ADVERTISEMENT

ಪರಿಶಿಷ್ಟರ ಕುಂದು ಕೊರತೆ ಸಭೆಗೆ ಶಾಸಕರು ನಿರ್ಲಕ್ಷ್ಯ:ಟೀಕೆ

​ಪ್ರಜಾವಾಣಿ ವಾರ್ತೆ
Published 5 ಜನವರಿ 2020, 13:12 IST
Last Updated 5 ಜನವರಿ 2020, 13:12 IST

ದೇವನಹಳ್ಳಿ: ಶಾಸಕರು ಒಂದು ವರ್ಷದಿಂದ ಪರಿಶಿಷ್ಟರ ಕುಂದುಕೊರತೆ ಬಗ್ಗೆ ಸಭೆ ಕರೆದು ಚರ್ಚಿಸದೆ ನಿರ್ಲಕ್ಷ್ಯ ತೋರಿದ್ದಾರೆ ಎಂದು ಮಾದಿಗ ದಂಡೋರ ರಾಜ್ಯ ಸಮಿತಿ ಪ್ರಚಾರ ಘಟಕ ಅಧ್ಯಕ್ಷ ಬುಳ್ಳಹಳ್ಳಿ ರಾಜಪ್ಪ ಆರೋಪಿಸಿದರು.

ಇಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ದೇವನಹಳ್ಳಿ ಮೀಸಲು ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿ ಸಮುದಾಯದಿಂದ ಆಯ್ಕೆಗೊಂಡಿರುವ ಶಾಸಕರು ಒಂದು ವರ್ಷವಾದರೂ ಸಭೆ ಕರೆಯದಿರುವುದು ಸಮುದಾಯದ ಬಗ್ಗೆ ಇರುವ ಮನೋಭಾವವನ್ನು ತೋರಿಸುತ್ತದೆ. ರಾಜ್ಯದ ಇತರೆಡೆ ಪ್ರತಿ ಮೂರು ತಿಂಗಳಿಗೊಮ್ಮೆ ಪರಿಶಿಷ್ಟರ ಕುಂದುಕೊರತೆ ಸಭೆ ನಡೆಸಿ ಸಮಸ್ಯೆಗಳನ್ನು ನಿವಾರಿಸುತ್ತಿದ್ದಾರೆ’ ಎಂದರು.

ಪದೇಪದೇ ತಹಶೀಲ್ದಾರ್ ಬದಲಾವಣೆ, 6 ತಿಂಗಳುಗಳಲ್ಲಿ 12 ತಹಶೀಲ್ದಾರರ ಬದಲಾವಣೆ ನಡೆದಿದೆ. ರೈತರ ಸಂಕಷ್ಟ ಕೇಳುವವರಿಲ್ಲ. ತಾಲ್ಲೂಕು ಆಡಳಿತ ಸಂಪೂರ್ಣ ನಿಷ್ಕ್ರಿಯವಾಗಿದೆ ಎಂದು ದೂರಿದರು.

ADVERTISEMENT

ಗ್ರಾಮ ಪಂಚಾಯಿತಿ ಸದಸ್ಯ ಕೆ.ವಿ.ಸ್ವಾಮಿ ಮತ್ತು ದಲಿತ ಸಂಘರ್ಷ ಸಮಿತಿ ತಾಲ್ಲೂಕು ಪ್ರಧಾನ ಸಂಚಾಲಕ ಅತ್ತಿಬೆಲೆ ನರಸಪ್ಪ ಮಾತನಾಡಿ, ದಲಿತ ಸಮುದಾಯದ ಕುಂದುಕೊರತೆ ಸಭೆ ನಡೆಸದಿದ್ದರೆ ಶಾಸಕರಾಗಿ ಪ್ರಯೋಜನವೇನು. ಸರ್ಕಾರ ಸಭೆ ನಡೆಸುವಂತೆ ಆದೇಶ ನೀಡಿದೆ. ಅದನ್ನು ಪಾಲಿಸುತ್ತಿಲ್ಲ ಎಂದು ಆಕ್ಷೇಪಿಸಿದರು.

18 ತಿಂಗಳಲ್ಲಿ ಒಂದು ಬಾರಿ ಸಭೆ ನಡೆಸಿದರೂ ಸಭೆ ಸಂಪೂರ್ಣವಾಗಲಿಲ್ಲ. ದಲಿತರ ಮೇಲೆ ಹಠ ಸಾಧಿಸುವ ಕೆಲಸ ಮಾಡಬಾರದು. ಸಮಾಜ ಕಲ್ಯಾಣ ಅಧಿಕಾರಿಗಳನ್ನು ಸಭೆ ನಡೆಸಿ ಎಂದರೆ ಶಾಸಕರು ದಿನಾಂಕ ನೀಡುತ್ತಿಲ್ಲ ಎಂದು ಹೇಳುತ್ತಾರೆ ಎಂದು ದೂರಿದರು.

ಕೂಡಲೇ ಸಭೆ ನಡೆಸಬೇಕು ಎಂದು ಒತ್ತಾಯಿಸಿದರು. ಗ್ರಾಮ ಪಂಚಾಯಿತಿ ಸದಸ್ಯ ಸೋಮಶೇಖರ್‌, ಎಚ್.ಕೆ. ವೆಂಕಟೇಶಪ್ಪ, ಭುವನಹಳ್ಳಿ ಆನಂದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.