿದೆ. ಮಾವಿನ ಮರಗಳಲ್ಲಿ ಹೂಬಿಟ್ಟು, ಕಾಯಿ ಬರುವ ಸ್ಥಿತಿ ಇರುವುದರಿಂದ ತೋಟಗಳ ಮಾಲೀಕರು ಸೊಪ್ಪು ಕೀಳಲು ಬಿಡದೆ ತೋಟಗಳಿಗೆ ಕಾವಲಿರಿಸಿದ್ದಾರೆ. ಇದರಿಂದಾಗಿ ಊರ ಹೊರಗಿನ ದೊಡ್ಡ ಮರಗಳಲ್ಲಿ ಸಾಹಸ ಮಾಡಿ ಮಾವಿನ ಸೊಪ್ಪು ತರಬೇಕಿರುವುದರಿಂದ ಬೆಲೆ ಸಹಜವಾಗಿ ಹೆಚ್ಚಾಗಿದೆ. ಮಾವಿನ ಹಣ್ಣಿಗಾಗಿ ಹೂ ಬಿಟ್ಟಿರುವ ಮರಗಳಲ್ಲಿ ಮಾವಿನ ಸೊಪ್ಪು ಕೀಳಿಸುವುದಿಲ್ಲ. ಇನ್ನು ಸೊಪ್ಪಿನ ಮರಗಳನ್ನೇ ಹುಡುಕಿ ತರಬೇಕು. ರಸ್ತೆ ಬದಿಯಲ್ಲಿದ್ದ ಮರಗಳು ಈಗ ಕಡಿಮೆಯಾಗಿದೆ. ನಾಲ್ಕಾರು ಮೈಲಿಗಳಿಂದ ತರುವ ಸಾಗಣೆ ವೆಚ್ಚ ಸೇರಿ ಮಾವಿನ ಕುಡಿ ಹೆಚ್ಚಿನ ಬೆಲೆಗೆ ಮಾರಬೇಕಾಗಿದೆ ಎನ್ನುತ್ತಾರೆ ಮಾವಿನ ಸೊಪ್ಪಿನ ಮಾರಾಟಗಾರರು.

ADVERTISEMENT

ಮಾರುಕಟ್ಟೆಯಲ್ಲಿ ಹಬ್ಬಕ್ಕೆಂದೇ ಬೆಲೆ ಹೆಚ್ಚಾಗಿದೆ. ಈಗಾಗಲೇ ಬೆಳೆ, ಬೆಲ್ಲ ಹೆಚ್ಚಾಗಿಯೇ ಇವೆ. ಹಬ್ಬ ಆಚರಿಸಬೇಕಿರುವುದರಿಂದ ಕೊಳ್ಳುವುದು ಅನಿವಾರ್ಯ. ಈ ನಡುವೆ ಕೋವಿಡ್-19 ಆತಂಕದ ನಡುವೆ ಹಬ್ಬ ಮಾಡಲೇಬೇಕಾಗಿದೆ. ಆದರೆ, ಹಿಂದಿನ ಉತ್ಸಾಹ ಈಗಿಲ್ಲ ಎನ್ನುವುದು ಹಲವರ ಅಭಿಪ್ರಾಯ.

ಈ ನಡುವೆಯೂ ಶ್ರೀಪ್ಲವ ಸಂವತ್ಸರದ ಯುಗಾದಿ ಸ್ವಾಗತಕ್ಕೆ ಮಾರುಕಟ್ಟೆ ಪ್ರದೇಶದಲ್ಲಿ ಸಾರ್ವಜನಿಕರು ಹಬ್ಬಕ್ಕೆ ಬೇಕಾದ ಅಗತ್ಯ ವಸ್ತುಗಳ ಖರೀದಿಯಲ್ಲಿ ತೊಡಗಿದ್ದ ದೃಶ್ಯ ಸಾಮಾನ್ಯವಾಗಿತ್ತು. ಕಳೆದ ಸಾರಿ ಯುಗಾದಿಗೆ ಕಾಮಣ್ಣ ಮೂರ್ತಿಗೆ ಪೂಜೆ ಈ ಬಾರಿಯೂ ಇಲ್ಲ.

ಯುಗಾದಿ ವೇಳೆ ಬಯಲು ಸೀಮೆಯಲ್ಲಿ ವಿಶಿಷ್ಟವಾಗಿ ಆಚರಿಸುವ ಕಾಮಣ್ಣಮೂರ್ತಿ ತಣ್ಣಗೆ ಮಾಡುವ ಆಚರಣೆಗೆ ಈ ಬಾರಿಯೂ ಬ್ರೇಕ್ ಬಿದ್ದಿದೆ. ಕಳೆದ ಬಾರಿ ಕೊರೊನಾ ಲಾಕ್‍ಡೌನ್ ನಿಂದಾಗಿ ಆಚರಣೆಗೆ ತಡೆ ನೀಡಲಾಗಿತ್ತು. ಈ ಬಾರಿ ಹುಣ್ಣಿಮೆಯಂದು ಕೆಲ ಪ್ರದೇಶಗಳಲ್ಲಿ ಕಾಮದಹನದ ಕ್ರಿಯೆ ನಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.