ADVERTISEMENT

ನಿಮಾನ್ಸ್‌ನಲ್ಲಿ ಮೊಬೈಲ್‌ ಚಟ ಬಿಡಿಸುವ ಕೇಂದ್ರ ಆರಂಭ

​ಪ್ರಜಾವಾಣಿ ವಾರ್ತೆ
Published 5 ಜನವರಿ 2020, 13:29 IST
Last Updated 5 ಜನವರಿ 2020, 13:29 IST
ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು
ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು   

ದೊಡ್ಡಬಳ್ಳಾಪುರ: ‘ಬೆಂಗಳೂರಿನ ನಿಮ್ಹಾನ್ಸ್‌ ಆಸ್ಪತ್ರೆಯಲ್ಲಿ ಮಕ್ಕಳಲ್ಲಿನ ಮೊಬೈಲ್‌ ಚಟ ಬಿಡಿಸುವ ಕೇಂದ್ರ ತೆರೆಯಲಾಗಿದೆ. ಇದು ರಾಜ್ಯದಲ್ಲೇ ಪ್ರಥಮ’ ಎಂದು ಶ್ರೀರಾಮ ಆಸ್ಪತ್ರೆಯ ಡಾ.ಎಚ್‌.ಜಿ.ವಿಜಯ ಕುಮಾರ್‌ ಹೇಳಿದರು.

ಇಲ್ಲಿನ ಗೀತಾಂಜಲಿ ಪಬ್ಲಿಕ್‌ ಸ್ಕೂಲ್‌ನಲ್ಲಿ ನಡೆದ ಶಾಲಾ ವಾರ್ಷಿಕೋತ್ಸವ ಸಮಾರಭದಲ್ಲಿ ಅವರು ಮಾತನಾಡಿದರು.

‘ಮೊಬೈಲ್‌ ಚಟವೂ ಇತರ ಚಟಗಳಂತೆ ಮಕ್ಕಳ ಬದುಕನ್ನು ಹಾಳುಮಾಡುತ್ತದೆ. ಯುವ ಸಮುದಾಯದ ದಿಢೀರ್‌ ನಿರ್ಧಾರ ಹಾಗೂ ಆತ್ಮಹತ್ಯೆಗೆ ಅತಿಯಾದ ಮೊಬೈಲ್‌ ಚಟವೇ ಕಾರಣ. ಮಕ್ಕಳು ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಲು ಪೋಷಕರು ಟಿವಿ, ಮೊಬೈಲ್‌ ಅತಿ ಬಳಕೆ ನಿಲ್ಲಿಸಬೇಕು ಎಂದರು.

ADVERTISEMENT

‘ಹಣದಿಂದ ಆರೋಗ್ಯ ಸುಧಾರಣೆಯಾಗುತ್ತದೆ ಎಂಬ ಭ್ರಮೆ ಬೇಡ. ಆರೋಗ್ಯದ ಬಗ್ಗೆ ಪ್ರತಿಯೊಬ್ಬರು ಕನಿಷ್ಠ ತಿಳಿವಳಿಕೆ ಹೊಂದಿರಬೇಕು. ದೈಹಿಕ ಚಟುವಟಿಕೆ, ಆಹಾರ ಸೇವನೆಯ ಅರಿವು ಹೊಂದಬೇಕು’ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಬೈಯ್ಯಪ್ಪರೆಡ್ಡಿ ಮಾತನಾಡಿ, ‘ಅವಿಷ್ಕಾರಗಳೇ ಇಂದು ಸವಾಲಾಗಿ ಪರಿಣಮಿಸುತ್ತಿವೆ. ಬಹುತೇಕ ತಾಯಂದಿರು ಸಂಜೆ ವೇಳೆ ಟಿವಿ ಮುಂದೆ ಕುಳಿತು ಕಾಲ ಕಳೆದರೆ ಮಕ್ಕಳೂ ಅದನ್ನೇ ಅನುಸರಿಸುತ್ತಾರೆ. ನಿರೀಕ್ಷೆಯಂತೆಯೇ ಮಕ್ಕಳು ಬೆಳೆಯಬೇಕು ಎಂದರೆ ಅವರೊಂದಿಗೆ ಹೆಚ್ಚಿನ ಸಮಯ ಕಳೆಯಬೇಕು. ನಿತ್ಯದ ಎಲ್ಲ ವ್ಯವಹಾರಗಳು ತಿಳಿಯುವಂತಹ ಅವಕಾಶ ಕಲ್ಪಿಸಬೇಕು’ ಎಂದು ಹೇಳಿದರು.

ಸಮಾರಂಭದಲ್ಲಿ ಪ್ರತಿಭಾವಂತ ಮಕ್ಕಳಿಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು. ಗೀತಾಂಜಲಿ ಪಬ್ಲಿಕ್‌ ಸ್ಕೂಲ್‌ ಅಧ್ಯಕ್ಷೆ ರಾಜೇಶ್ವರಿ, ಕಾರ್ಯದರ್ಶಿ ಎಚ್‌.ಸಿ.ರಂಗನಾಥ್‌, ಪ್ರಾಂಶುಪಾಲರಾದ ಎಚ್‌.ಆರ್‌.ಮಾಧುರಿ, ಮೋಹನ್‌ ಕುಮಾರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.